ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವಿಶ್ವಾಸ ಮೂಡಿಸಲು ಕಾರ್ಯತಂತ್ರ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಇರಬಹುದಾದ ಆತ್ಮವಿಶ್ವಾಸದ ಕೊರತೆ ಹೋಗಲಾಡಿಸಲು ವಿಶೇಷ ಪ್ರಯತ್ನಗಳಾಗಬೇಕು
Last Updated 7 ಆಗಸ್ಟ್ 2022, 21:45 IST
ಅಕ್ಷರ ಗಾತ್ರ

ಹಳ್ಳಿಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬ ವಿಷಯದ ಕುರಿತಾದ ಸದಾಶಿವ್ ಸೊರಟೂರು ಅವರ ಬರಹ (ಸಂಗತ, ಆ. 3) ಚಿಂತನೆಗೆ ಹಚ್ಚುತ್ತದೆ. ಹಳ್ಳಿಮಕ್ಕಳ ತೇರ್ಗಡೆ ಪ್ರಮಾಣವನ್ನು ಪರಿಶೀಲಿಸಲು ಶಾಲಾ ಹಂತದ ವಿವಿಧ ತರಗತಿಗಳ ಪರೀಕ್ಷೆಗಳ ಫಲಿತಾಂಶವನ್ನು ಕುತೂಹಲಕ್ಕಾಗಿ ಗಮನಿಸಿದೆ. ಹತ್ತನೇ ತರಗತಿಯ 2020 ಮತ್ತು 2022ರ ವಾರ್ಷಿಕ ಪರೀಕ್ಷೆಯ
ಫಲಿತಾಂಶದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಕ್ರಮವಾಗಿ ಶೇಕಡ 3.77 ಮತ್ತು ಶೇ 4.67ರಷ್ಟು ಮುಂದಿದ್ದಾರೆ.

ದ್ವಿತೀಯ ಪಿಯುಸಿಯ 2020ರ ವಾರ್ಷಿಕ ಪರೀಕ್ಷೆಯಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು ಗ್ರಾಮೀಣ ವಿದ್ಯಾರ್ಥಿಗಳಿಗಿಂತ ಶೇ 3.61 ರಷ್ಟು ಮುಂದಿದ್ದಾರೆ. 2022ರ ವಾರ್ಷಿಕ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಭಾಗದವರಿಗಿಂತ
ಶೇ 0.4ರಷ್ಟು ಅಲ್ಪ ಮುನ್ನಡೆ ಹೊಂದಿದ್ದಾರೆ.

2021ರ ರಾಷ್ಟ್ರೀಯ ಸಾಧನಾ ಸಮೀಕ್ಷೆಯ ಫಲಿತಾಂಶದ ಅನ್ವಯ ರಾಜ್ಯದಲ್ಲಿ 3, 5 ಮತ್ತು 8ನೇ ತರಗತಿಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಕ್ರಮವಾಗಿ ಶೇ 14, ಶೇ 6 ಮತ್ತು ಶೇ 12ರಷ್ಟು ಮುಂದಿದ್ದಾರೆ. ಉತ್ತೀರ್ಣತೆಯ
ಪ್ರಮಾಣವೊಂದನ್ನೇ ಆಧರಿಸಿ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸದ ಮಟ್ಟವನ್ನು ಅಳೆಯಲಾಗದು. ಅಲ್ಲದೆ, ಉನ್ನತ ಶಿಕ್ಷಣ ಹಂತ ಮತ್ತು ಉದ್ಯೋಗ ಅವಕಾಶಗಳನ್ನು ಪಡೆಯುವಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯ ಪ್ರಮಾಣ ಹೇಗಿದೆ ಎಂಬುದನ್ನು ಕಂಡುಕೊಳ್ಳಲು ಮಾಹಿತಿಗಳು ಲಭ್ಯವಾಗಲಿಲ್ಲ.

ವಿವಿಧ ಪರೀಕ್ಷಾ ಫಲಿತಾಂಶಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಸ್ವಲ್ಪ ಮುಂದೆ, ಹಿಂದೆ ಅಥವಾ ಸಮನಾಗಿರುವುದನ್ನು ದತ್ತಾಂಶಗಳ ಮೂಲಕ ಗಮನಿಸಬಹುದಾದರೂ ನಗರ ಪ್ರದೇಶದ ವಿದ್ಯಾರ್ಥಿಗಳಿಗಿರುವ ಅವಕಾಶಗಳ ಲಭ್ಯತೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇರುವುದಿಲ್ಲ ಎಂಬುದು ಸತ್ಯ. ಇದರ ಜೊತೆ ಅವರಿಗೆ ಇಂಗ್ಲಿಷ್ ಭಾಷೆಯ ಬಳಕೆಯಲ್ಲಿ ಸಮಸ್ಯೆ, ಕೀಳರಿಮೆಗಳು ಕಾಡುತ್ತವೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಇರಬಹುದಾದ ಆತ್ಮವಿಶ್ವಾಸದ ಕೊರತೆ, ಕೀಳರಿಮೆಗಳನ್ನು ಹೋಗಲಾಡಿಸಲು ವಿಶೇಷ ಪ್ರಯತ್ನಗಳಾಗಬೇಕು. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲಗಳನ್ನು ಕರಗತ ಮಾಡಿಸಲು ಶಾಲೆ- ಕಾಲೇಜುಗಳಲ್ಲಿ ನಡೆಸಲಾಗುವ ಚರ್ಚಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೇರೇಪಿಸಬೇಕು. ವಿದ್ಯಾರ್ಥಿಗಳು ಹಿಂಜರಿಕೆಯಿಲ್ಲದೆ ತಮ್ಮೊಂದಿಗೆ ಪ್ರಶ್ನೆಗಳನ್ನು ಕೇಳಲು, ಸಂಭಾಷಣೆ, ಸಂವಹನ ಮಾಡಲು ಶಿಕ್ಷಕರು ವಿದ್ಯಾರ್ಥಿಗಳನ್ನು ಹುರಿದುಂಬಿಸಬೇಕು. ಶಿಸ್ತು ಕಾಪಾಡುವ ನೆಪದಿಂದ ವಿದ್ಯಾರ್ಥಿಗಳ ಅಭಿವ್ಯಕ್ತಿಯನ್ನು ದಮನ ಮಾಡಿದಲ್ಲಿ ವಿದ್ಯಾರ್ಥಿಗಳು ಮಾತನಾಡಲು, ಸಂವಹನ ಮಾಡಲು ಹಿಂಜರಿಯುತ್ತಾರೆ. ಈ ರೀತಿಯ ಹಿಂಜರಿಕೆ ಅವರಲ್ಲಿನ ಆತ್ಮವಿಶ್ವಾಸವನ್ನು ಕೊಂದುಹಾಕುತ್ತದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಬರವಣಿಗೆ, ಸಂವಹನ ಮಾಡಲು ಸಂಕೋಚ, ಭಯಗಳಿರುತ್ತವೆ. ಕನ್ನಡ ಭಾಷೆಯನ್ನು ಉತ್ತಮವಾಗಿ ಕಲಿಸುವ ಜೊತೆ ಇಂಗ್ಲಿಷ್ ಭಾಷೆಯಲ್ಲಿ ಚೆನ್ನಾಗಿ ಬರೆಯಲು, ಸಂವಹನ ಮಾಡಲು ಸಾಧ್ಯವಾಗು
ವಂತೆ ಅಗತ್ಯ ಚಟುವಟಿಕೆ, ಅಭ್ಯಾಸಗಳನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು. ಈ ದಿಸೆಯಲ್ಲಿ ರಾಜ್ಯ ಸರ್ಕಾರವು ಶಾಲೆಗಳಲ್ಲಿ ‘ಸ್ಪೋಕನ್ ಇಂಗ್ಲಿಷ್’ ಕೋರ್ಸ್ ಆರಂಭಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರಯೋಗ, ಚಟುವಟಿಕೆ, ಪ್ರಾಜೆಕ್ಟ್‌ಗಳ ಮೂಲಕ ವಿಜ್ಞಾನ, ಗಣಿತ ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಸುವ ವ್ಯವಸ್ಥೆಗಳಾಗಬೇಕು. ಕಂಪ್ಯೂಟರ್ ಮತ್ತು ಇಂಟರ್ನೆಟ್‌ ಬಳಕೆಯ ಕೌಶಲಗಳನ್ನು ಕಲಿಸುವ ಜೊತೆ ಭವಿಷ್ಯದಲ್ಲಿ ಒದಗಬಹುದಾದ ಶಿಕ್ಷಣ ಮತ್ತು ವೃತ್ತಿಯ ಅವಕಾಶಗಳನ್ನು ತಿಳಿಸಿ, ಅವರಲ್ಲಿ ಕನಸು, ಆಕಾಂಕ್ಷೆಗಳು ಮೊಳೆ
ಯುವಂತೆ ಮಾಡಬೇಕು. ಇದಕ್ಕಾಗಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಅಗತ್ಯವಾದ ಕಂಪ್ಯೂಟರ್, ಇಂಟರ್ನೆಟ್‌ ವ್ಯವಸ್ಥೆಗಳು ಲಭ್ಯವಿರುವಂತೆ ಮಾಡಬೇಕು.

ಗ್ರಾಮೀಣ ಭಾಗದಅನೇಕ ವಿದ್ಯಾರ್ಥಿಗಳು ತಮ್ಮ ಕುಟುಂಬವರ್ಗಕ್ಕೆ ಕೃಷಿ ಹಾಗೂ ಇತರೆ ಚಟುವಟಿಕೆಗಳನ್ನು ಕೈಗೊಳ್ಳಲು ನೆರವಾಗುವ ಉದ್ದೇಶದಿಂದ ಶಾಲೆ, ಕಾಲೇಜುಗಳನ್ನು ಮಧ್ಯದಲ್ಲಿ ತೊರೆಯುತ್ತಾರೆ. ಇದನ್ನು ತಪ್ಪಿಸಲು ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಸಮಾಲೋಚನೆಗಳನ್ನು ಕೈಗೊಂಡು, ಶಿಕ್ಷಣ ಮುಂದುವರಿಸಲು ನೆರವಾಗಬೇಕು. ಸಂಕಷ್ಟದಲ್ಲಿರುವ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ಅಗತ್ಯವಾದ ಆಸರೆ, ಬೆಂಬಲ, ಒತ್ತಾಸೆ ನೀಡುವ ಸರ್ಕಾರದ ಕಾರ್ಯಕ್ರಮಗಳ ಕುರಿತ ಮಾಹಿತಿ ಸಂಬಂಧಿಸಿದ ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕು.

ನಗರ ಪ್ರದೇಶ ಮತ್ತು ಗ್ರಾಮೀಣ ಭಾಗದ ಶಾಲೆ, ಕಾಲೇಜು, ಪರಿಸರ, ಜನಜೀವನ, ಸಂಸ್ಕೃತಿಯನ್ನು ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಪರಸ್ಪರ ಪರಿಚಯಿಸಬೇಕು. ಈ ದಿಸೆಯಲ್ಲಿ ಗ್ರಾಮೀಣ- ನಗರ ಶಾಲೆಗಳನ್ನು ಪರಸ್ಪರ ಜೋಡಿಸಿ, ಭೇಟಿ, ಸಂವಾದ, ಅನುಭವ ಹಂಚಿಕೆಗಳಿಗೆ ಅನುಕೂಲ ಕಲ್ಪಿಸುವ ‘ಶಾಲಾ ಜೋಡಣೆ’ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಅದನ್ನು ಇನ್ನಷ್ಟು
ಪರಿಣಾಮಕಾರಿಯಾಗಿಸಬೇಕು.

ದೇಶದಲ್ಲಿರುವ ಒಟ್ಟು 15.09 ಲಕ್ಷದಷ್ಟು ಶಾಲೆಗಳಲ್ಲಿ ಶೇ 83.43 ರಷ್ಟು (12.59 ಲಕ್ಷ) ಶಾಲೆಗಳು ಗ್ರಾಮೀಣ ಭಾಗದಲಿದ್ದು, ಈ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಯಾವ ರೀತಿಯಲ್ಲೂ ಹಿಂದೆ ಉಳಿಯದಂತಹ ಕಾರ್ಯಕ್ರಮಗಳನ್ನು ರೂಪಿಸಿ, ಮುನ್ನಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT