ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೊಳಚೆ ನೀರು ಶುದ್ಧೀಕರಿಸದಿದ್ದರೆ ಜಲಮೂಲಗಳಿಗೆ ಕಾದಿದೆ ಅಪಾಯ

Last Updated 2 ಮಾರ್ಚ್ 2021, 3:58 IST
ಅಕ್ಷರ ಗಾತ್ರ

ಮಾನವನ ಬದುಕಿನ ಅಗತ್ಯಗಳಲ್ಲಿ ಜೀವಜಲಕ್ಕೆ ಅಗ್ರಸ್ಥಾನ. ಭೂಮಿಯಲ್ಲಿ ಲಭ್ಯವಿರುವ ನೀರಿನಲ್ಲಿ ಶೇ 3ರಷ್ಟು ಮಾತ್ರ ಕುಡಿಯಲು ಯೋಗ್ಯವಾಗಿದೆ. ಅದರಲ್ಲಿ ಮೂರನೇ ಒಂದರಷ್ಟು ಪ್ರಮಾಣ ಕೂಡ ಮಾನವನ ಬಳಕೆಗೆ ಪೂರ್ಣಪ್ರಮಾಣದಲ್ಲಿ ಸಿಗುವುದಿಲ್ಲ. ಅಷ್ಟೊಂದು ಅಮೂಲ್ಯವಾದ ನೀರನ್ನು ಜತನವಾಗಿ ಬಳಸುವಲ್ಲಿ ನಮ್ಮ ರಾಜ್ಯ ಹೇಗೆ ಅನಾದರ ತೋರಿದೆ ಎಂಬುದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಚಿಸಿದ್ದ ‘ಕೇಂದ್ರ ಮೇಲ್ವಿಚಾರಣಾ ಸಮಿತಿ’ಯ ವರದಿಯಲ್ಲಿ ಎತ್ತಿ ತೋರಲಾಗಿದೆ. ನದಿಗಳ ಮಾಲಿನ್ಯದ ಕುರಿತು ಅಧ್ಯಯನ ನಡೆಸಿ ಪರಿಹಾರ ಸೂಚಿಸಲು ಈ ಸಮಿತಿಯನ್ನು ರಚಿಸಲಾಗಿತ್ತು.

ಸಮಿತಿಯ ವರದಿಯ ಪ್ರಕಾರ, ರಾಜ್ಯದಲ್ಲಿ ನಿತ್ಯ 335.65 ಕೋಟಿ ಲೀಟರ್‌ನಷ್ಟು ಕೊಳಚೆ ನೀರು ಉತ್ಪಾದನೆಯಾಗುತ್ತಿದೆ. ಆದರೆ, ನಿತ್ಯ 224.2 ಕೋಟಿ ಲೀಟರ್‌ ಕೊಳಚೆ ನೀರನ್ನು ಮಾತ್ರ ಸಂಸ್ಕರಿಸುವ ಸಾಮರ್ಥ್ಯವನ್ನು ರಾಜ್ಯ ಹೊಂದಿದೆ. ಅದರಲ್ಲೂ ಪ್ರತಿದಿನ ಕೇವಲ 151.35 ಕೋಟಿ ಲೀಟರ್‌ಗಳಷ್ಟು ನೀರು ಸಂಸ್ಕರಣೆಯಾಗುತ್ತಿದೆ. ಒಟ್ಟಾರೆ ಶೇ 45ರಷ್ಟು ಕೊಳಚೆ ನೀರನ್ನು ಮಾತ್ರ ಸಂಸ್ಕರಣೆ ಮಾಡುತ್ತಿರುವುದು ನಿಜಕ್ಕೂ ಆಘಾತಕಾರಿ. ಮಿಕ್ಕ ತ್ಯಾಜ್ಯ ನೀರು ಸಂಸ್ಕರಣೆಯಾಗದೆಯೇ ನೇರವಾಗಿ ಜಲಮೂಲಗಳನ್ನು ಸೇರುತ್ತಿದೆ. ರಾಜ್ಯದ 17 ನದಿಗಳ ನೀರು ಕಲುಷಿತಗೊಳ್ಳಲು ಇದೇ ಮುಖ್ಯಕಾರಣ.ಕೈಗಾರಿಕಾ ಘಟಕಗಳು ತ್ಯಾಜ್ಯ ನೀರಿನ ಸಂಸ್ಕರಣೆಗೆ ವ್ಯವಸ್ಥೆ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದರೂ ಅಲ್ಲಿನ ಘಟಕಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಜಲಮಂಡಳಿಯ ಪ್ರಕಾರ, ಬೆಂಗಳೂರು ನಗರವೊಂದರಲ್ಲೇ ನಿತ್ಯ 144 ಕೋಟಿ ಲೀಟರ್‌ಗಳಷ್ಟು ತ್ಯಾಜ್ಯ ನೀರು ಉತ್ಪಾದನೆಯಾಗುತ್ತದೆ. ನಿತ್ಯ 120 ಕೋಟಿ ಲೀಟರ್‌ ಕೊಳಚೆ ನೀರು ಶುದ್ಧೀಕರಿಸುವ ಸೌಲಭ್ಯಗಳು ಸಹ ಇಲ್ಲಿವೆ. ಆದರೆ, ‘ಕೇಂದ್ರ ಮೇಲ್ವಿಚಾರಣಾ ಸಮಿತಿ’ ವರದಿ ಪ್ರಕಾರ, ಬೆಂಗಳೂರಿನಲ್ಲಿ ನಿತ್ಯ 42.75 ಕೋಟಿ ಲೀಟರ್‌ ನೀರನ್ನು ಮಾತ್ರ ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತಿದೆ.

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲಕಾಯಗಳ ನೀರನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುತ್ತದೆ. ಅದರ ಫಲಿತಾಂಶದ ಆಧಾರದಲ್ಲಿ ನೀರನ್ನು ಸಂಸ್ಕರಣೆಗೊಳಪಡಿಸದೆಯೇ ಕುಡಿಯಬಹುದಾದ, ಸ್ನಾನಕ್ಕೆ ಬಳಸಬಹುದಾದ, ಸಂಸ್ಕರಣೆಗೊಳಪಡಿಸಿ ಕುಡಿಯಬಹುದಾದ, ಮೀನುಗಾರಿಕೆಗೆ ಬಳಸಬಹುದಾದ ಹಾಗೂ ನೀರಾವರಿ, ಕೈಗಾರಿಕೆಗಳಲ್ಲಿ ಕೂಲಿಂಗ್‌ಗೆ, ಕಸ ವಿಲೇವಾರಿಗೆ ಮಾತ್ರ ಬಳಸಬಹುದಾದ ನೀರು ಎಂದುವರ್ಗೀಕರಿಸುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಬೆಂಗಳೂರಿನ ಕೆರೆಗಳ ಗುಣಮಟ್ಟದ ಬಗ್ಗೆ 2019ರ ಏಪ್ರಿಲ್‌ನಿಂದ 2020ರ ಜುಲೈವರೆಗೆ ನಡೆಸಿರುವ ಪರೀಕ್ಷೆಗಳ ಫಲಿತಾಂಶಗಳನ್ನು ವಿಶ್ಲೇಷಣೆ ಗೊಳಪಡಿಸಿದಾಗ 15 ಕೆರೆಗಳ ಫಲಿತಾಂಶಗಳು ಚಿಂತಾಜನಕವಾಗಿದ್ದವು. ಈ ಕೆರೆಗಳ ನೀರು ಕುಡಿಯಲು ಇರಲಿ, ಅನ್ಯ ಉದ್ದೇಶಗಳಿಗೆ ಬಳಸುವುದಕ್ಕೂ ಯೋಗ್ಯವಾಗಿರಲಿಲ್ಲ. ಈ ಕೆರೆಗಳೆಲ್ಲವೂ ಬಿಬಿಎಂಪಿ ಇತ್ತೀಚೆಗೆ ಅಭಿವೃದ್ಧಿಪಡಿಸಿದವು. ತ್ಯಾಜ್ಯ ನೀರು ಶುದ್ಧೀಕರಿಸುವ ನಮ್ಮ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಈ ಅಂಶಗಳು ಕನ್ನಡಿ ಹಿಡಿಯುತ್ತವೆ. ಬೆಳ್ಳಂದೂರು ಕೆರೆಯ ಜಲಾನಯನ ಪ್ರದೇಶ ವ್ಯಾಪ್ತಿಯ 488 ಕೈಗಾರಿಕೆಗಳಲ್ಲಿ 45 ಕೈಗಾರಿಕೆಗಳು ಮಾತ್ರ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಹೊಂದಿರುವುದು ಈ ಹಿಂದೆ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿತ್ತು. ಅವುಗಳಲ್ಲಿ ಆರು ಕೈಗಾರಿಕೆಗಳು ಮಾತ್ರ ಶುದ್ಧೀಕರಿಸಿದ ನೀರನ್ನು ಮರುಬಳಕೆ ಮಾಡಿಕೊಳ್ಳುತ್ತಿದ್ದವು. ಎಸ್‌ಟಿಪಿ ಅಳವಡಿಸಿದರೆ ಸಾಲದು, ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆಯೂ ನಿಗಾ ಇಡುವ ವ್ಯವಸ್ಥೆ ಇರಬೇಕು. ಅಂತಹ ವ್ಯವಸ್ಥೆ ಇಲ್ಲದಿರುವ ಕಾರಣಕ್ಕಾಗಿಯೇ ಬೆಂಗಳೂರಿನ ಬಹುತೇಕ ಕೆರೆಗಳು ಕೊಚ್ಚೆಗುಂಡಿಗಳಾಗಿವೆ. ಆಂಧ್ರಪ್ರದೇಶ ಹಾಗೂ ದೆಹಲಿ ರಾಜ್ಯಗಳು ತಮ್ಮಲ್ಲಿ ಉತ್ಪಾದನೆಯಾಗುವ ಕಲುಷಿತ ನೀರಿನಲ್ಲಿ ಶೇ 90ರಷ್ಟನ್ನು ಸಂಸ್ಕರಣೆ ಮಾಡಲು ಸಾಧ್ಯವಾಗುವುದಾದರೆ ನಮ್ಮಲ್ಲೇಕೆ ಆಗದು ಎಂಬುದು ಯಕ್ಷಪ್ರಶ್ನೆ.

ಎಸ್‌ಟಿಪಿಗಳು ಗರಿಷ್ಠ ಸಾಮರ್ಥ್ಯಕ್ಕೆ ತಕ್ಕಂತೆ ಏಕೆ ಬಳಕೆ ಆಗುತ್ತಿಲ್ಲ ಅಥವಾ ಅವು ಏಕೆ ನಿಷ್ಕ್ರಿಯವಾಗಿವೆ ಎಂಬುದನ್ನು ಮೂರು ತಿಂಗಳಲ್ಲಿ ತಿಳಿದುಕೊಳ್ಳಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಕುಡಿಯುವ ನೀರಿನ ಮೂಲಗಳನ್ನೆಲ್ಲ ಶಾಶ್ವತವಾಗಿ ಕಳೆದುಕೊಂಡುಪರಿತಪಿಸಬೇಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT