ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಕೆರಿಟೇಜ್ ವಾಕ್

Last Updated 27 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

‘ನೋಡಿ ಸಾ, ಕನ್ನಡ ಕಲಿಯಕಾಗಕುಲ್ಲ ಅಂತ ಹತ್ತೊರ್ಸದ ಹುಡುಗ ಹೈಕೋರ್ಟಿಗೆ ಅರ್ಜಿ ಹಾಕ್ಯವನಂತೆ. ಇದರಿಂದ ಭಾರಿ ತೊಂದರಾಗ್ಯದೆ ಅಂತ ಅಂದವನಂತೆ. ಆ ಚಿಕ್ಕುಡುಗ ಭಾರಿ ಬುದುವಂತ ಇರಬೇಕು ಅಲ್ಲುವರಾ?’ ತುರೇಮಣೆಗೆ ಕೇಳಿದೆ.

‘ನಮ್ಮ ರಾಜ್ಯಪಾಲರೇ ಕನ್ನಡ ಕಲೀತಿನಿ ಅಂತ ಹೊಂಟವ್ರೆ! ಆ ಪಡ್ಡೆಗೇನು ಬಂದದೆ? ಹಿಂಗಾಗೇ ನೋಡಪ್ಪ ಕನ್ನಡ ಹೋಗಿ ಕಾಡು ಸೇರಿಕ್ಯಂಡದೆ!’ ಯಂಟಪ್ಪಣ್ಣ ಬೇಜಾರು ಮಾಡಿಕ್ಯತ್ತು.

‘ಕಾಡು ಅಂದಾಗ ಜ್ಯಪ್ತಿಗೆ ಬಂತು. ಬನ್ನೇರು ಘಟ್ಟದೇಲಿ ಚಿರತೆ ಸಫಾರಿ ಮಾಡ್ಯಾರಂತೆ. ಅವುಗುಳ ಪಾಡಿಗೆ ಅವು ಕಾಡಲ್ಲಿರತವೆ. ನಾವು ರಾವುಗೆಟ್ಟೋರಂಗೆ ಹೋಗಿ ಅವುನ್ನ ಕಾಡಬೇಕಾ?’ ಇದು ನನ್ನ ಪ್ರಶ್ನೆಯಾಗಿತ್ತು.

‘ನೋಡ್ಲಾ ಬೊಡ್ಡಿಹೈದ್ನೆ, ಈಗ ಮಾಡಬೇಕಾದ್ದು ಕಾಡಲ್ಲಿ ಚಿರತೆ ಸಫಾರಿ ಅಲ್ಲಾ ಕಲಾ. ವನ್ಯಜೀವಿಗಳ ಸಂಖ್ಯೆ ಜಾಸ್ತಿಯಾಗ್ಯದೆ ಅಂತ ಸಚಿವರೇ ಹೇಳ್ಯವುರೆ! ಇವೆಲ್ಲಾ ಕಾಡಲ್ಲಿ ಜಾಗಿಲ್ದೆ ಬಂದು ನಮ್ಮ ಮಧ್ಯೆ ಸೇರಿಕ್ಯಂಡವೆ ಅಂತ ಜನಕ್ಕೆ ತೋರಿಸೋ ಮೃಗಯಾವಿಹಾರ ಮಾಡಬೇಕು ಕನ್ರೋ!’ ಅಂದ್ರು ತುರೇಮಣೆ.

‘ಇವೆಲ್ಲಾ ಬ್ಯಾರೆ ರೂಪದೇಲಿ ನಮ್ಮ ಬಡ್ಡೆಲೇ ಕುತುಗಂಡು ಅಡ್ಡಿಸಡ್ಡಿ ಇಲ್ದೆ ಮೆರಿತಾವೆ ಅಂತ್ಲೋ ನೀವನ್ನದು?’ ಸೋಗು ಹಾಕಿದೆ.

‘ನೋಡ್ಲಾ, ಕಾಸಿಲ್ದೆ ಕಂಗೆಟ್ಟಿರೋ ಸರ್ಕಾರ ಆದಾಯ ಜಾಸ್ತಿ ಮಾಡಿಕ್ಯಬಕು ಅಂದ್ರೆ ಲೋಪ ಸೇವಾ ಆಯೋಗದೇಲಿ ಉಂಡೆದ್ದೋದೋರು, ಐದು ವರ್ಸದೇಲಿ ರೋಡಿಗೆ 20,000 ಕೋಟಿ ತಿಂದು ತೇಗಿದೋರು, ಇಲಾಖೆಗಳನ್ನು ಮಾರಿ ಮಸಾಲೆದೋಸೆ ತಿಂದೋರು, ಬೆಂಗಳೂರು ಪಾಲಾಕ್ಯಂಡಿರೋ ಬಿಬಿಎಂಪಿ, ಬಿಡಿಎ ಉಂಡಾಡಿಗಳು, ರಾಜಕೀಯದ ಸ್ವಯಂಜೂ ವಿಧಾನಸೌಧ, ವಿಕಾಸಸೌಧದೇಲಿ ಇರೋ ಕೇಡು ಪ್ರಾಣಿಗಳ ತೋರಿಸಿ ಸಫಾರಿ ಮಾಡ್ತೀವಿ ಅಂದ್ರೆ ಜನ ಅಡ್ವಾನ್ಸ್ಡ್‌ ಬುಕಿಂಗ್ ಮಾಡಿಕ್ಯಂದು ಬತ್ತರೆ!’ ಅಂದ್ರು.

‘ಹೌದೇಳ್ರಿ ಸಾ! ಸ್ವಾಹಾಲಂಬಿಗಳನ್ನ ತೋರಿಸೋ ಕೆರಿಟೇಜ್ ವಾಕಿಗೆ ಆಷಾಢಭೂತಿ ಟ್ರಾನ್ಸ್‌ಪೋರ್ಟ್ ಬಸ್ಸೇ ಬೇಕಾಯ್ತದೆ!’ ಅಂತ ಕುಶಾಲು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT