ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NEP ಚರ್ಚೆ: ಶಿಕ್ಷಣ ನೀತಿಯನ್ನು ಕೇಂದ್ರವು ರಾಜ್ಯಗಳ ಮೇಲೆ ಹೇರಲಾಗದು– MC ಸುಧಾಕರ್ ಲೇಖನ

ರಾಷ್ಟ್ರೀಯ ಶಿಕ್ಷಣ ನೀತಿಗೆ ರಾಜ್ಯ ರೂಪಿಸುವ ನೀತಿಯು ಪರ್ಯಾಯ ಆಗಬಹುದೇ?
Published 15 ಜುಲೈ 2023, 0:32 IST
Last Updated 15 ಜುಲೈ 2023, 0:32 IST
ಅಕ್ಷರ ಗಾತ್ರ

The Future depends on what we do in the present – ಗಾಂಧಿ

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮೇಲಿನ ಮಾತುಗಳು ಶಿಕ್ಷಣದ ವಿಚಾರದಲ್ಲಿ ಬಹುಮುಖ್ಯವಾಗಿ ಕಾಣುತ್ತದೆ. ಏಕೆಂದರೆ, ಯಾವುದೇ ಕಲಿಕೆಯ ಆರಂಭ ತಳಪಾಯದಿಂದಲೇ ಹೊರತು ಮೇಲ್ಮಟ್ಟದಲ್ಲಿ ಅಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಅಡಿಪಾಯ ಭದ್ರವಾದಷ್ಟು ಉನ್ನತ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗಿರಲು ಸಾಧ್ಯ ಎಂಬುದನ್ನು ಬಲವಾಗಿ ನಂಬಿರುವವನು ನಾನು. ಒಂದು ಸರ್ಕಾರದ ಉನ್ನತ ಶಿಕ್ಷಣ ಸಚಿವ ಎಂಬುದರ ಜೊತೆಗೆ ಸಮಾಜದ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿಯೂ ಶಿಕ್ಷಣದ ಪ್ರಗತಿ ಮತ್ತು ಆಗುಹೋಗುಗಳನ್ನು ಪರಿಭಾವಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ.

ಶಿಕ್ಷಣದ ನೀತಿ ಬಗ್ಗೆ ಸರ್ಕಾರಗಳ ಜವಾಬ್ದಾರಿ ಅತ್ಯಂತ ಮುಖ್ಯವಾದದ್ದು. ಬೌದ್ಧಿಕ ಮತ್ತು ಮಾನಸಿಕ ವಿಕಸನದ ಮಾರ್ಗವಾಗಿರುವುದರಿಂದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರಗಳು ಅತ್ಯಂತ ಎಚ್ಚರಿಕೆಯಿಂದ ಕೂಡಿರಬೇಕು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಭದ್ರ ಬುನಾದಿಯ ಮೇಲೆ ನಿರ್ಮಾಣ ಮಾಡುವಂತಹ ಮನಸ್ಥಿತಿಯದ್ದಾಗಿರಬೇಕು. ಹಾಗೇ ಶಿಕ್ಷಣ ಎಂಬುದು ನಿಂತ ನೀರಾಗದೇ ಚಲನಶಕ್ತಿಯುಳ್ಳ ಅಸ್ತ್ರವಾಗಿ ನಾಡು-ನುಡಿ, ದೇಶದ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಸಂವಿಧಾನಬದ್ಧವಾಗಿ ರೂಪುಗೊಳ್ಳಬೇಕು. ನಮ್ಮ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಬೇಕು ಎಂಬುದು ನನ್ನ ಹಾಗೂ ನಮ್ಮ ಸರ್ಕಾರದ ಸ್ಪಷ್ಟ ಅಭಿಪ್ರಾಯ. 

ರಾಜ್ಯ ಶಿಕ್ಷಣ ನೀತಿ ಯಾಕೆ ಬೇಕು?: ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರ ನಿರ್ಮಾಣದ ಜೊತೆಗೆ ರಾಜ್ಯಗಳನ್ನು ಬಲಿಷ್ಠಗೊಳಿಸುವುದೂ ಒಂದು ಮಹತ್ವದ ವಿಚಾರ. ನಮ್ಮದು ಬಹು ಸಂಸ್ಕೃತಿಯ ನಾಡು, ವಿಭಿನ್ನ ಪ್ರಾದೇಶಿಕತೆಗಳನ್ನು ಹೊಂದಿರುವ, ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಬೇರೆ ಬೇರೆಯ ಪರಿಸ್ಥಿತಿಗಳನ್ನು ಹೊಂದಿರುವ ರಾಜ್ಯಗಳು ನಮ್ಮಲ್ಲಿವೆ. ಪ್ರತಿ ರಾಜ್ಯವು ಸಂವಿಧಾನಬದ್ಧವಾದ ಮೌಲ್ಯಗಳೊಂದಿಗೆ ಬಹುತ್ವ-ಸಮಗ್ರತೆ- ಐಕ್ಯತೆ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ದಿಸೆಯಲ್ಲಿ  ನಮ್ಮ ಶಿಕ್ಷಣ ನೀತಿಗಳು ರೂಪುಗೊಳ್ಳಬೇಕಾಗಿದೆ.

ಸಂವಿಧಾನದ ಮೂಲಭೂತ ಹಕ್ಕಿನ ಪ್ರಕಾರ, ಶಿಕ್ಷಣ ಹಕ್ಕು ಕಾನೂನು ರೂಪಿಸಿದಾಗ ವಿಧಿ 21ಎ ಅನುಷ್ಠಾನಗೊಳಿಸಲು ಪ್ರಕರಣ 7 ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿಯನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಆ ಪ್ರಕಾರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ವಿಶಾಲ ತಳಹದಿಯ ಮೇಲೆ ಒಂದು ವಿಸ್ತೃತ ಚೌಕಟ್ಟು ಅಥವಾ ಮಾರ್ಗಸೂಚಿಯನ್ನು ನೀಡಬಹುದೇ ಹೊರತು ಯಾವುದನ್ನೂ ಬಲವಂತವಾಗಿ ಹೇರಲು ಬರುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಎನ್‌ಇಪಿ ಒಂದು ಮಾರ್ಗಸೂಚಿಯೇ ಹೊರತು ರಾಷ್ಟ್ರೀಯ ಶಿಕ್ಷಣ ನೀತಿ ಆಗುವುದಿಲ್ಲ. ಹಾಗಾಗಿ ಶಿಕ್ಷಣ ನೀತಿ ರೂಪಿಸುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರ.

ಎನ್‌ಇಪಿಗೆ ಏಕೆ ವಿರೋಧ?: ಮೊದಲನೆಯದಾಗಿ 2020ರ ಎನ್‌ಇಪಿಯನ್ನು ಜಾರಿಗೆ ತಂದ ಕ್ರಮವೇ ಸರಿಯಿಲ್ಲ. ಒಂದು ರಾಷ್ಟ್ರವನ್ನು ಕಟ್ಟುವುದೇ ಶಿಕ್ಷಣದ ಬುನಾದಿ ಮೇಲೆ, ಹಾಗಿರುವಾಗ ಒಂದು ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೆ ತಂದರೆ ಏನಿದರ ಅರ್ಥ? ಕೇಂದ್ರ ಬಿಜೆಪಿ ಸರ್ಕಾರ ತನ್ನದೇ ಆಡಳಿತವಿರುವ ಇತರ ರಾಜ್ಯಗಳಲ್ಲಿ ಇನ್ನೂ ಜಾರಿಗೆ ತರದ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಜಾರಿ ಮಾಡುವ ತುರ್ತು ಏನಿತ್ತು? ಅದೂ ಅಲ್ಲದೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಿಂದ ಅರಂಭಗೊಳ್ಳಬೇಕಾದ ಶೈಕ್ಷಣಿಕ ಬದಲಾವಣೆ ಕಾರ್ಯವನ್ನು ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಜಾರಿಗೆ ತಂದಿದ್ದರ ಔಚಿತ್ಯ ಏನು? ಪ್ರಾಥಮಿಕ ಶಿಕ್ಷಣದಲ್ಲಿ ಪಠ್ಯ ಪುಸ್ತಕಗಳಲ್ಲಿನ ಪಠ್ಯಗಳನ್ನು ಬದಲಾವಣೆ ಮಾಡುವ ಮೂಲಕ ಮಕ್ಕಳಲ್ಲೇ ಕೋಮುವಾದಿ ಮನಸ್ಥಿತಿ ಬೆಳವಣಿಗೆಗೆ ನಾಂದಿ ಹಾಡಿದ್ದಾರೆ ಎಂದ ಮೇಲೆ ಇವರ ಎನ್‌ಇಪಿಯ ಉದ್ದೇಶವೇನು ಎಂಬ ಪ್ರಶ್ನೆ ಮೂಡುತ್ತದೆ.

ಇಷ್ಟು ದೊಡ್ಡದಾದ ಪ್ರಜಾಪ್ರಭುತ್ವದ ರಾಷ್ಟದಲ್ಲಿ ಒಂದು ಶಿಕ್ಷಣ ನೀತಿ ತರುವಾಗ ಆಗಬೇಕಾದ ಚರ್ಚೆಗಳು, ಬದಲಾವಣೆಯ ಸಾಧಕ ಬಾಧಕಗಳು, ಶಿಕ್ಷಣ ವ್ಯವಸ್ಥೆಯ ಮಿತಿಗಳು, ಬೋಧಕ ಸಿಬ್ಬಂದಿಯ ತಯಾರಿ ಬಹುಮುಖ್ಯವಾಗುತ್ತವೆ. ಯಾವುದೇ ಸಿದ್ಧತೆಗಳಿಲ್ಲದೆ ಜಾರಿಗೆ ತಂದಾಗ ವಿಕಸನದ ಹಾದಿಯಲ್ಲಿರುವ ವಿದ್ಯಾರ್ಥಿಗಳ ಮೇಲೆ ಶಿಕ್ಷಣದ ಬಲಪ್ರಯೋಗ ಮಾಡಿದಂತಾಗುತ್ತದೆ ಎಂಬ ಅರಿವು ಕೇಂದ್ರ ಸರ್ಕಾರ ಹಾಗೂ ರಾಜ್ಯದ ಈ ಹಿಂದಿನ ಸರ್ಕಾರಕ್ಕೆ ಇರಬೇಕಿತ್ತು. ರಾಜಕೀಯ ಓಲೈಕೆ ಮತ್ತು ಲಾಭಕ್ಕಾಗಿ ಶಿಕ್ಷಣ ವ್ಯವಸ್ಥೆಯನ್ನು ಬಳಸಿಕೊಳ್ಳುವುದೇ ಎನ್‌ಇಪಿ ಜಾರಿಯ ಮೂಲ ಉದ್ದೇಶವಾಗಿದೆ. ಹೀಗೆ ಒಂದು ಪೂರ್ವಭಾವಿ ಸಿದ್ಧತೆಯೇ ಇಲ್ಲದ ನೀತಿಯನ್ನು ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಹೇರುವಿಕೆಯ ಮೂಲಕ ಒಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಸರ್ಕಾರ ಕೇಂದ್ರದ ಈ ಎನ್‌ಇಪಿಯನ್ನು ಬಲವಾಗಿ ವಿರೋಧಿಸುತ್ತದೆ.

ಎನ್‌ಇಪಿ ಜಾರಿಯಿಂದ ಆಗಿರುವ ಸಮಸ್ಯೆಗಳೇನು?: ಮೊದಲನೆಯದಾಗಿ ಎನ್‌ಇಪಿಯನ್ನು ರಾಜ್ಯದ ಉನ್ನತ ಶಿಕ್ಷಣದಲ್ಲಿ ದಿಢೀರ್‌ ಅನುಷ್ಠಾನಕ್ಕೆ ತರುವ ಮೂಲಕ ಈ ಹಿಂದಿನ ಸರ್ಕಾರ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಗೊಂದಲ ಸೃಷ್ಟಿಸಿದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿನ ಮೂಲಭೂತ ಸೌಲಭ್ಯಗಳ ಸಮಸ್ಯೆ, ಸಿಬ್ಬಂದಿ ಕೊರತೆ ಇರುವಾಗ ಅವುಗಳ ಪರಿಹಾರಕ್ಕೆ  ಆದ್ಯತೆ ಆಗಬೇಕಿತ್ತು. ಆ ಪ್ರಯತ್ನವೇ ನಡೆದಿಲ್ಲ.

ಉನ್ನತ ಶಿಕ್ಷಣದ 3 ವರ್ಷದ ಪದವಿ ಹಂತವನ್ನು 4 ವರ್ಷಗಳಿಗೆ ವಿಸ್ತರಣೆ, ಬಹು ಆಗಮನ ಮತ್ತು ನಿರ್ಗಮನ ಪದ್ಧತಿ ಜಾರಿಯಿಂದ ಕಾಲೇಜಿನಿಂದ ನಿರ್ಗಮಿಸಿದ ವಿದ್ಯಾರ್ಥಿಗಳಿಗೆ ಒಂದು ಪ್ರಮಾಣ ಪತ್ರ ಸಿಗುವುದು ಬಿಟ್ಟರೆ, ಉದ್ಯೋಗದ ಸ್ಥಿತಿಗಳೇನು ಎಂಬುದೇ ಸ್ಪಷ್ಟವಿಲ್ಲ. ಪದವಿಯಲ್ಲಿ 3 ಐಚ್ಛಕ ವಿಷಯಗಳನ್ನು ಓದುತ್ತಿದ್ದ ವಿದ್ಯಾರ್ಥಿಗೆ ಈಗ 2 ಮಾತ್ರ ಓದುವ ಅವಕಾಶ, ಉಳಿದಂತೆ ಇತರೆ ವಿಷಯಗಳ ಮುಕ್ತ ಆಯ್ಕೆ ವಿದ್ಯಾರ್ಥಿಗಳದ್ದಾಗಿರುತ್ತದೆ. ಆದರೆ, ಆಯ್ಕೆ ಮಾಡಿಕೊಂಡ ವಿಷಯದ ಉಪನ್ಯಾಸಕರ ಕೊರತೆ ಇದೆ. ಆನ್‍ಲೈನ್ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯ ನಮ್ಮಲ್ಲಿ ಕಷ್ಟಸಾಧ್ಯ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ನಾವು ಆ ತಯಾರಿ ಮಾಡಿಲ್ಲ. ಎನ್‌ಇಪಿ-2020ರಲ್ಲಿ ಉತ್ತಮ ಅಂಶಗಳಿದ್ದಲ್ಲಿ ಅದನ್ನು ಸ್ವೀಕರಿಸುವ ಮುಕ್ತ ಮನೋಭಾವ ನಮ್ಮ ಸರ್ಕಾರಕ್ಕಿದೆ. ವಿಪರ್ಯಾಸ ಎಂದರೆ ಎನ್‌ಇಪಿ ರೂಪಿಸಿದ  ಟಿ.ಆರ್.ಎಸ್ ಸುಬ್ರಮಣಿಯನ್ ಹಾಗೂ ಡಾ.ಕೆ ಕಸ್ತೂರಿರಂಗನ್ ಸಮಿತಿಗಳಲ್ಲಿ ಶಿಕ್ಷಣ ತಜ್ಞರೇ ಇರಲಿಲ್ಲ. 

ಯಾವುದೇ ಶಿಕ್ಷಣ ನೀತಿಯನ್ನು ಜಾರಿಗೆ ತರುವಾಗ ಕಾಲೇಜುಗಳ ಉಪನ್ಯಾಸಕರಿಗೆ ತರಬೇತಿ ಮತ್ತು ಅವರ ಅಭಿಪ್ರಾಯ ಸಂಗ್ರಹ ಅಮೂಲ್ಯವಾದದ್ದು. ಆದರೆ ಆ ಪ್ರಯತ್ನಗಳೇ ನಡೆಯದೆ ಎನ್‌ಇಪಿ ತಂದ ಪರಿಣಾಮ ಪದವಿ ವಿದ್ಯಾರ್ಥಿಗಳಂತೆ ಕಾಲೇಜು ಉಪನ್ಯಾಸಕರಲ್ಲೂ ಗೊಂದಲ ಉಂಟಾಗಿರುವುದನ್ನು ಕಾಣಬಹುದು. ಈಗಾಗಲೇ 3ನೇ ವರ್ಷಕ್ಕೆ ಕಾಲಿಟ್ಟು ಎನ್‌ಇಪಿ ಅಡಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಧಕ್ಕೆ ಆಗದಂತೆ ಸೂಕ್ತ ಮಾರ್ಪಾಡು ಮಾಡುತ್ತಿದ್ದೇವೆ.

ನಮ್ಮ ಸರ್ಕಾರ ಯಾವುದೇ ಪೂರ್ವಗೃಹವಿಲ್ಲದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲೂ ಅನನುಕೂಲವಾಗದಂತೆ ಜವಾಬ್ದಾರಿ ಹಾಗೂ ಬದ್ಧತೆಯಿಂದ ಶಿಕ್ಷಣ ನೀತಿ ರೂಪಿಸಲು ಸಜ್ಜಾಗತೊಡಗಿದೆ. ಶಿಕ್ಷಣ ನೀತಿಯ ಸಾಧಕ ಬಾಧಕಗಳನ್ನು ಅಧ್ಯಯನ, ಶಿಕ್ಷಣ ತಜ್ಞರೊಂದಿಗೆ ಮುಕ್ತ ಸಮಾಲೋಚನೆ, ಚರ್ಚೆ ಮೂಲಕ ನೀತಿ ರೂಪಿಸಲು ಮುಂದಾಗಿದ್ದೇವೆ. ನಮ್ಮ ಹೊಸ ಶಿಕ್ಷಣ ನೀತಿ ಭಾರತ ಸಂವಿಧಾನಕ್ಕೆ ಬದ್ಧವಾಗಿ ನಮ್ಮ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉದ್ಯೋಗ ಆಧಾರಿತವಾಗಿ ಇರುತ್ತದೆ. ಈಗ ನಾವು ಉದ್ಯೋಗ ನೀಡಬೇಕು, ಇಲ್ಲವೇ ಸ್ವಉದ್ಯೋಗ ಆರಂಭಿಸುವಂತಹ ಜ್ಞಾನವನ್ನು, ಆತ್ಮ ವಿಶ್ವಾಸವನ್ನು ತುಂಬಬಲ್ಲಂತಹ ಶಿಕ್ಷಣ ವ್ಯವಸ್ಥೆಗೆ ಹೆಜ್ಜೆ ಇಟ್ಟಿದ್ದೇವೆ.

ವಿದ್ಯಾವಂತ ವಿದ್ಯಾರ್ಥಿಗಳೇ ಈ ನಾಡಿನ ಆಸ್ತಿ ಎಂಬುದು ನಮ್ಮ ಕಲ್ಪನೆ. ರಾಜ್ಯ ಶಿಕ್ಷಣ ನೀತಿ ನಮ್ಮ ಶಿಕ್ಷಣವನ್ನು ಹೆಚ್ಚು ಬಲಿಷ್ಠವನ್ನಾಗಿ ಮಾಡುತ್ತದೆ ಎಂಬುದಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ನಾವು ಅಳವಡಿಸಿಕೊಂಡು ಬಂದಿರುವ ನೀತಿಯೇ ಸಾಕ್ಷಿ. ಕಾಲಕಾಲಕ್ಕೆ ಪಠ್ಯಕ್ರಮಗಳನ್ನು ಬದಲು ಮಾಡುತ್ತಲೇ ಶಿಕ್ಷಣದ ಜ್ಞಾನವೂ ಹರಿದಿದೆ. ಅದನ್ನು ವ್ಯವಸ್ಥಿತವಾಗಿ, ಅರ್ಥಪೂರ್ಣವಾಗಿ, ಸಂವಿಧಾನಬದ್ಧವಾಗಿ ಮುನ್ನಡೆಸಿಕೊಂಡು ಹೋಗುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ.

ಲೇಖಕ: ಉನ್ನತ ಶಿಕ್ಷಣ ಸಚಿವ, ಕರ್ನಾಟಕ ಸರ್ಕಾರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT