ಬಸು ಹತ್ಯೆಗೆ ವಿಫಲ ಯತ್ನ ಪಟ್ನಾ, ಮಾರ್ಚ್ 31– ಪಶ್ಚಿಮ ಬಂಗಾಳದ ಮಾಜಿ ಉಪಮುಖ್ಯಮಂತ್ರಿ ಮತ್ತು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಅವರನ್ನು ಕೊಲೆ ಮಾಡಲು ಅಪರಿಚಿತ ಹಂತಕನೊಬ್ಬ ಇಂದು ಇಲ್ಲಿನ ರೈಲು ನಿಲ್ದಾಣದಲ್ಲಿ ನಡೆಸಿದ ಯತ್ನ ವಿಫಲವಾಯಿತು.
ಹಂತಕನು ಜ್ಯೋತಿ ಬಸು ಅವರತ್ತ ಹಾರಿಸಿದ ಗುಂಡು ಗುರಿ ತಪ್ಪಿ ಅವರ ಪಕ್ಕದಲ್ಲಿದ್ದ ಜೀವವಿಮಾ ಕಾರ್ಪೊರೇಷನ್ ಅಧಿಕಾರಿ ಅಲಿ ಇಮಾಂ ಅವರಿಗೆ ತಗುಲಿತು. ಇಮಾಂ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕಲ್ಕತ್ತೆಯಿಂದ ಇಂದು ಬೆಳಿಗ್ಗೆ ಇಲ್ಲಿಗೆ ಆಗಮಿಸಿದ ಜ್ಯೋತಿ ಬಸು ಅವರನ್ನು ಸ್ವಾಗತಿಸಲು ರೈಲು ನಿಲ್ದಾಣದಲ್ಲಿ ಅಸಂಖ್ಯಾತ ಜನ ಸೇರಿದ್ದಾಗ ಈ ದುರ್ಘಟನೆ ಸಂಭವಿಸಿತು.
‘ಮಂತ್ರಿಮಂಡಲ ಉರುಳಿಸುವ ಆಟದಲ್ಲಿ ತೊಡಗದಿರೋಣ’ ಬೆಂಗಳೂರು, ಮಾರ್ಚ್ 31– ರಾಜಕೀಯ ಅಭದ್ರತೆಯಿಂದ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುವುದರಿಂದ ‘ಮೈಸೂರಿನಲ್ಲಿ ಮಂತ್ರಿಮಂಡಲ ಉರುಳಿಸುವ ಆಟದಲ್ಲಿ ತೊಡಗದಿರೋಣ’ ಎಂದು ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗಡೆಯವರು ಇಂದು ಮೇಲ್ಮನೆಯಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.
ಮಂತ್ರಿಮಂಡಲ ಉರುಳಿಸುವ ‘ಆಟದಲ್ಲಿ’ ಹೊಲ ಗದ್ದೆಯಲ್ಲಿ, ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಾಮಾನ್ಯ ಮನುಷ್ಯನಿಗೆ ಆಸಕ್ತಿಯಿಲ್ಲವೆಂದೂ ಅವನಿಗೆ ಆಸಕ್ತಿ ಇರುವುದು ತನ್ನ ಜೇಬಿಗೆ ಸ್ವಲ್ಪ ಹೆಚ್ಚಿನ ಹಣ ಸೇರಬೇಕೆಂಬುದರಲ್ಲಿ ಎಂದೂ ರಾಜಕೀಯ ಅಭದ್ರತೆಯುಂಟಾದರೆ ಜನತೊಂದರೆಗೀಡಾಗುವರೆಂದೂ ಹೇಳಿದರು.