ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಶ್ರೀಸಾಮಾನ್ಯರ ಸಾಧನೆ

Last Updated 27 ಡಿಸೆಂಬರ್ 2021, 1:23 IST
ಅಕ್ಷರ ಗಾತ್ರ

‘ಚೀನಾದಾಗೆ ಜಾಸ್ತಿ ಮಕ್ಕಳನ್ನು ಹೆರೋದಕ್ಕಂತ ಸಾಲ, ಮತ್ತ ಏನೇನೋ ಸೌಲಭ್ಯ ಕೊಡ್ತಾರಂತ. ಅಲ್ಲಿಗೆ ಹೋಗೂದೆ ಛಲೋ’ ಎಂದು ಬೆಕ್ಕಣ್ಣ ಉದ್ಗರಿಸಿತು.

‘ಅದ್ ನಿಮಗಲ್ಲಲೇ, ಮನುಷ್ಯಾರಿಗಿ ಕೊಡ್ತಾರ. ಅಲ್ಲಿ ಕುಟುಂಬಕ್ಕೆ ಒಂದೇ ಮಗು ಅಂತ ರೂಲ್ಸು ಮಾಡಿ, ಈಗ ಎಲ್ಲಿ ನೋಡಿದ್ರೂ ಬರೇ ಮುದುಕರೇ ಕಾಣ್ತಾರಂತ. ಅದಕ್ಕ, ಹಿಂಗಾದ್ರ ಹದಿನೈದು ಟ್ರಿಲಿಯನ್ ಡಾಲರ್ ಜಿಡಿಪಿ ಹೆಂಗ ಮುಟ್ಟೂದು ಅಂತ ಹೆದರಿ, ಜಾಸ್ತಿ ಮಕ್ಕಳು ಹೆತ್ತವರಿಗಿ ಎಲ್ಲಾ ಸೌಲಭ್ಯ ಕೊಡತೀವಂತ ಸರ್ಕಾರ ಹೇಳೈತಿ’ ಎಂದೆ.

‘ನೀವ್ ಮನುಷ್ಯಾರು ಬಿಡವ್ವಾ... ಇಡೀ ಭೂಮಿ ನಿಮ್ಮದಷ್ಟೇ ಅಂದಕಂಡು ಏನೇನೋ ರೂಲ್ಸು ಮಾಡತೀರಿ. ಸುಡುಗಾಡು ಅಭಿವೃದ್ಧಿ ಹೆಸರಿನಾಗೆ ಎಲ್ಲಾ ಹಾಳು ಮಾಡತೀರಿ. ಭೂಮಿ ಮ್ಯಾಗ ನಿಮ್ಮದೆಷ್ಟ್ ಹಕ್ಕು ಐತೋ ನಾವು ಪ್ರಾಣಿಗೋಳು, ಗಿಡಮರಗಳಿದ್ದೂ ಅಷ್ಟೇ ಹಕ್ಕು ಐತಿ ಅನ್ನೂದನ್ನೇ ಮರಿತೀರಿ’ ಎಂದು ನನ್ನ ಮುಖಕ್ಕೆ ಕ್ಯಾಕರಿಸಿ ಉಗುಳಿತು. ನಾ ತೆಪ್ಪಗಿದ್ದೆ.

‘ಅದ್ಸರಿ, 2021 ಮುಗಿಲಾಕ ಬಂತು, ಭಾರತೀಯರು ಏನು ಸಾಧನೆ ಮಾಡೀರಿ?’ ಎಂದು ಕಟಕಿಯಾಡಿತು.

‘ಯಾಕಲೇ ಹಂಗಂತಿ... ಈ ವರ್ಷ ಒಲಿಂಪಿಕ್ಸಿನಾಗೆ, ಪ್ಯಾರಾಒಲಿಂಪಿಕ್ಸಿನಾಗೆ ನಮ್ಮ ಆಟಗಾರ‍್ರು ಎಷ್ಟಕೊಂದು ಚಿನ್ನ, ಬೆಳ್ಳಿ, ಕಂಚಿನ ಪದಕ ತಗಂಡಾರೆ. ಇತ್ತ ನಮ್ಮ ಕರುನಾಡಿನಾಗ ಯಂಗ್ ಆಂಡ್ ಎನೆರ್ಜೆಟಿಕ್ ಬೊಮ್ಮಾಯಿ ಅಣ್ಣಾರು ಸಿಎಂಪಿಕ್ಸಿನಾಗೆ ಕುರ್ಚಿ ಗೆದ್ದಾರೆ. ಇವೆಲ್ಲಾ ಸಾಧನೆ ಅಲ್ಲೇನ್’ ನಾನು ಹೆಮ್ಮೆಯಿಂದ ಉಲಿದೆ.

‘ನೀವು ಶ್ರೀಸಾಮಾನ್ಯರು ಏನ್ ಸಾಧನೆ ಮಾಡೀರಿ?’.

‘ತೆಲಿ ಮ್ಯಾಲೆ ಕೊರೊನಾ ಕರಿನೆರಳು, ಬೆನ್ನಿನ ಮೇಲೆ ಜಿಎಸ್‌ಟಿ ಬರೆ, ಪೆಟ್ರೋಲು, ಡೀಸೆಲು, ದಿನಸಿ, ತರಕಾರಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಯೇರಿಕೆ ಬಾಸುಂಡೆ ಬಿದ್ದರೂ ಶ್ರೀಸಾಮಾನ್ಯರು ಇನ್ನಾ ಬದುಕುಳಿದೀವಲ್ಲ... ಇದೇನ್ ಸಾಧನೆ ಅಲ್ಲೇನ್’.

‘ಬರೆ ಮೇಲೆ ಬರೆ ಬಿದ್ದರೂ ಅಚ್ಛೇ ದಿನ್ ಅಂತ ಗುಣಗಾನ ಮಾಡೂದೇ ಶ್ರೀಸಾಮಾನ್ಯರ ಅಸಾಮಾನ್ಯ ಸಾಧನೆ’ ಎನ್ನುತ್ತ ಬೆಕ್ಕಣ್ಣ ಮುಸಿಮುಸಿ ನಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT