ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಂತಿಗಳಿಗೊಂದು ಕಾರ್ಯಸೂಚಿ

ಸರ್ಕಾರಿ ಪ್ರಾಯೋಜಿತ ಜಯಂತಿಗಳನ್ನು ಸಮುದಾಯದ ಸಮಸ್ಯೆಗಳ ಚರ್ಚೆಗೆ ವೇದಿಕೆಯನ್ನಾಗಿಸಲು ಸಾಧ್ಯವಾದರೆ ಈ ಉದ್ದೇಶಕ್ಕೊಂದು ಅರ್ಥ ಬರಬಹುದು
Last Updated 21 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ವೋಟಿಗಾಗಿ ಆಯಾ ಸಮುದಾಯವನ್ನು ಓಲೈಸಲು ಜಾರಿಗೊಳಿಸಿದ ಸರ್ಕಾರಿ ಪ್ರಾಯೋಜಿತ ಜಯಂತಿಗಳನ್ನು ರದ್ದುಗೊಳಿಸುವುದು ಕಠಿಣ. ಆದರೆ ಜಯಂತಿಗಳನ್ನು ಆಯಾ ಸಮುದಾಯದ ಸಮಸ್ಯೆ, ಸವಾಲುಗಳನ್ನು ಚರ್ಚಿಸುವ ವೇದಿಕೆಯನ್ನಾಗಿಸ ಬಹುದು.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದ ತಕ್ಷಣ, ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವುದನ್ನು ರದ್ದು ಮಾಡಿತು. ಆ ಮೂಲಕ ಪಕ್ಷದ ಧೋರಣೆಯನ್ನು ಸ್ಪಷ್ಟಪಡಿಸಿತು.
ಸರ್ಕಾರದಿಂದ ಜಯಂತಿಗಳ ಆಚರಣೆ ಬೇಡ ಎನ್ನುವ ಚರ್ಚೆ ಇದೇ ಸಂದರ್ಭದಲ್ಲಿ ಮುನ್ನೆಲೆಗೆ ಬಂದು ಹಿಂದೆ ಸರಿಯಿತು. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ‘ಜಯಂತಿಗಳು ಜಾತಿಬದ್ಧವಾಗುತ್ತಿವೆ, ಏನು ಮಾಡುವುದೆಂದು ಯೋಚಿಸುತ್ತಿದ್ದೇವೆ’ ಎಂದಿದ್ದರು. ಸಂಸ್ಕೃತಿ ಸಚಿವರ ಮುಂದೆ ಖಚಿತವಾಗಿ ಎರಡು ದಾರಿಗಳಿವೆ. ಒಂದು: ಎಲ್ಲ ಸಮುದಾಯಗಳ ಮಹನೀಯರ ಜಯಂತಿಗಳನ್ನು ರದ್ದು ಮಾಡುವುದು. ಎರಡು: ಈ ಆಚರಣೆಗಳನ್ನು ‘ಜನಪರ ಆಡಳಿತ’ಕ್ಕೆ ಮತ್ತು ಆಯಾ ಸಮುದಾಯಕ್ಕೆ ಫಲಕಾರಿಯಾಗುವಂತೆ ಮರುರೂಪಿಸುವುದು.

ವೋಟಿಗಾಗಿ ಆಯಾ ಸಮುದಾಯವನ್ನು ಓಲೈಸಲು ಜಾರಿಗೊಳಿಸಿದ ಸರ್ಕಾರಿ ಪ್ರಾಯೋಜಿತ ಜಯಂತಿಗಳನ್ನು ರದ್ದುಗೊಳಿಸುವುದು ಕಠಿಣ. ಆದರೆ ಜಯಂತಿಗಳನ್ನು ಆಯಾ ಸಮುದಾಯದ ಸಮಸ್ಯೆ, ಸವಾಲುಗಳನ್ನು ಚರ್ಚಿಸುವ ವೇದಿಕೆಯನ್ನಾಗಿಸಬಹುದು. ‘ಜನಪರ ಆಡಳಿತ’ ನಡೆಸಲು ಸರ್ಕಾರವೂ, ಸಮುದಾಯಗಳ ಹಕ್ಕೊತ್ತಾಯ ಮಂಡಿಸಿ ಸರ್ಕಾರದ ಕಿವಿ ಹಿಂಡಲು ಸಮುದಾಯವೂ ಈ ಜಯಂತಿಗಳನ್ನು ಬಳಸಿಕೊಳ್ಳಬಲ್ಲ ಒಂದು ಕಾರ್ಯಸೂಚಿಯನ್ನು ಜಾರಿಗೆ ತರಬಹುದು.

ಯಾವುದೋ ಒಂದು ಸಮುದಾಯಕ್ಕೆ ಸೇರಿದ ಮಹನೀಯರ ಜಯಂತಿಗೆ ಪೂರಕವಾಗಿ ಸರ್ಕಾರವು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆ ಸಮುದಾಯಕ್ಕೆ ಸರ್ಕಾರದ ಯಾವ ಇಲಾಖೆಯ ಯೋಜನೆಗಳು ಅನ್ವಯವಾಗುತ್ತವೆ, ಆಯಾ ಸಮುದಾಯಕ್ಕೆ ಸರ್ಕಾರದಿಂದ ಆಗಿರುವ, ಆಗಬೇಕಿರುವ ಕೆಲಸಗಳೇನು ಎಂಬುದರ ಪಟ್ಟಿ ಮಾಡಬೇಕು. ಈ ಪಟ್ಟಿಯನ್ನು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಇಲಾಖೆಗಳ ಅಧಿಕಾರಿಗಳು ಆಯಾ ಜಯಂತಿಯ ವೇಳೆ ಮಂಡಿಸಬೇಕು. ಆಗ ಆ ಸಮುದಾಯದ ಅಹವಾಲು
ಗಳನ್ನು ಸ್ವೀಕರಿಸಬೇಕು. ಆಯಾ ಸಮುದಾಯಕ್ಕೆ ಇಲಾಖಾವಾರು ಆಗಬೇಕಾದ ಕೆಲಸಗಳ ಬೇಡಿಕೆ
ಪಟ್ಟಿಯನ್ನು ಸಮುದಾಯದ ಜನರಿಂದ ಸ್ವೀಕರಿಸಬೇಕು. ಮರುವರ್ಷ ಅದೇ ಜಯಂತಿಯಲ್ಲಿ, ಹಿಂದಿನ ವರ್ಷದ ಬೇಡಿಕೆ ಪಟ್ಟಿಯಲ್ಲಿ ಯಾವುದು ಈಡೇರಿದೆ, ಯಾವುದು ಈಡೇರಿಲ್ಲ, ಅದು ಯಾಕಾಗಿ ಈಡೇರಿಲ್ಲ ಎನ್ನುವುದರ ವಾರ್ಷಿಕ ವರದಿಯನ್ನು ಸರ್ಕಾರ ಬಿಡುಗಡೆ ಮಾಡಬೇಕು. ಅದೇ ಸಂದರ್ಭದಲ್ಲಿ ಈ ವರದಿ ಮಂಡನೆಯ ನಂತರ ಸಮುದಾಯದ ಪ್ರಶ್ನೆಗಳನ್ನು ಆಲಿಸಬೇಕು. ಅದಕ್ಕೆ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಉತ್ತರಿಸಬೇಕು.

ಇದು ಸರ್ಕಾರದ ಸಿದ್ಧತೆ ಮತ್ತು ಯೋಜನೆಯಾದರೆ, ಇದರಲ್ಲಿ ಆಯಾ ಸಮುದಾಯದ ಪ್ರಜ್ಞಾವಂತರ ಪಾತ್ರವೇನು ಎಂದು ಯೋಚಿಸಬೇಕಿದೆ. ಪ್ರತಿ ಸಮುದಾಯದ ಪ್ರಜ್ಞಾವಂತರು, ಸುಶಿಕ್ಷಿತರು ಅದರಲ್ಲೂ ವಿಶೇಷವಾಗಿ, ಕಲಿತ ಯುವಜನರು ತಮ್ಮ ಸಮುದಾಯದ ಮಹನೀಯರ ಜಯಂತಿಗೆ ಕನಿಷ್ಠ ಮೂರು ತಿಂಗಳ ಮುಂಚೆ ಕಾರ್ಯಪ್ರವೃತ್ತರಾಗಬೇಕು. ಮುಖ್ಯವಾಗಿ ಗ್ರಾಮ, ಗ್ರಾಮ ಪಂಚಾಯಿತಿ, ತಾಲ್ಲೂಕು ಮಟ್ಟದಲ್ಲಿ ಆಯಾ ಸಮುದಾಯದ ಯುವಕ, ಯುವತಿಯರ ಒಂದು ಗುಂಪು ಕ್ಷೇತ್ರಕಾರ್ಯ ಮಾಡಿ, ಸಮುದಾಯದ ಸಮಸ್ಯೆಗಳನ್ನು ಪಟ್ಟಿ ಮಾಡಿ ಇಲಾಖಾವಾರು ವಿಭಾಗಿಸಬೇಕು. ಹೀಗೆ ಸಿದ್ಧಗೊಂಡ ಗ್ರಾಮಗಳ ಪಟ್ಟಿಯನ್ನು ಆಧರಿಸಿ ತಾಲ್ಲೂಕು ಮಟ್ಟದ ವರದಿ ಹಾಗೂ ಈ ವರದಿಯನ್ನು ಆಧರಿಸಿ ಜಿಲ್ಲಾ ಮಟ್ಟದ ವರದಿ ರೂಪುಗೊಳ್ಳಬೇಕು.

ಜಯಂತಿಯ ದಿನ ವೇದಿಕೆಗೆ, ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಅಥವಾ ಇಲಾಖಾ ಪ್ರತಿನಿಧಿ
ಗಳು ಕಡ್ಡಾಯವಾಗಿ ಹಾಜರಾಗುವಂತೆ ಸಮುದಾಯವು ಆಹ್ವಾನ ಕೊಡಬೇಕು. ಇದರಲ್ಲಿ ಕ್ಷೇತ್ರದ ಶಾಸಕ ಮತ್ತು ಸಂಸದರೂ ಸೇರಿ ಶಿಕ್ಷಣ, ಕೃಷಿ, ಆರೋಗ್ಯ, ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಒಳಗೊಂಡಂತೆ ಎಲ್ಲಾ ಇಲಾಖೆಗಳಿಗೆ ಮುಂದಿನ ಒಂದು ವರ್ಷದಲ್ಲಿ ಸಮುದಾಯಕ್ಕೆ ಮಾಡಬಹುದಾದ ಕೆಲಸಗಳ ಪಟ್ಟಿಯನ್ನು ನೀಡಿ ಸ್ವೀಕೃತಿಯನ್ನು ಪಡೆಯಬೇಕು. ಸಾಧ್ಯವಾದರೆ ಸಭೆಯ ಕೊನೆಗೆ ಎಲ್ಲಾ ಇಲಾಖೆಯವರಿಂದ ‘ಈ ಪಟ್ಟಿಯಲ್ಲಿ ಕೊಟ್ಟ ಕೆಲಸಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಪೂರೈಸಲು ಶ್ರಮಿಸುತ್ತೇವೆ’ ಎಂದು ಜನರೆದುರು ಪ್ರತಿಜ್ಞೆ ಮಾಡಿಸಬೇಕು.

ಇದೇ ಜಯಂತಿಯ ಮುಂದಿನ ವರ್ಷ ಆಯಾ ಇಲಾಖೆಗೆ ಹಿಂದಿನ ವರ್ಷ ಸಲ್ಲಿಸಿದ ಬೇಡಿಕೆಗಳನ್ನು ಆಧರಿಸಿ ವಾರ್ಷಿಕ ವರದಿಯನ್ನು ಮಂಡಿಸಲು ಸೂಚಿಸಬೇಕು. ಈ ವರದಿಯು, ಈಗಾಗಲೇ ಪೂರೈಸಿದ ಕೆಲಸಗಳನ್ನೋ, ಸಮುದಾಯದ ಎದುರು ತಪ್ಪೊಪ್ಪಿಗೆಯನ್ನೋ, ಈ ಕೆಲಸ ಆಗದೇ ಇರುವುದಕ್ಕೆ ಕಾರಣವನ್ನೋ, ಈ ಕೆಲಸ ಮಾಡಲು ಮತ್ತಷ್ಟು ಸಮಯವನ್ನೋ ಕೇಳುವ ಅಥವಾ ಮಂಡಿಸುವ ಮಾದರಿಯಲ್ಲಿ ಇರಬೇಕು.

ಈ ಬಗೆಯ ಕ್ರಿಯಾ ಯೋಜನೆ ವಾರ್ಷಿಕವಾಗಿ ಪುನರಾವರ್ತನೆ ಆಗಬೇಕು. ಹೀಗಾದಲ್ಲಿ ಜಯಂತಿ
ಗಳು ಸರ್ಕಾರವನ್ನು, ಅಧಿಕಾರಶಾಹಿಯನ್ನು ಜನಪರಗೊಳಿಸಲು ಮತ್ತು ಆಯಾ ಸಮುದಾಯದ ಜನರನ್ನು ಪ್ರಜ್ಞಾವಂತರನ್ನಾಗಿಸಲು ನೆರವಾಗುತ್ತವೆ. ಆಗ ಮಾತ್ರ ವಾರ್ಷಿಕ ಜಯಂತಿಗಳು ಕುಣಿದು ಕುಪ್ಪಳಿಸುವ ಆಚರಣೆಗಳಾಗದೆ, ಆಯಾ ಸಮುದಾಯಕ್ಕೆ ಫಲ ಕೊಡುವ ವೇದಿಕೆಗಳಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT