ಸುಪ್ರೀಂ ಕೋರ್ಟ್ ನೀಡಿದ ಒಳಮೀಸಲಾತಿ ತೀರ್ಪು ಸ್ವಾಗತಾರ್ಹವಾದುದು. ಇದರಿಂದ ನ್ಯಾ. ಸದಾಶಿವ ಆಯೋಗದ ವರದಿಯ ಚರ್ಚೆ ಮುನ್ನೆಲೆಗೆ ಬಂದಿದೆ. ಎಡಗೈ- ಬಲಗೈಗಳಾಗಿ ಒಡೆದಿರುವ ಪರಿಶಿಷ್ಟ ಜಾತಿ ಜನರಿಗೆ ಒಳಮೀಸಲಾತಿಯ ರಾಜಕಾರಣವು ಎಂದಿಗಿಂತ ಇಂದು ಹೆಚ್ಚು ಅರ್ಥವಾದಂತಿದೆ ಮತ್ತು ಒಪ್ಪಿಕೊಳ್ಳಬೇಕಾದ ಅನಿವಾರ್ಯದ ಅರಿವನ್ನೂ ಮೂಡಿಸಿದೆ.
ಪರಿಶಿಷ್ಟ ಜಾತಿ, ಪಂಗಡ ಅಥವಾ ಹಿಂದುಳಿದ ವರ್ಗಗಳು ಅಷ್ಟೇ ಅಲ್ಲ ಪ್ರತಿಯೊಂದು ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಗೊಳಿಸಬೇಕು. ನೂರಕ್ಕೆ ನೂರರಷ್ಟೂ ಮೀಸಲಾತಿಯನ್ನು ಎಲ್ಲ ಜಾತಿಗಳಲ್ಲಿ ವಿಂಗಡಿಸಬೇಕು. ಆಗ ಸಾಮಾಜಿಕ ನ್ಯಾಯ ದಕ್ಕಿದಂತಾಗುತ್ತದೆ. ಮೀಸಲಾತಿ ಆರಂಭಿಸಿದಾಗ ಪರಿಶಿಷ್ಟ ಜಾತಿಯಲ್ಲಿ ಕೇವಲ 6 ಜಾತಿಗಳಿದ್ದವು. ಈಗ ಆ ಪಟ್ಟಿಯಲ್ಲಿ 101 ಜಾತಿಗಳಿವೆ. ಜಾತಿಗಳು ಹಾಗೂ ಜನರು ಹೆಚ್ಚಾದಷ್ಟು ಮೀಸಲಾತಿ ಪ್ರಮಾಣ ಹೆಚ್ಚಾಗಬೇಕಲ್ಲವೇ?
ಸರ್ಕಾರಿ ವಲಯದಲ್ಲಿ ಇದ್ದಂತೆ ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೊಳಿಸುವ ಅಗತ್ಯ ಇದೆ. ಭೂಮಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸರ್ಕಾರದಿಂದ ಪಡೆಯುತ್ತಿರುವ ಕಂಪನಿಗಳು ಇದನ್ನು ಜಾರಿಗೊಳಿಸುವುದರಲ್ಲಿ ತಪ್ಪೇನಿಲ್ಲ.
– ಅನಸೂಯ ಕಾಂಬಳೆ, ಸಹಾಯಕ ಪ್ರಾಧ್ಯಾಪಕಿ, ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ