<p>ಕೃಷ್ಣನಿಲ್ಲದ ಭಾರತೀಯತೆಯನ್ನು ಕಲ್ಪಿಸಿಕೊಳ್ಳಲೂ ಆಗದು. ನಮ್ಮ ಕಲೆ, ಸಾಹಿತ್ಯ, ಸಂಗೀತ, ಇತಿಹಾಸ, ರಾಜನೀತಿ, ವಾಸ್ತುಶಿಲ್ಪ, ತತ್ತ್ವಶಾಸ್ತ್ರ – ಹೀಗೆ ಹಲವು ಕ್ಷೇತ್ರಗಳು ಕೃಷ್ಣನಿಂದಲೇ ಶಕ್ತಿಯನ್ನೂ ಸೊಗಸನ್ನೂ ಪಡೆದಿದೆ. ನಮ್ಮ ಜೀವನದ ಪ್ರತಿಕ್ಷಣವೂ ಕೃಷ್ಣಾನುಸಂಧಾನವೇ ಹೌದು. ಹೀಗಿದ್ದರೂ ವರ್ಷದ ಒಂದು ದಿನವನ್ನು ಅವನನ್ನು ಸ್ಮರಿಸಿಕೊಳ್ಳಲು, ಪೂಜಿಸಲು ನಿಗದಿ<br />ಪಡಿಸಿಕೊಂಡಿದ್ದೇವೆ. ಅಂದು ದೇಶದ ಉದ್ದಗಲಕ್ಕೂ ಅವನ ಉತ್ಸವ. ಅದನ್ನೇ ಶ್ರೀಕೃಷ್ಣಜಯಂತೀ, ಜನ್ಮಾಷ್ಟಮೀ, ಗೋಕುಲಾಷ್ಟಮೀ – ಹೀಗೆ ಹಲವು ಹೆಸರುಗಳಿಂದ ಕರೆಯಲಾಗಿದೆ.</p>.<p>ಶ್ರೀಮಹಾವಿಷ್ಣುವಿನ ಅವತಾರಗಳಲ್ಲಿ ಶ್ರೀಕೃಷ್ಣಾವತಾರವೂ ಒಂದು. ಈ ಅವತಾರದ ವಿವರಗಳ ಬಗ್ಗೆ ನಮಗೆ ಮುಖ್ಯವಾಗಿ ಮಹಾಭಾರತ, ಭಾಗವತ ಮತ್ತು ಹರಿವಂಶಗಳಲ್ಲಿ ಕಾಣಸಿಗುತ್ತವೆ. ಋಗ್ವೇದದಲ್ಲಿಯೇ ಕೃಷ್ಣನ ಉಲ್ಲೇಖ ಬಂದಿದೆ. ಅವನ ಹೆಸರಿನಲ್ಲಿ ಕಾವ್ಯಗಳೂ ಸ್ತೋತ್ರಗಳೂ ಹಾಡುಗಳೂ ಅಸಂಖ್ಯವಾಗಿ ರಚಿತವಾಗಿವೆ. ಸಾವಿರಾರು ವರ್ಷಗಳಿಂದ ಶ್ರೀಕೃಷ್ಣನ ಆರಾಧನೆ ಬೇರೆ ಬೇರೆ ವಿಧಾನಗಳಲ್ಲಿ ನಡೆಯುತ್ತಬಂದಿದೆ.</p>.<p>ಹಸುಳೆಯಾಗಿದ್ದಾಗಲೇ ಕೃಷ್ಣ ತನ್ನ ಅವತಾರದ ಉದ್ದೇಶವನ್ನು ನೆರವೇರಿಸುತ್ತಬಂದವನು. ಅವನ ಬದುಕಿನ ಎಲ್ಲ ಹಂತದಲ್ಲೂ ಧರ್ಮವನ್ನು ಕಾಪಾಡಲು ತೊಡಗಿದ್ದವನು ಅವನು.</p>.<p>ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |</p>.<p>ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||</p>.<p>ಇದು ಶ್ರೀಕೃಷ್ಣನೇ ನೀಡಿರುವ ಅಭಯ: ‘ಯಾವ ಯಾವ ಕಾಲದಲ್ಲಿ ಧರ್ಮಕ್ಕೆ ತೊಂದರೆ ಅಪಾಯ ಎದುರಾಗುತ್ತದೆಯೋ ಆಗೆಲ್ಲ ನಾನು ಅವತರಿಸುವೆ.’</p>.<p>ಧರ್ಮ ಯಾವುದು? ಅಧರ್ಮ ಯಾವುದು? – ಎಂದು ವಿಂಗಡಿಸುವುದು ಅಷ್ಟು ಸುಲಭವಲ್ಲ. ಆದುದರಿಂದಲೇ ಶ್ರೀಕೃಷ್ಣನ ವ್ಯಕ್ತಿತ್ವ ನಮಗೆ ತುಂಬ ಸಂಕೀರ್ಣವಾಗಿ ತೋರುವುದು. ಅವನು ಏಕಕಾಲದಲ್ಲಿ ಧರ್ಮರಕ್ಷಕನಾಗಿಯೂ ಕಾಣಬಲ್ಲ, ಕಪಟಸೂತ್ರಧಾರಿಯಾಗಿಯೂ ಕಾಣಬಲ್ಲ. ಬಹುಶಃ ಈ ಸಂಕೀರ್ಣತೆಯ ಕಾರಣದಿಂದಾಗಿಯೇ ಅವನು ಮನುಷ್ಯತ್ವಕ್ಕೂ ಹತ್ತಿರವಾಗಿದ್ದಾನೆ ಎನಿಸುತ್ತದೆ. ಕೃಷ್ಣಾವತಾರದ ಲೀಲೆಗಳ ಹಿಂದಿರುವ ಗಹನತೆಯನ್ನೂ ಸೌಂದರ್ಯವನ್ನೂ ಈ ಪದ್ಯ ಮನೋಜ್ಞವಾಗಿ ನಿರೂಪಿಸುತ್ತದೆ:</p>.<p>ಪಥಿ ಧಾವನ್ನಿಹ ಪತಿತೋ ರೋದಿಷ್ಯಂಬಾಕರಾವಲಂಬಾಯ |</p>.<p>ಪತಿತೋದ್ಧಾರಣಸಮಯೇ ಕಿಂ ನ ಸ್ಮರಸಿ ತ್ವಮಾತ್ಮಾನಮ್ ||</p>.<p>ಇಲ್ಲಿಯ ಸಂದರ್ಭವೇ ರಸವತ್ತಾಗಿದೆ. ಬಾಲಕೃಷ್ಣ ತಾಯಿಯೊಂದಿಗೆ ಹೋಗುತ್ತಿದ್ದಾನೆ; ಅವನು ಎಡವಿ ಬಿದ್ದುಬಿಟ್ಟ! ಅಲ್ಲೇ ಅವನು ಅಳುತ್ತ ಹೊರಳಾಡುತ್ತಿದ್ದಾನೆ, ತಾಯಿ ಬಂದು ಅವನ ಕೈ ಹಿಡಿದು ಎತ್ತಲೆಂದು. ಕವಿ ಈ ಸಂದರ್ಭವನ್ನು ನಮ್ಮ ಜೀವನದೊಂದಿಗೆ ಸಮೀಕರಿಸಿಕೊಂಡು, ಕೃಷ್ಣನನ್ನು ಆರ್ತತೆಯಿಂದ ಪ್ರಾರ್ಥಿಸಿಕೊಳ್ಳುತ್ತಿದ್ದಾನೆ. ‘ನಾವು ಸಂಸಾರದಲ್ಲಿ ಬಿದ್ದು ಒದ್ದಾಡುತ್ತಿದ್ದೇವೆ. ನಮ್ಮ ಈ ಹತಾಶಸ್ಥಿತಿಯನ್ನು ನೀನು ದಾರಿಯಲ್ಲಿ ಬಿದ್ದಾಗ ಏಕೆ ನೆನೆಸಿಕೊಳ್ಳುವುದಿಲ್ಲ? ಎಂದರೆ, ಬಿದ್ದವರ ಅವಸ್ಥೆ ಗೊತ್ತಾದರೆ ಅವನು ನಮ್ಮನ್ನು ಸಂಕಷ್ಟದಿಂದ ಪಾರು ಮಾಡಬಹುದು – ಎಂಬ ಆಸೆಯಿಂದ ಕೃಷ್ಣನನ್ನು ಕವಿ ಪ್ರಶ್ನಿಸುತ್ತಿದ್ದಾನೆ.</p>.<p>ಕೃಷ್ಣನ ಬಾಲ್ಯದ ವಿವರಗಳು ಕವಿವರ್ಣನೆಗೆ ಒದಗಿದಷ್ಟು ಇನ್ನೊಬ್ಬ ಅವತಾರಪುರುಷ ದಕ್ಕಿಲ್ಲ. ‘ಶ್ರೀಕೃಷ್ಣಕರ್ಣಾಮೃತ’, ದಾಸರ ಪದಗಳು – ಹೀಗೆ ಹಲವು ಕೃತಿಗಳು ಅವನ ಬಾಲ್ಯವನ್ನು ಹೃದಯಂಗಮವಾಗಿ ಚಿತ್ರಿಸಿವೆ. ಮಾನುಷಸಂಬಂಧಗಳ ಎಲ್ಲ ಕೊಂಡಿಗಳಿಗೂ ಒದಗುವಂಥವನು ಕೃಷ್ಣ. ಅವನ ಈ ಸಂಬಂಧಸೂತ್ರವನ್ನು ಕುಮಾರವ್ಯಾಸನ ಪದ್ಯ ‘ವೇದಪುರುಷನ ಸುತನ ಸುತನ...’ ತುಂಬ ಧ್ವನಿ<br />ಪೂರ್ಣವಾಗಿ ಎತ್ತಿಹಿಡಿದಿದೆ.</p>.<p>ಲೌಕಿಕ ಸಂಬಂಧಗಳ ಜೊತೆಯಿದ್ದೂ ಆ ಎಲ್ಲ ಸಂಬಂಧಗಳನ್ನು ಮೀರಿದ ತತ್ತ್ವವೇ ಶ್ರೀಕೃಷ್ಣತತ್ತ್ವ ಎಂಬುದು ಆ ಪದ್ಯದ ತಾತ್ಪರ್ಯದಂತಿದೆ. ಮಗುವಾಗಿ, ಸ್ನೇಹಿತನಾಗಿ, ಪ್ರೇಮಿಯಾಗಿ, ಸಹೋದರನಾಗಿ, ಶಿಷ್ಯನಾಗಿ, ಗುರುವಾಗಿ – ಕೊನೆಗೆ ನಮ್ಮೆಲ್ಲರ ಜೀವನರಥದ ಸಾರಥಿಯಾಗಿರುವವನೇ ಅವನು. ಅವನನ್ನು ಒಲಿಸಿಕೊಳ್ಳುವುದು ಕೂಡ ಸುಲಭ: ‘ಎಲೆ, ಹೂವು, ಹಣ್ಣು, ಕೊನೆಗೆ ನೀರು – ಹೀಗೆ ಯಾವುದನ್ನಾದರೂ ಸರಿಯೇ, ಒಳ್ಳೆಯ ಹೃದಯದಿಂದ ಅವನಿಗೆ ಅರ್ಪಿಸಿದರೆ, ಅವನು ಒದಗಬಲ್ಲ’ ಎಂದು ಅವನೇ ಘೋಷಿಸಿದ್ದಾನೆ. ಅವನನ್ನು ಸಂಭ್ರಮದಿಂದ ಸ್ಮರಿಸಿಕೊಳ್ಳುವ, ಆರಾಧಿಸುವ ಪರ್ವವೇ ‘ಗೋಕುಲಾಷ್ಟಮೀ’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೃಷ್ಣನಿಲ್ಲದ ಭಾರತೀಯತೆಯನ್ನು ಕಲ್ಪಿಸಿಕೊಳ್ಳಲೂ ಆಗದು. ನಮ್ಮ ಕಲೆ, ಸಾಹಿತ್ಯ, ಸಂಗೀತ, ಇತಿಹಾಸ, ರಾಜನೀತಿ, ವಾಸ್ತುಶಿಲ್ಪ, ತತ್ತ್ವಶಾಸ್ತ್ರ – ಹೀಗೆ ಹಲವು ಕ್ಷೇತ್ರಗಳು ಕೃಷ್ಣನಿಂದಲೇ ಶಕ್ತಿಯನ್ನೂ ಸೊಗಸನ್ನೂ ಪಡೆದಿದೆ. ನಮ್ಮ ಜೀವನದ ಪ್ರತಿಕ್ಷಣವೂ ಕೃಷ್ಣಾನುಸಂಧಾನವೇ ಹೌದು. ಹೀಗಿದ್ದರೂ ವರ್ಷದ ಒಂದು ದಿನವನ್ನು ಅವನನ್ನು ಸ್ಮರಿಸಿಕೊಳ್ಳಲು, ಪೂಜಿಸಲು ನಿಗದಿ<br />ಪಡಿಸಿಕೊಂಡಿದ್ದೇವೆ. ಅಂದು ದೇಶದ ಉದ್ದಗಲಕ್ಕೂ ಅವನ ಉತ್ಸವ. ಅದನ್ನೇ ಶ್ರೀಕೃಷ್ಣಜಯಂತೀ, ಜನ್ಮಾಷ್ಟಮೀ, ಗೋಕುಲಾಷ್ಟಮೀ – ಹೀಗೆ ಹಲವು ಹೆಸರುಗಳಿಂದ ಕರೆಯಲಾಗಿದೆ.</p>.<p>ಶ್ರೀಮಹಾವಿಷ್ಣುವಿನ ಅವತಾರಗಳಲ್ಲಿ ಶ್ರೀಕೃಷ್ಣಾವತಾರವೂ ಒಂದು. ಈ ಅವತಾರದ ವಿವರಗಳ ಬಗ್ಗೆ ನಮಗೆ ಮುಖ್ಯವಾಗಿ ಮಹಾಭಾರತ, ಭಾಗವತ ಮತ್ತು ಹರಿವಂಶಗಳಲ್ಲಿ ಕಾಣಸಿಗುತ್ತವೆ. ಋಗ್ವೇದದಲ್ಲಿಯೇ ಕೃಷ್ಣನ ಉಲ್ಲೇಖ ಬಂದಿದೆ. ಅವನ ಹೆಸರಿನಲ್ಲಿ ಕಾವ್ಯಗಳೂ ಸ್ತೋತ್ರಗಳೂ ಹಾಡುಗಳೂ ಅಸಂಖ್ಯವಾಗಿ ರಚಿತವಾಗಿವೆ. ಸಾವಿರಾರು ವರ್ಷಗಳಿಂದ ಶ್ರೀಕೃಷ್ಣನ ಆರಾಧನೆ ಬೇರೆ ಬೇರೆ ವಿಧಾನಗಳಲ್ಲಿ ನಡೆಯುತ್ತಬಂದಿದೆ.</p>.<p>ಹಸುಳೆಯಾಗಿದ್ದಾಗಲೇ ಕೃಷ್ಣ ತನ್ನ ಅವತಾರದ ಉದ್ದೇಶವನ್ನು ನೆರವೇರಿಸುತ್ತಬಂದವನು. ಅವನ ಬದುಕಿನ ಎಲ್ಲ ಹಂತದಲ್ಲೂ ಧರ್ಮವನ್ನು ಕಾಪಾಡಲು ತೊಡಗಿದ್ದವನು ಅವನು.</p>.<p>ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |</p>.<p>ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||</p>.<p>ಇದು ಶ್ರೀಕೃಷ್ಣನೇ ನೀಡಿರುವ ಅಭಯ: ‘ಯಾವ ಯಾವ ಕಾಲದಲ್ಲಿ ಧರ್ಮಕ್ಕೆ ತೊಂದರೆ ಅಪಾಯ ಎದುರಾಗುತ್ತದೆಯೋ ಆಗೆಲ್ಲ ನಾನು ಅವತರಿಸುವೆ.’</p>.<p>ಧರ್ಮ ಯಾವುದು? ಅಧರ್ಮ ಯಾವುದು? – ಎಂದು ವಿಂಗಡಿಸುವುದು ಅಷ್ಟು ಸುಲಭವಲ್ಲ. ಆದುದರಿಂದಲೇ ಶ್ರೀಕೃಷ್ಣನ ವ್ಯಕ್ತಿತ್ವ ನಮಗೆ ತುಂಬ ಸಂಕೀರ್ಣವಾಗಿ ತೋರುವುದು. ಅವನು ಏಕಕಾಲದಲ್ಲಿ ಧರ್ಮರಕ್ಷಕನಾಗಿಯೂ ಕಾಣಬಲ್ಲ, ಕಪಟಸೂತ್ರಧಾರಿಯಾಗಿಯೂ ಕಾಣಬಲ್ಲ. ಬಹುಶಃ ಈ ಸಂಕೀರ್ಣತೆಯ ಕಾರಣದಿಂದಾಗಿಯೇ ಅವನು ಮನುಷ್ಯತ್ವಕ್ಕೂ ಹತ್ತಿರವಾಗಿದ್ದಾನೆ ಎನಿಸುತ್ತದೆ. ಕೃಷ್ಣಾವತಾರದ ಲೀಲೆಗಳ ಹಿಂದಿರುವ ಗಹನತೆಯನ್ನೂ ಸೌಂದರ್ಯವನ್ನೂ ಈ ಪದ್ಯ ಮನೋಜ್ಞವಾಗಿ ನಿರೂಪಿಸುತ್ತದೆ:</p>.<p>ಪಥಿ ಧಾವನ್ನಿಹ ಪತಿತೋ ರೋದಿಷ್ಯಂಬಾಕರಾವಲಂಬಾಯ |</p>.<p>ಪತಿತೋದ್ಧಾರಣಸಮಯೇ ಕಿಂ ನ ಸ್ಮರಸಿ ತ್ವಮಾತ್ಮಾನಮ್ ||</p>.<p>ಇಲ್ಲಿಯ ಸಂದರ್ಭವೇ ರಸವತ್ತಾಗಿದೆ. ಬಾಲಕೃಷ್ಣ ತಾಯಿಯೊಂದಿಗೆ ಹೋಗುತ್ತಿದ್ದಾನೆ; ಅವನು ಎಡವಿ ಬಿದ್ದುಬಿಟ್ಟ! ಅಲ್ಲೇ ಅವನು ಅಳುತ್ತ ಹೊರಳಾಡುತ್ತಿದ್ದಾನೆ, ತಾಯಿ ಬಂದು ಅವನ ಕೈ ಹಿಡಿದು ಎತ್ತಲೆಂದು. ಕವಿ ಈ ಸಂದರ್ಭವನ್ನು ನಮ್ಮ ಜೀವನದೊಂದಿಗೆ ಸಮೀಕರಿಸಿಕೊಂಡು, ಕೃಷ್ಣನನ್ನು ಆರ್ತತೆಯಿಂದ ಪ್ರಾರ್ಥಿಸಿಕೊಳ್ಳುತ್ತಿದ್ದಾನೆ. ‘ನಾವು ಸಂಸಾರದಲ್ಲಿ ಬಿದ್ದು ಒದ್ದಾಡುತ್ತಿದ್ದೇವೆ. ನಮ್ಮ ಈ ಹತಾಶಸ್ಥಿತಿಯನ್ನು ನೀನು ದಾರಿಯಲ್ಲಿ ಬಿದ್ದಾಗ ಏಕೆ ನೆನೆಸಿಕೊಳ್ಳುವುದಿಲ್ಲ? ಎಂದರೆ, ಬಿದ್ದವರ ಅವಸ್ಥೆ ಗೊತ್ತಾದರೆ ಅವನು ನಮ್ಮನ್ನು ಸಂಕಷ್ಟದಿಂದ ಪಾರು ಮಾಡಬಹುದು – ಎಂಬ ಆಸೆಯಿಂದ ಕೃಷ್ಣನನ್ನು ಕವಿ ಪ್ರಶ್ನಿಸುತ್ತಿದ್ದಾನೆ.</p>.<p>ಕೃಷ್ಣನ ಬಾಲ್ಯದ ವಿವರಗಳು ಕವಿವರ್ಣನೆಗೆ ಒದಗಿದಷ್ಟು ಇನ್ನೊಬ್ಬ ಅವತಾರಪುರುಷ ದಕ್ಕಿಲ್ಲ. ‘ಶ್ರೀಕೃಷ್ಣಕರ್ಣಾಮೃತ’, ದಾಸರ ಪದಗಳು – ಹೀಗೆ ಹಲವು ಕೃತಿಗಳು ಅವನ ಬಾಲ್ಯವನ್ನು ಹೃದಯಂಗಮವಾಗಿ ಚಿತ್ರಿಸಿವೆ. ಮಾನುಷಸಂಬಂಧಗಳ ಎಲ್ಲ ಕೊಂಡಿಗಳಿಗೂ ಒದಗುವಂಥವನು ಕೃಷ್ಣ. ಅವನ ಈ ಸಂಬಂಧಸೂತ್ರವನ್ನು ಕುಮಾರವ್ಯಾಸನ ಪದ್ಯ ‘ವೇದಪುರುಷನ ಸುತನ ಸುತನ...’ ತುಂಬ ಧ್ವನಿ<br />ಪೂರ್ಣವಾಗಿ ಎತ್ತಿಹಿಡಿದಿದೆ.</p>.<p>ಲೌಕಿಕ ಸಂಬಂಧಗಳ ಜೊತೆಯಿದ್ದೂ ಆ ಎಲ್ಲ ಸಂಬಂಧಗಳನ್ನು ಮೀರಿದ ತತ್ತ್ವವೇ ಶ್ರೀಕೃಷ್ಣತತ್ತ್ವ ಎಂಬುದು ಆ ಪದ್ಯದ ತಾತ್ಪರ್ಯದಂತಿದೆ. ಮಗುವಾಗಿ, ಸ್ನೇಹಿತನಾಗಿ, ಪ್ರೇಮಿಯಾಗಿ, ಸಹೋದರನಾಗಿ, ಶಿಷ್ಯನಾಗಿ, ಗುರುವಾಗಿ – ಕೊನೆಗೆ ನಮ್ಮೆಲ್ಲರ ಜೀವನರಥದ ಸಾರಥಿಯಾಗಿರುವವನೇ ಅವನು. ಅವನನ್ನು ಒಲಿಸಿಕೊಳ್ಳುವುದು ಕೂಡ ಸುಲಭ: ‘ಎಲೆ, ಹೂವು, ಹಣ್ಣು, ಕೊನೆಗೆ ನೀರು – ಹೀಗೆ ಯಾವುದನ್ನಾದರೂ ಸರಿಯೇ, ಒಳ್ಳೆಯ ಹೃದಯದಿಂದ ಅವನಿಗೆ ಅರ್ಪಿಸಿದರೆ, ಅವನು ಒದಗಬಲ್ಲ’ ಎಂದು ಅವನೇ ಘೋಷಿಸಿದ್ದಾನೆ. ಅವನನ್ನು ಸಂಭ್ರಮದಿಂದ ಸ್ಮರಿಸಿಕೊಳ್ಳುವ, ಆರಾಧಿಸುವ ಪರ್ವವೇ ‘ಗೋಕುಲಾಷ್ಟಮೀ’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>