ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ : ಬುದ್ಧನೆಂಬ ಪ್ರಬುದ್ಧ ಧನ್ವಂತರಿ

ಮನುಕುಲಕ್ಕೆ ದಯೆ, ಅನುಕಂಪವನ್ನು ಹೇಳಿಕೊಟ್ಟ ಬುದ್ಧ, ಮನುಷ್ಯಸಂತತಿ ಅಸ್ತಿತ್ವದಲ್ಲಿ ಇರುವವರೆಗೆ ಸಂಗತವಾಗಿ ಇರುತ್ತಾನೆ
Published 4 ಮೇ 2023, 20:32 IST
Last Updated 4 ಮೇ 2023, 20:32 IST
ಅಕ್ಷರ ಗಾತ್ರ

‘ಎಲ್ಲ ಸಂಗತಿಗಳೂ ತಮ್ಮ ಅಸ್ತಿತ್ವಕ್ಕಾಗಿ ಅಂತರವಲಂಬಿಯಾಗಿವೆ’- ಬುದ್ಧನ ಈ ಗ್ರಹಿಕೆ ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ. ಏಕೆಂದರೆ, ನಮ್ಮ ಜಗತ್ತಿನ ಅನ್ಯೋನ್ಯಾಶ್ರಯ ಗುಣ ಹಾಗೂ ನಮ್ಮ ಕ್ರಿಯೆಗಳಿಂದ ಪರರಿಗೆ ಮತ್ತು ಪರಿಸರಕ್ಕೆ ಆಗುವ ಪ್ರಭಾವವನ್ನು ಅದು ಎತ್ತಿಹಿಡಿಯುತ್ತದೆ.

ನಾವು ಈ ಕ್ಷಣದಲ್ಲಿದ್ದು, ನಮ್ಮ ಆಲೋಚನೆಗಳಲ್ಲಿ, ಭಾವನೆಗಳಲ್ಲಿ ಹಾಗೂ ಕ್ರಿಯೆಗಳಲ್ಲಿ ಜಾಗೃತರಾಗಿ ಇರಬೇಕೆಂದು 2,500 ವರ್ಷಗಳಿಗೂ ಹಿಂದೆ ಗೌತಮ ಬುದ್ಧ ಬೋಧಿಸಿದ. ನಾವು ವೃಥಾ ಗುರಿಯಾಗಿರುವ ಒತ್ತಡವನ್ನು ನಿಭಾಯಿಸುವಲ್ಲಿ, ನಮ್ಮ ಭೌತಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಿಟ್ಟುಕೊಳ್ಳುವಲ್ಲಿ ಆತನ ನುಡಿ ಸಾರ್ವಕಾಲಿಕವಾದುದು. ಬುದ್ಧ ತನ್ನೆಲ್ಲ ರಾಜವೈಭೋಗವನ್ನು ತ್ಯಜಿಸಿ ಬದುಕಿನ ಮೂಲ ಉದ್ದೇಶದ ಶೋಧಕ್ಕೆ ಮುಂದಾದ.

ಜಗತ್ತಿನಾದ್ಯಂತ ಎಲ್ಲ ಸಮಾಜಗಳು ತಮಗೆ ಹಿತವಾದ್ದನ್ನು, ಒಗ್ಗುವುದನ್ನು ಇಷ್ಟಪಡುತ್ತವೆ, ಸುಖ ಮತ್ತು ಸಂತೋಷಕ್ಕಾಗಿ ಹಂಬಲಿಸುತ್ತವೆ. ಆದರೆ ಆಧ್ಯಾತ್ಮಿಕ ಮೌಲ್ಯಗಳನ್ನು ಕಡೆಗಣಿಸಿ ಬರೀ ವಸ್ತುವಾದ, ಐಹಿಕ ಪ್ರವೃತ್ತಿಯ ಬೆನ್ನೇರಿದರೆ ನೆಮ್ಮದಿ ಗಗನಕುಸುಮವಾಗುತ್ತದೆ. ದುಃಖಕ್ಕೆ ಕಾರಣವಾದುದು ಆಸೆ. ಕಂಡಿದ್ದನ್ನೆಲ್ಲ ಹೊಂದಬೇಕು, ಹೊಂದಿದವುಗಳ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ತೀರದ ಬಯಕೆ ಮನುಷ್ಯನನ್ನು ಅಧೋಗತಿಗೆ ತಲುಪಿಸುತ್ತದೆ. ಅವನು ಸುಖಿಯಾಗುವ ಬದಲು ದಿಕ್ಕೆಟ್ಟು ವ್ಯಸನಿಯಾಗುತ್ತಾನೆ. ಪ್ರಯತ್ನ, ಜೀವನೋಪಾಯ, ಸಾವಧಾನಶೀಲತೆ, ಏಕಾಗ್ರತೆ, ದೃಷ್ಟಿ, ಉದ್ದೇಶ, ಮಾತು ಮತ್ತು ನಡೆ- ಈ ಎಂಟು ಮಾರ್ಗಗಳನ್ನು ಉದಾತ್ತಗೊಳಿಸಿಕೊಂಡರೆ ಜೀವನ ಹಸನಾಗುವುದೆಂದು ಬುದ್ಧ ಪ್ರತಿಪಾದಿಸಿದ. ನಿಷ್ಕಳಂಕ ಪ್ರೀತಿ ಮತ್ತು ತೆರೆದ ಮನಸ್ಸಿನಲ್ಲಿ ಅವನ ಉಪದೇಶಗಳು ಸಾಂದ್ರಗೊಂಡಿವೆ. ಚಕ್ರವು ಎತ್ತಿನ ಪಾದವನ್ನು ಹಿಂಬಾಲಿಸಿದಂತೆ ದುಷ್ಟ ಆಲೋಚನೆಯ ಮಾತು ಮತ್ತು ಕೃತಿಯನ್ನು ನೋವು ಹಿಂಬಾಲಿಸುತ್ತದೆ.

ಎಂತಹ ನಕಾರಾತ್ಮಕ ಶಕ್ತಿ ನಮ್ಮಲ್ಲಿ ಪುಟಿದರೂ ಅದು ಪ್ರೀತಿಗೆ ಸೋಲುತ್ತದೆ. ಮನುಕುಲಕ್ಕೆ ದಯೆ, ಅನುಕಂಪ ಹೇಳಿಕೊಟ್ಟ ಬುದ್ಧ, ಮನುಷ್ಯಸಂತತಿ ಅಸ್ತಿತ್ವದಲ್ಲಿ ಇರುವವರೆಗೆ ಸಂಗತವಾಗಿರುತ್ತಾನೆ. ಮಹಾನ್ ಧೈರ್ಯಶಾಲಿ, ಪ್ರಾಮಾಣಿಕನಾಗಿದ್ದ ಆತ ಜಗತ್ತಿಗೆ ಮೊದಲಿಗೆ ಸಂಪೂರ್ಣ ನೀತಿ ಸಂಹಿತೆಯನ್ನು ಕೊಟ್ಟ ಧೀಮಂತ.

ಅನಗತ್ಯವನ್ನು ಅಗತ್ಯವೆಂದು, ಅಗತ್ಯವನ್ನು ಅನಗತ್ಯವೆಂದು ಭ್ರಮಿಸುವುದೇ ಬದುಕು ಗೊಂದಲಮಯವಾಗಲು ಕಾರಣ. ಇದರ ಫಲ, ಅಗತ್ಯವಾದ್ದು ನಮಗೆ ಲಭಿಸದು. ಅಂಗಡಿ, ಮಳಿಗೆ, ಉದ್ಯಾನ... ಎಲ್ಲವೂ ಮನೆಗೆ ಹತ್ತಿರದಲ್ಲೇ ಇರುತ್ತವೆ, ನಡಿಗೆಯಲ್ಲಿ ಹೋಗಿಬರಬಹುದು. ಆದರೂ ಇರಲೊಂದು ಕಾರು ಎನ್ನುವ ಬೀಗು. ಅಗತ್ಯಗಳನ್ನು ಸೃಷ್ಟಿಸಿಕೊಳ್ಳುವುದೆಂದರೆ ಇದೇ ಅಲ್ಲವೆ? ಇರುವ ಮನೆ ಪಸಂದಾಗಿಯೇ ಇರುತ್ತದೆ. ಮೌಢ್ಯಕ್ಕೊ, ಪರರನ್ನು ಮೆಚ್ಚಿಸುವುದಕ್ಕೊ ಕೆಡವಿ ಮತ್ತೆ ಮನೆ ಕಟ್ಟುವ ಗೀಳು. ವಸ್ತುವಾದಕ್ಕೆ ಜೋತು ಬೀಳುವ ಒಂದು ನಿದರ್ಶನವಿದು. ಹಳೆಯ ಮನೆ ಉರುಳಿಸಿದಾಗ ಬೀಳುವ ದೂಳು, ಧೂಮ, ತ್ಯಾಜ್ಯ, ಆಗುವ ಸದ್ದು, ಭೂಸವೆತ ಅಪಾರ. ಇನ್ನು ಹೊಸ ಮನೆ ನಿರ್ಮಾಣದಲ್ಲೋ ಪರಿಸರದ ಮೇಲೆ ಇದರ ದುಪ್ಪಟ್ಟು ಒತ್ತಡ ಖಚಿತ. ಪಾಯಕ್ಕೆ ಕಲ್ಲು, ಇಟ್ಟಿಗೆಯಿಂದ ಹಿಡಿದು ಗೋಡೆಗಳಿಗೆ ಲೇಪಿಸುವ ಬಣ್ಣದವರೆಗೆ ಎಲ್ಲವನ್ನೂ ಖರೀದಿಸುವ ಭರಾಟೆಯೇನು ಕಡಿಮೆಯೆ? ಕೊಳ್ಳುಬಾಕತನ ಪರಿಸರವನ್ನು ಪರೋಕ್ಷವಾಗಿ ಇನ್ನಷ್ಟು ಬಳಲಿಸಿರುತ್ತದೆ. ಅಭಿವೃದ್ಧಿ ಬೇಡವೆಂದಲ್ಲ, ಅದರೆ ಗೊತ್ತು, ಗುರಿ ಸ್ಪಷ್ಟವಾಗಿರಬೇಕು.

ವೈಜ್ಞಾನಿಕ ಚಿಂತನೆ ಮತ್ತು ಮುಕ್ತ ವಿಚಾರವಾದವನ್ನು ಉತ್ತೇಜಿಸಿದ ಬುದ್ಧ, ಧರ್ಮವೆಂದರೆ ಸತ್ಯ ಎಂಬ ಸರಳ ಪಾಠವನ್ನು ಪ್ರಚುರಪಡಿಸಿದ. ಧರ್ಮವು ಕ್ಷಮೆ, ಸೃಜನಶೀಲತೆಯನ್ನು ಉತ್ತೇಜಿಸುವ ಚಲನಶೀಲ ಬಲವಾಗಬೇಕೆಂದು ಅವನು ಆಶಿಸಿದ. ನಾವೆಲ್ಲರೂ ಬೌದ್ಧ ಧರ್ಮದ ಅನುಯಾಯಿಗಳು ಎನ್ನುವುದಕ್ಕಿಂತ ನಾವು ಒಬ್ಬೊಬ್ಬರೂ ಬುದ್ಧರಾಗಬೇಕಿದೆ. ಇದು ಯಾವುದೇ ಸತ್ವಯುತ ಧರ್ಮಕ್ಕೂ ಅನ್ವಯಿಸುತ್ತದೆ. ತಾನು ಹೇಳಿದಂತೆ ನಡೆದುಕೊಳ್ಳಬೇಕೆಂದು ಬುದ್ಧ ಒತ್ತಾಯಿಸಲಿಲ್ಲ. ಆಲೋಚಿಸಿ, ಸಂದೇಹಗಳುಂಟಾದರೆ ಪ್ರಶ್ನಿಸಿ, ಸರಿಯೆನ್ನಿಸಿದರೆ ಮಾತ್ರವೇ ಪಾಲಿಸಿ ಎಂದ ಸಂಪನ್ನ ಸಂತ ಆತ. ಅವನ ಹಿತನುಡಿಯು ಸಂಪೂರ್ಣ, ಗಹನ, ದೋಷರಹಿತ ಮತ್ತು ಪ್ರಾಯೋಗಿಕ. ಬುದ್ಧ ಅಂಧಶ್ರದ್ಧೆ, ಮೌಢ್ಯಕ್ಕೆ ಕಿಂಚಿತ್ತೂ ಸೊಪ್ಪು ಹಾಕದ ವಿಚಾರ ಗಾರುಡಿಗ. ಅವನ ಬೋಧನೆಗಳಿಗೆ ಆಕರವಾಗಿದ್ದು ಅವನ ನಂಬಿಕೆ, ಚಿಂತನೆಗಳಲ್ಲ. ಬದಲಿಗೆ ಅವನು ಪಟ್ಟ ಅನುಭವಗಳು.

ಬುದ್ಧನ ಸಮಕಾಲೀನರು ಅವನು ಸರ್ವದಾ ಹಸನ್ಮುಖಿ ಎಂದು ಬಣ್ಣಿಸಿದ್ದಾರೆ. ಅವನಿಗೆ ಮಂದಸ್ಮಿತ ಪ್ರಾಪ್ತವಾಗಿದ್ದು ಆತನ ಅಂತರಂಗದ ಗಾಢ ಚಿತ್ತಶಾಂತಿಯಿಂದ. ಬುದ್ಧ ಆದಿವಿಚಾರವಾದಿ, ಆದಿವಿಜ್ಞಾನಿ. ಮನುಷ್ಯನ ಪರಿತಾಪ ಮತ್ತು ಭಾವಾವೇಶವನ್ನು ಸಮರ್ಥವಾಗಿ ಅರಿತಿದ್ದ ಧೀಮಂತ. ಒಂದು ಉಪಮೆ ಅತ್ಯಂತ ಸಮಂಜಸವಾಗಿದೆ. ಅಸತ್ಯವೆಂಬ ವ್ಯಾಧಿಗೆ ಬುದ್ಧನೆಂಬ ಉತ್ತಮ ವೈದ್ಯ ಬೇಕು. ಆತನೊಂದಿಗೆ ಧರ್ಮ ಎಂಬ ಉತ್ತಮ ಔಷಧಿ, ಸಂಘವೆಂಬ ಉತ್ತಮ ದಾದಿ ಇರಬೇಕು.

ಬುದ್ಧ ಜನಿಸಿದ ಕಾಲಕ್ಕೆ ಭಾರತ ಸಿರಿವಂತ ದೇಶವಾಗಿತ್ತು, ಜನಸಂಖ್ಯೆ ಎರಡು ಕೋಟಿ ಮೀರಿರಲಿಲ್ಲ. ಸರ್ವ ಭೋಗ, ಸವಲತ್ತು, ಸುಭಿಕ್ಷ ತಾಂಡವವಾಡುತ್ತಿದ್ದವು. ಇಷ್ಟಾದರೂ ಮನಸ್ಸಿಗೆ ಏನೋ ಅಸಮಾಧಾನ, ಕಸಿವಿಸಿ. ಹಾಗಾಗಿ ಜನ ಪ್ರಶ್ನಿಸಲಾರಂಭಿಸಿದರು. ಭವರೋಗ ಚಿಕಿತ್ಸೆಗೆ ಬುದ್ಧನಂತಹ ಆಧ್ಯಾತ್ಮಿಕ ಧನ್ವಂತರಿಯೇ ಬೇಕಾಯಿತು. ಕುವೆಂಪು ಅವರ ‘ಬುದ್ಧದೇವ’ ಕವಿತೆಯ ಕೆಲ ಹೃದಯಸ್ಪರ್ಶಿ ಸಾಲುಗಳಿವು:
‘ಹೇ ಬುದ್ಧದೇವ, ನಿನ್ನತುಲ ಬುದ್ಧಿಸ್ಫೂರ್ತಿ
ಮಾನವನ ಮೂರ್ಖತೆಯ ದಹಿಸುವ ಮಹಾಜ್ವಾಲೆ
...ಹೇ ಪುಣ್ಯಮತಿಮೂರ್ತಿ, ಮತದ ಮತಿಹೀನತೆಯು
ಸಾಕೆಮಗೆ, ಬೇಕು ಸನ್ಮತಿಯ ನಾಗರಿಕತೆಯು
ನರನ ಸನ್ಮತಿಗಿಂತ ಬೇರೆಯ ಜಗದ್ಗುರುವೆ?’

ಅಂದಹಾಗೆ, ಇಂದು (ಮೇ 5) ಬುದ್ಧ ಜಯಂತಿ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT