ಅಂತರರಾಜ್ಯ ವಿವಾದ ಇತ್ಯರ್ಥಕ್ಕೆ ವಿಶೇಷ ನ್ಯಾಯಪೀಠ ರಚನೆ ಇಲ್ಲ
ನವದೆಹಲಿ, ಸೆ. 1– ಅಂತರರಾಜ್ಯ ಗಡಿ, ಜಲ ಮತ್ತು ವಿದ್ಯುಚ್ಛಕ್ತಿ ವಿವಾದಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟಿನಲ್ಲಿ ವಿಶೇಷ ನ್ಯಾಯಪೀಠ ನೇಮಿಸಬೇಕೆಂಬ ಸಲಹೆಯೊಂದನ್ನು ರಾಜ್ಯಸಭೆಯಲ್ಲಿ ಇಂದು ಮಾಡಲಾಯಿತು.
ಗಡಿಗಳು, ನದಿ ನೀರು ಮತ್ತು ವಿದ್ಯುಚ್ಛಕ್ತಿಯ ಸಂಬಂಧದಲ್ಲಿ ರಾಜ್ಯಗಳ ನಡುವೆ ಇರುವ ವಿವಾದಗಳ ವಿಚಾರಣೆಗೆ ವಿಶೇಷ ನ್ಯಾಯಪೀಠವೊಂದನ್ನು ನೇಮಿಸಲು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಕೇಂದ್ರ ಕೇಳುವುದೇ ಎಂದು ಬಾಬೂಭಾಯಿ ಚಿನಾಯಿ ಅವರು ಪ್ರಶ್ನಿಸಿದರು.
ಗೃಹಖಾತೆಯ ಸ್ಟೇಟ್ ಸಚಿವ ಕೆ.ಸಿ.ಪಂತ್ ಈ ಪ್ರಶ್ನೆಗೆ ಉತ್ತರ ಕೊಡುತ್ತಾ ‘ಇಲ್ಲ’ ಎಂದರು.
ರಾಜಧನ, ವಿಶೇಷ ಹಕ್ಕು ರದ್ದತಿಗೆ ದೃಢ ನಿರ್ಧಾರ
ನವದೆಹಲಿ, ಸೆ. 1– ಮಾಜಿ ದೊರೆಗಳ ರಾಜಧನ ಹಾಗೂ ವಿಶೇಷ ಸೌಲಭ್ಯಗಳನ್ನು ರದ್ದು ಮಾಡುವ ಸಂವಿಧಾನದ (ಇಪ್ಪತ್ನಾಲ್ಕನೇ ತಿದ್ದುಪಡಿ) ಮಸೂದೆಯನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಆಡಳಿತ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ವಾಮವಾದಿ ಸದಸ್ಯರ ಪ್ರಚಂಡ ಹರ್ಷೋದ್ಗಾರಗಳ ನಡುವೆ ಇಂದು ಲೋಕಸಭೆಯಲ್ಲಿ ಮಂಡಿಸಿದರು.
ನಮ್ಮ ಪ್ರಜಾಸತ್ತಾತ್ಮಕ ಸಂವಿಧಾನ, ಕಾಲಧರ್ಮ ಮತ್ತು ಬದಲಾದ ಪರಿಸ್ಥಿತಿಯ ಅವಶ್ಯಕತೆಗಳಿಗೆ ಹೊಂದಿಕೆಯಿಲ್ಲದಂತಹ ರಾಜಧನ ಹಾಗೂ ಅವರಿಗೆ ಇರುವ ವಿಶೇಷ ಸೌಲಭ್ಯಗಳನ್ನು ರದ್ದು ಮಾಡುವ ಸರ್ಕಾರದ ದೃಢ ಸಂಕಲ್ಪವನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಮಸೂದೆ ಮಂಡಿಸಿ ಮಾತನಾಡಿ ಸ್ಪಷ್ಟಪಡಿಸಿದರು.