ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಎಸ್‌ಸಿಎಸ್‌ಪಿ, ಟಿಎಸ್‌ಪಿ: ಇರಲಿ ಪಾರದರ್ಶಕತೆ

Last Updated 11 ಏಪ್ರಿಲ್ 2023, 5:03 IST
ಅಕ್ಷರ ಗಾತ್ರ

ರಾಜ್ಯದ ಪ್ರತಿವರ್ಷದ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರವು 2013ರಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್‌ಪಿ) ಕಾಯ್ದೆ ರೂಪಿಸಿ, ಜಾರಿಗೊಳಿಸಿತು. ಪರಿಶಿಷ್ಟರ ಸಬಲೀಕರಣದ ದಿಸೆಯಲ್ಲಿ ಇದೊಂದು ದಿಟ್ಟ ಹೆಜ್ಜೆ. ಆದರೆ ಈ ಕಾಯ್ದೆಯ ಅನುಸಾರ ಬಜೆಟ್‍ನಲ್ಲಿ ಪೂರ್ಣ ಪ್ರಮಾಣದ ಅನುದಾನ ಒದಗಿಸುತ್ತಿಲ್ಲ.

ಒಟ್ಟು ಬಜೆಟ್‌ ಗಾತ್ರದ ಶೇಕಡ 24.1ರಷ್ಟು ಅನುದಾನವನ್ನು ಒದಗಿಸುವುದರ ಬದಲಿಗೆ ರಾಜ್ಯದ ಒಟ್ಟಾರೆ ಆಡಳಿತ ವೆಚ್ಚವನ್ನು ಹೊರಗಿಟ್ಟು, ಉಳಿದ ಮೊತ್ತದಲ್ಲಿ ಮಾತ್ರ ಪಾಲು ನೀಡಲಾಗುತ್ತಿದೆ. ಈ ಸತ್ಯ ಬಹಿರಂಗ ಆಗಬಾರದು ಎಂಬ ಉದ್ದೇಶದಿಂದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗಳಿಗೆ ಯಾವ ಆಧಾರದಲ್ಲಿ ಲೆಕ್ಕ ಹಾಕಿ ಅನುದಾನವನ್ನು ನೀಡಲಾಗುತ್ತದೆ ಎಂಬ ಬಗ್ಗೆ ಬಜೆಟ್‍ನಲ್ಲಾಗಲೀ ಅಥವಾ ಮಧ್ಯಮಾವಧಿ ವಿತ್ತೀಯ ಯೋಜನೆಗಳಲ್ಲಾಗಲೀ ಮಾಹಿತಿ ನೀಡುತ್ತಿಲ್ಲ.

ವರ್ಷದಿಂದ ವರ್ಷಕ್ಕೆ ಬಜೆಟ್‍ನ ಮೊತ್ತ ಏರುಗತಿಯಲ್ಲಿ ಇರುತ್ತದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಗಳ ಅನುದಾನದ ಪ್ರಮಾಣ ಮಾತ್ರ ಇಳಿಕೆಯಾಗುತ್ತಿದೆ. ಅಭಿವೃದ್ಧಿ ವೆಚ್ಚದ ಅಥವಾ ಆಡಳಿತ- ನಿರ್ವಹಣೆ ವೆಚ್ಚ ಕಳೆದು ರಾಜಸ್ವ ಸ್ವೀಕೃತಿಯ ಶೇಕಡ 24.1ರಷ್ಟನ್ನು ಉಪ ಯೋಜನೆಗಳಿಗೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರ ವಿವರ ಬಜೆಟ್ ಸಂಪುಟಗಳಲ್ಲಿ ಅಥವಾ ಬಜೆಟ್ ಭಾಷಣಗಳಲ್ಲಿ ಏಕೆ ಇರುವುದಿಲ್ಲ?

ಉಪಯೋಜನೆಗಳು ಜಾರಿಗೆ ಬಂದು ನಾಲ್ಕು ದಶಕಗಳೇ ಆಗಿವೆ. ಈ ಅವಧಿಯಲ್ಲಿ ಉಪಯೋಜನೆಗಳಿಂದ ದಲಿತರು ಮತ್ತು ಆದಿವಾಸಿಗಳಿಗೆ ಏನೆಲ್ಲ ಅನುಕೂಲ ದೊರೆತಿದೆ? ಈ ಉಪಯೋಜನೆಗಳು ಅವರ ಬದುಕನ್ನು ಎಷ್ಟರಮಟ್ಟಿಗೆ ಉತ್ತಮ
ಪಡಿಸಿವೆ ಎಂಬುದು ಸ್ಪಷ್ಟವಿಲ್ಲ. ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಇವು ಹೇಗೆ ಅನುಷ್ಠಾನಗೊಳ್ಳುತ್ತಿವೆ ಎಂಬುದರ ಬಗ್ಗೆ ಖಚಿತ ಅಂಕಿಅಂಶಗಳು ದೊರೆಯುತ್ತಿಲ್ಲ. ಈ ಯೋಜನೆಗಳನ್ನು ರೂಢಿಗತ ರೀತಿಯಲ್ಲಿಯೇ ಜಾರಿ ಮಾಡಿಕೊಂಡು ಬರಲಾಗುತ್ತಿದೆ.

ಉಪಯೋಜನೆಯನ್ನು ಸರ್ಕಾರ ಇತರ ಯೋಜನೆಗಳಂತೆ ಪರಿಗಣಿಸಬಾರದು. ಪ್ರಜ್ಞಾಪೂರ್ವಕವಾಗಿ ಚಾರಿತ್ರಿಕವಾಗಿ ಪ್ರತ್ಯೇಕೀಕರಣವನ್ನುಸಾವಿರಾರು ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿರುವ ಈ ಸಮುದಾಯಗಳ ಅಭಿವೃದ್ಧಿಯೇ ಈ ಉಪಯೋಜನೆಗಳ ಮಹತ್ತರ ಉದ್ದೇಶವಾಗಿದೆ ಎಂಬುದನ್ನು ಮನಗಾಣಬೇಕು. ದಲಿತ ಸಮುದಾಯಗಳಲ್ಲಿ ಹೆಚ್ಚಿನ ಜನರಿಗೆ ಈ ಉಪಯೋಜನೆಯ ಅರಿವೇ ಇಲ್ಲ. ಚೂರುಪಾರು ತಿಳಿದಿರುವ ಅರ್ಹ ಬಡ ದಲಿತರ ಕೈಗೆ ಯೋಜನೆಯ ಫಲ ಎಟಕುವುದಿಲ್ಲ. ಈ ಯೋಜನೆಯೂ ದಲಿತರಲ್ಲೇ ಉಳ್ಳವರ ಪಾಲಾಗುತ್ತಿದೆ. ಹೀಗಾಗಿ ಈ ಉಪಯೋಜನೆಯ ಉದ್ದೇಶವೇನು, ಹೇಗೆ ಇದರ ಅನುಕೂಲಗಳನ್ನು ಪಡೆಯುವುದು ಎಂಬುದರ ಬಗ್ಗೆ ಈ ಸಮುದಾಯಗಳ ನಡುವೆ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ.

ಹಿಂದಿನ 40-50 ವರ್ಷಗಳಲ್ಲಿ ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವರೂಪದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ದಲಿತರು ಮತ್ತು ಆದಿವಾಸಿಗಳ ಸ್ಥಿತಿಗತಿಗಳಲ್ಲೂ ಗಮನಾರ್ಹ ಬದಲಾವಣೆಗಳಾಗಿವೆ. ಇದನ್ನೆಲ್ಲ ಮುಂದಿಟ್ಟು ಉಪಯೋಜನೆಗಳ ಮೌಲ್ಯಮಾಪನವಾಗಬೇಕು. ದಲಿತರು ಮತ್ತು ಆದಿವಾಸಿಗಳಿಗೆ ಇವುಗಳಿಂದ ಎಷ್ಟರ ಮಟ್ಟಿಗೆ ಅನುಕೂಲ ದೊರೆಯುತ್ತಿದೆ ಎಂಬುದರ ಅಧ್ಯಯನ ನಡೆಯಬೇಕು. ಆಗ ಇದರಲ್ಲಿ ಏನೆಲ್ಲ ಬದಲಾವಣೆಗಳಾಗಬೇಕು ಎಂಬುದು ತಿಳಿಯುತ್ತದೆ.

ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಬಳಿ ಇರುವ ಖಚಿತ ಅಂಕಿಅಂಶಗಳನ್ನು ಕಾಲಕಾಲಕ್ಕೆ ಪ್ರಕಟಿಸಬೇಕು. ಉದಾಹರಣೆಗೆ, ದಲಿತ ಮತ್ತು ಆದಿವಾಸಿ ಸಮುದಾಯಗಳಲ್ಲಿನ ಶಿಶುಮರಣ ಪ್ರಮಾಣ, ಆಯಸ್ಸು, ಬಡತನದ ಪ್ರಮಾಣ, ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತಹೀನತೆ, ಕುಡಿಯುವ ನೀರಿನ ಸಂಪರ್ಕ, ಕೃಷಿ ಜಮೀನು ಹೊಂದಿರುವವರ ಸಂಖ್ಯೆ, ಸ್ವಂತ ಮನೆ ಹೊಂದಿರುವವರು ಮತ್ತು ಹೊಂದದೇ ಇರುವವರ ಸಂಖ್ಯೆ, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿ ಇರುವವರ ಪ್ರಮಾಣ ಕುರಿತ ಅಂಕಿಅಂಶಗಳನ್ನುಪ್ರಕಟಿಸಬೇಕು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ಅನುದಾನದ ಬಿಡುಗಡೆ ಹಾಗೂ ವೆಚ್ಚದ ವಿವರಗಳನ್ನು ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಪ್ರಕಟಿಸುವುದನ್ನು ಆರಂಭಿಸಬೇಕು.

ಉಪಯೋಜನೆಗಳ ಅನುದಾನವನ್ನು ಸಾಮಾನ್ಯ ವಲಯಗಳಿಗೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು. ಮೆಟ್ರೊ ರೈಲು, ಬಸ್ ತಂಗುದಾಣಗಳು, ಹೆದ್ದಾರಿಗಳು, ಚೆಕ್‌ಡ್ಯಾಂಗಳಂತಹ ಕಾರ್ಯಗಳಿಗೆ ಉಪಯೋಜನೆ ಅನುದಾನವನ್ನು ನೀಡಲಾಗುತ್ತಿದೆ. ಹೀಗಾಗಿ, ಸಂಬಂಧಿಸಿದ ಕಾಯ್ದೆಯ ಸೆಕ್ಷನ್‌ 7(ಸಿ) ಮತ್ತು 7(ಡಿ)ಗಳಿಗೆ ತಕ್ಷಣ ತಿದ್ದುಪಡಿ ತಂದು, ಸಾಮಾನ್ಯ ವಲಯಗಳಿಗೆ ಈ ಉಪಯೋಜನೆಯ ಅನುದಾನ ನೀಡುವುದನ್ನು ನಿಲ್ಲಿಸಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಅನುದಾನವನ್ನು ಅರ್ಹ ದಲಿತರ ಸಬಲೀಕರಣಕ್ಕೆಂದೇ ಬಳಸುವಂತೆ ಆಗಬೇಕು. ಈ ದಿಸೆಯಲ್ಲಿ ಆಳುವ ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. ದಲಿತಪರ ಸಂಘಟನೆಗಳು ಈ ದಿಸೆಯಲ್ಲಿ ಏಕತೆಯಿಂದ ತಾತ್ವಿಕ ನೀತಿಯ ಆಧಾರದಲ್ಲಿ ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ಈ ಉಪಯೋಜನೆಯ ಮೂಲ ಉದ್ದೇಶವೇ ಬುಡಮೇಲಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT