ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ‘ಒಂದು ದೇಶ, ಒಂದು ಚುನಾವಣೆ’ ವಿವೇಕಯುತ ನಡೆಯಾಗಲಾರದು

ಎಲ್ಲ ಮೂರು ಹಂತಗಳ ಆಡಳಿತ ವ್ಯವಸ್ಥೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು
Published 19 ಮಾರ್ಚ್ 2024, 23:36 IST
Last Updated 19 ಮಾರ್ಚ್ 2024, 23:36 IST
ಅಕ್ಷರ ಗಾತ್ರ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೇಮಿಸಿರುವ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದ ಸಮಿತಿಯು ಎಲ್ಲ ಮೂರು ಹಂತಗಳ ಆಡಳಿತ ವ್ಯವಸ್ಥೆಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂದು ಶಿಫಾರಸು ಮಾಡಿದೆ; ಇದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಏಕಕಾಲಕ್ಕೆ ಚುನಾವಣೆಯನ್ನು ಏಕೆ ನಡೆಸಬೇಕು ಎಂಬುದಕ್ಕೆ ಸಮರ್ಥನೆ ಹಾಗೂ ಅದನ್ನು ಜಾರಿ ಮಾಡುವುದಕ್ಕೆ ಅನುಸರಿಸಬೇಕಾದ ವಿಧಾನ ಹಾಗೂ ಪ್ರಕ್ರಿಯೆಗಳನ್ನೂ ಈ ಸಮಿತಿಯು ಶಿಫಾರಸು ಮಾಡಬಹುದು ಎಂಬ ನಿರೀಕ್ಷೆ ಇತ್ತು. ಹಾಗೆಯೇ ಈ ಸಮಿತಿಯು ಈ ವಿಚಾರವನ್ನು ವಸ್ತುನಿಷ್ಠವಾಗಿ ಪರಿಶೀಲನೆ ನಡೆಸಬಹುದು ಎಂಬ ನಿರೀಕ್ಷೆ ಇರಲಿಲ್ಲ. ಸಮಿತಿಯ ಶಿಫಾರಸುಗಳಿಗೆ ಋಜುತ್ವ ಮತ್ತು ಗೌರವ ತಂದುಕೊಡುವುದಕ್ಕಾಗಿ ಮಾಜಿ ರಾಷ್ಟ್ರಪತಿ ಕೋವಿಂದ್‌ ಅವರ ಹೆಸರು ಬಳಕೆಯಾಗಿದೆ. ಸಮಿತಿಯು ತನ್ನ ಕೆಲಸವನ್ನು ಅತ್ಯಂತ ತ್ವರಿತವಾಗಿ ಮಾಡಿದೆ. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ಮತ್ತು ಅದಾಗಿ ನೂರು ದಿನಗಳ ಒಳಗೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ. ಎಲ್ಲ ಮೂರು ಹಂತಗಳ ಚುನಾವಣೆಗೂ ಒಂದೇ ಮತದಾರರ ಪಟ್ಟಿ ಮತ್ತು ಫೋಟೊಸಹಿತ ಗುರುತು ಪತ್ರ ಇರಬೇಕು ಎಂದೂ ಸಮಿತಿಯು ಹೇಳಿದೆ. ರಾಜಕೀಯ ಪಕ್ಷಗಳು, ಸಂಬಂಧಪಟ್ಟ ಜನರು ಮತ್ತು ಗುಂಪುಗಳಿಂದ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಇವರಲ್ಲಿ ಬಹುಸಂಖ್ಯಾತರ ಅಭಿಪ್ರಾಯ ಮತ್ತು ಸಮಿತಿಯ ಅಭಿಪ್ರಾಯವು ‘ಒಂದು ದೇಶ, ಒಂದು ಚುನಾವಣೆ’ ಯೋಚನೆಯ ಪರವಾಗಿಯೇ ಇತ್ತು ಎಂದು ಸಮಿತಿಯು ಹೇಳಿದೆ. 

ಈಗ ಇರುವ ಚುನಾವಣಾ ವ್ಯವಸ್ಥೆಯನ್ನು ಕೈಬಿಟ್ಟು ಏಕಕಾಲಕ್ಕೆ ಚುನಾವಣೆ ನಡೆಸುವ ಯೋಚನೆಯನ್ನು ಅಳವಡಿಸಿಕೊಳ್ಳುವುದಕ್ಕೆ ಸಮಿತಿಯು ಕೊಟ್ಟ ಕಾರಣಗಳು ಮನದಟ್ಟಾಗುವ ರೀತಿಯಲ್ಲಿ ಇಲ್ಲ. ‘ಪ್ರತ್ಯೇಕ ಚುನಾವಣೆಯಿಂದ ಸಂಪನ್ಮೂಲ ವ್ಯರ್ಥವಾಗು ತ್ತದೆ, ಅದು ಆಡಳಿತ ವ್ಯವಸ್ಥೆಯನ್ನು ನಿಷ್ಕ್ರಿಯ
ಗೊಳಿಸುತ್ತದೆ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಭಾರಿ ಹೊರೆ ಹೊರಿಸುತ್ತದೆ. ಜೊತೆಗೆ ಮತದಾರರು ದಣಿಯುವಂತೆ ಮಾಡುತ್ತದೆ’ ಎಂದು ಸಮಿತಿಯು ಹೇಳಿದೆ. ‘ಒಂದು ದೇಶ, ಒಂದು ಚುನಾವಣೆ’ಗೆ ಸಂಬಂಧಿಸಿ ಸರ್ಕಾರ ಮುಂದಿಟ್ಟ ವಾದ ಹಾಗೂ ಈ ಯೋಚನೆಯನ್ನು ಸಮರ್ಥಿಸುವವರ ವಾದವನ್ನು ಇಲ್ಲಿ ಪುನರಾವರ್ತಿಸಲಾಗಿದೆ. ಈ ಪ್ರಸ್ತಾವದ ಗಂಭೀರ ಅಧ್ಯಯನವಾಗಲೀ ಈ ಕುರಿತು ಇರುವ ಟೀಕೆಗಳ ಮೌಲ್ಯಮಾಪನವಾಗಲೀ ಸಮಾಲೋಚನೆಯಲ್ಲಿ ವ್ಯಕ್ತವಾದ ಪರ್ಯಾಯ ಪ್ರಸ್ತಾವಗಳಾ
ಗಲೀ ಗಂಭೀರವಾದ ಅಧ್ಯಯನಕ್ಕೆ ಒಳಗಾದಂತೆ ಕಾಣಿಸುತ್ತಿಲ್ಲ. ಏಕಕಾಲಕ್ಕೆ ಚುನಾವಣೆ ನಡೆಸಿದರೆ ಅದು ಸ್ಥಳೀಯಾಡಳಿತ ಸಂಸ್ಥೆಗಳ ಪರಿಣಾಮಕಾರಿತ್ವವನ್ನು ಕುಂಠಿತಗೊಳಿಸುತ್ತದೆ ಎಂಬ ಅಭಿಪ್ರಾಯವು ಸಮಿತಿಯ ಮುಂದೆ ವ್ಯಕ್ತವಾಗಿದೆ. ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ.ಶಾ ಅವರು ಮಹತ್ವದ ಅಂಶವೊಂದನ್ನು ಸಮಿತಿಯ ಮುಂದೆ ಮಂಡಿಸಿದ್ದರು: ‘ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಜನಪ್ರತಿನಿಧಿಗಳ ಕಾರ್ಯಕ್ಷಮತೆಯ ಪರಾಮರ್ಶೆ ಇಲ್ಲದೆಯೇ ಅವರಿಗೆ ಅನಪೇಕ್ಷಿತವಾದ ಸ್ಥಿರತೆ ದೊರೆಯುತ್ತದೆ. ಈ ಮೂಲಕ ರಾಜಕೀಯ ವಿಶ್ವಾಸಾರ್ಹತೆಗೆ ಕುಂದುಂಟಾಗುತ್ತದೆ’.

‘ಒಂದು ದೇಶ, ಒಂದು ಚುನಾವಣೆ’ ಯೋಚನೆಯ ಕುರಿತು ಇರುವ ಪ್ರಶ್ನೆಗಳು, ಕಳವಳಗಳು, ಟೀಕೆಗಳು ಮತ್ತು ವಿರೋಧಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಸಮಿತಿಯು ಮಾಡಿಲ್ಲ. ಸರ್ಕಾರ ಅಥವಾ ಈ ಯೋಚನೆಯ ಬೆಂಬಲಿಗರು ಕೂಡ ಈ ಯಾವುದಕ್ಕೂ ಉತ್ತರವನ್ನು ನೀಡಿಲ್ಲ. ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳು ಭಿನ್ನ ವಿಷಯಗಳ ಆಧಾರದಲ್ಲಿ ನಡೆಯುತ್ತವೆ. ಆದರೆ, ಏಕಕಾಲಕ್ಕೆ ಚುನಾವಣೆ ನಡೆದರೆ ಈ ವ್ಯತ್ಯಾಸಗಳು ಮರೆಯಾಗಿಬಿಡುತ್ತವೆ. ರಾಷ್ಟ್ರೀಯ ಪಕ್ಷಗಳು ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ನ್ಯಾಯಯುತವಲ್ಲದ ರೀತಿಯ ಅನುಕೂಲಗಳು ದೊರಕುತ್ತವೆ. ‘ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ನಡುವಣ ವ್ಯತ್ಯಾಸವನ್ನು ಗುರುತಿಸುವಷ್ಟು ವಿವೇಚನೆಯು ಮತದಾರರಿಗೆ ಇದೆ’ ಎಂದು ಸಮಿತಿಯು ಹೇಳಿದೆ. ಆದರೆ ಇಂತಹದ್ದೊಂದು ಹೇಳಿಕೆಯ ಮೂಲಕ ‘ಒಂದು ದೇಶ, ಒಂದು ಚುನಾವಣೆ’ ಕುರಿತು ಇರುವ ಎಲ್ಲ ಪ್ರಶ್ನೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಏಕಕಾಲಕ್ಕೆ ಚುನಾವಣೆ ನಡೆಸುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಈ ಕುರಿತು ಇರುವ ಟೀಕೆ ಮತ್ತು ಕಳವಳಗಳನ್ನು ನಿರ್ಲಕ್ಷಿಸಿ ‘ಒಂದು ದೇಶ, ಒಂದು ಚುನಾವಣೆ’ ಯೋಚನೆಯ ಜಾರಿಗೆ ಮುಂದಾದರೆ ಅದು ಸರ್ಕಾರದ ತಪ್ಪು ಮತ್ತು ಅವಿವೇಕದ ನಡೆಯಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT