ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಚಳವಳಿ

Last Updated 5 ಡಿಸೆಂಬರ್ 2022, 4:34 IST
ಅಕ್ಷರ ಗಾತ್ರ

‘ವರ್ತಮಾನದಲ್ಲಿ ‘ಧ್ವನಿ ಇಲ್ಲದವರು’ ಎಂಬ ವರ್ಗ ಅಸ್ತಿತ್ವದಲ್ಲಿ ಇಲ್ಲ, ಒಂದೋ ಅಧಿಕಾರದ ಬಲದಿಂದ ಜನರ ಧ್ವನಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗಿದೆ,ಇಲ್ಲವೇ ಅದೇ ಅಧಿಕಾರದ ಭಯದ ಕಾರಣಕ್ಕೆ ಹಲವರು ಮೌನಕ್ಕೆ ಶರಣಾಗಿದ್ದಾರೆ’. ನಮ್ಮ ನಡುವಿನ ಮುಖ್ಯ ಚಿಂತಕಿ ಅರುಂಧತಿ ರಾಯ್ ಅವರ ಈ ಮಾತುಗಳನ್ನು ಓದುತ್ತಿರುವಾಗ, ಆಕೆ ವರ್ತಮಾನ ದಲ್ಲಿ ಅಧಿಕಾರವು ಸೃಜಿಸುತ್ತಿರುವ ಭಯದ ಎರಡು ಸ್ವರೂಪಗಳ ಕುರಿತು ನಮ್ಮ ಗಮನ ಸೆಳೆಯುತ್ತಿದ್ದಾರೆಅನ್ನಿಸುತ್ತದೆ. ಈ ಹೊತ್ತಿನಲ್ಲಿಯೇ, ಇತ್ತೀಚಿನ ವರ್ಷಗಳಲ್ಲಿ ಅದೇ ಅಧಿಕಾರದ ಭಯವನ್ನು ಪ್ರಜಾಸತ್ತಾತ್ಮಕ ಹಾದಿಯಲ್ಲಿ ಎದುರಿಸಿ ಗೆಲುವು ಸಾಧಿಸಿದ ಕರ್ನಾಟಕದ ಎರಡು ಮುಖ್ಯ ‘ಸಾಮಾಜಿಕ ಚಳವಳಿಗಳು’ ನೆನಪಾಗುತ್ತವೆ.

ಅದು 2016. ಕೇಂದ್ರ ಸರ್ಕಾರ ಪಿ.ಎಫ್ (ಭವಿಷ್ಯ ನಿಧಿ) ಕುರಿತು ಹೊಸ ನಿಯಮಗಳನ್ನು ರೂಪಿಸಿ ಜಾರಿಗೊಳಿಸಲು ಮುಂದಾಗುತ್ತದೆ. ಎಲ್ಲಿರುತ್ತಾರೋ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಸಾವಿರ ಸಾವಿರ ಸಂಖ್ಯೆಯಲ್ಲಿ ಬೆಂಗಳೂರಿನ ಬೀದಿ ಗಳನ್ನು ಆಕ್ರಮಿಸಿಕೊಳ್ಳುತ್ತಾರೆ. ಬಸ್ಸು, ರೈಲು ಎಲ್ಲದಕ್ಕೂ ತಡೆಯೊಡ್ಡುತ್ತಾರೆ, ಮೊದಲ ಬಾರಿ ಬೆಂಗಳೂರಿನ ಮೆಟ್ರೊ ಸಂಚಾರವನ್ನು ನಿಲ್ಲಿಸಿಬಿಡುತ್ತಾರೆ. ಸಂಜೆಯಾಗುವುದರೊಳಗೆ ತನ್ನ ಪ್ರಸ್ತಾಪಿತ ಉದ್ದೇಶದಿಂದ ಹಿಂದೆ ಸರಿಯುವ ಒತ್ತಡಕ್ಕೆ ಸರ್ಕಾರ ಬೀಳುತ್ತದೆ.

ಇದಾದ ನಂತರ, ಮಂಗಳೂರಿನಿಂದ 16 ಕಿ.ಮೀ.ದೂರದಲ್ಲಿರುವ ಸುರತ್ಕಲ್ ಎಂಬ ಊರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪಿಸಲಾಗಿರುವ ಸುಂಕದಕಟ್ಟೆ ಕಾನೂನುಬಾಹಿರವಾದದ್ದು, ಇಲ್ಲಿ ಸುಂಕ ವಸೂಲಿ ಮಾಡುವುದು ಅನೈತಿಕ ಎಂಬ ಜನ ಹೋರಾಟವೊಂದು ಆರಂಭವಾಗುತ್ತದೆ. ಸುಮಾರು ಆರು ವರ್ಷಗಳ ನಿರಂತರ ಹೋರಾಟದ ನಂತರವೂ ಆಳುವವರು ಜಗ್ಗದಿದ್ದಾಗ, ಇದೇ ವರ್ಷದಲ್ಲಿ ಸುಂಕದಕಟ್ಟೆಗೆ ಮುತ್ತಿಗೆ ಹಾಕುವ ಹೋರಾಟವೊಂದು ಪಕ್ಷಾತೀತವಾಗಿ ರೂಪುಗೊಳ್ಳುತ್ತದೆ.

ಪ್ರಭುತ್ವ ಅದಕ್ಕೂ ಬಗ್ಗದಿದ್ದಾಗ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ಘೋಷಣೆಯಾಗಿ ಅದು 35 ದಿನಗಳ ಕಾಲ ನಿರಂತರವಾಗಿ ನಡೆಯುತ್ತದೆ. ಮುಖ್ಯವಾಗಿ ಹೆಣ್ಣುಮಕ್ಕಳೂ ಈ ಹೋರಾಟದ ಭಾಗವಾಗಿ ನಿಲ್ಲುತ್ತಾರೆ. ಈ ಹೋರಾಟ ಸೃಷ್ಟಿಸಿದ ಒತ್ತಡದ ಕಾರಣಕ್ಕೆ ಸರ್ಕಾರವು ಈ ಸುಂಕದಕಟ್ಟೆಯ ಬಂದ್‌ಗೆ ಆದೇಶಿಸುತ್ತದೆ. ಇದು ಪಕ್ಷಾತೀತವಾಗಿ ಹೋರಾಡಿದ ಕರಾವಳಿಯ ಜನಧ್ವನಿಗೆ ಸಿಕ್ಕ ಗೆಲುವು ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ.

ಹಾಗೆ ನೋಡುವುದಾದರೆ, 1970- 80ರ ಕಾಲ ಘಟ್ಟದಲ್ಲಿ ಅಮೆರಿಕದಲ್ಲಿ ಹುಟ್ಟಿಕೊಂಡ ತೃತೀಯ ಜಗತ್ತಿನ ಸ್ತ್ರೀವಾದಿ ಹೋರಾಟವು ‘ಯಾವುದಾದರೂ ಒಂದು ನಿರ್ದಿಷ್ಟ ಸಿದ್ಧಾಂತವು ಸಾಮಾಜಿಕ ಚಳವಳಿಗಳ ಪಾಲಿಗೆ ಅಂತಿಮ ಸತ್ಯವಾಗಿರಬೇಕು’ ಎಂಬ ಸಾಮಾಜಿಕ ಚಳವಳಿಗಳ ಹಿಂದಿದ್ದ ಪ್ರಭಾವಿ ಗ್ರಹಿಕೆಯನ್ನು ಮುರಿಯಿತು. ನ್ಯಾಯವನ್ನು ಪಡೆಯಲು ಪ್ರಗತಿಪರ ಆಲೋಚನೆಯ ಎಲ್ಲಾ ಸಿದ್ಧಾಂತಗಳು ತಮ್ಮ ಆಂತರಿಕ ಭಿನ್ನತೆಗಳ ಆಚೆಗೆ ಐಕ್ಯ ಹೋರಾಟವನ್ನು ನಿರ್ವಹಿಸಬೇಕು ಎಂಬ ಮುಖ್ಯವಾದ ಸಂದೇಶವನ್ನು ಅಲ್ಲಿನ ಸಮಾಜ ಮತ್ತು ರಾಜಕಾರಣದ ಮುಂದಿಟ್ಟಿತ್ತು.

ಮೇಲೆ ಸೂಚಿಸಿದ, ರಾಜ್ಯದಲ್ಲಿನ ಎರಡು ಚಳವಳಿಗಳೂ ಯಾವುದೇ ಒಂದು ಸಿದ್ಧಾಂತ, ಒಂದು ನಾಯಕತ್ವ ಆಧರಿಸಿ ರೂಪುಗೊಂಡವಲ್ಲ. ಇವು ಜನಪರವಾಗಿ ಯೋಚಿಸುವ ಎಲ್ಲಾ ಸಂಘಟನೆ, ಪಕ್ಷ, ಸಿದ್ಧಾಂತಗಳನ್ನು ಒಟ್ಟುಗೂಡಿಸಿಕೊಂಡು ಸಹಜವಾಗಿ ಹುಟ್ಟಿಕೊಂಡ ಸಾವಯವ ಜನಹೋರಾಟ ಎಂಬ ಸಂಗತಿಯನ್ನು ನಾವು ಗುರುತಿಸಬಹುದಾಗಿದೆ.

ಈ ಎರಡೂ ಹೋರಾಟಗಳಿಂದ ನಾವು ಕಲಿಯ ಬೇಕಾದ ಮತ್ತೊಂದು ಮುಖ್ಯ ಪಾಠವೊಂದಿದೆ. ಅದು, ಜಾಗತೀಕರಣದ ನಂತರ ಸ್ಥಳೀಯರ ಸಮಸ್ಯೆ ಗಳನ್ನು ಕೇಂದ್ರೀಕರಿಸಿ ನಡೆಯುತ್ತಿದ್ದ ಸಾಮಾಜಿಕ ಚಳವಳಿಗಳು ಹಿನ್ನಡೆ ಅನುಭವಿಸಿವೆ, ಅವುಗಳ ಜಾಗದಲ್ಲಿ ‘ಜಾಗತಿಕ ಚಳವಳಿಗಳು’ ಮುನ್ನೆಲೆಗೆ ಬಂದಿವೆ ಎಂಬುದು. ಉದಾಹರಣೆಗೆ, ಮೂಲಭೂತ ಹಕ್ಕುಗಳ ಚಳವಳಿ, ಪರಿಸರ ಚಳವಳಿ, ಪ್ರಜಾಪ್ರಭುತ್ವ ಉಳಿಸಿ ಹೋರಾಟದಂತಹವು. ಈ ಮಾದರಿಯ ಚಳವಳಿಯಿಂದ ಉತ್ತೇಜಿತರಾದ ಕೆಲವರು ಮಣ್ಣು ಉಳಿಸಿ, ನದಿ ಉಳಿಸಿ, ಧರ್ಮ ಉಳಿಸಿ ಎನ್ನುವಂತಹ ಅಖಿಲ ಭಾರತ ಮಟ್ಟದ ಹೋರಾಟಗಳನ್ನು ಘೋಷಿಸಿದ್ದನ್ನು ನೋಡುತ್ತಿದ್ದೇವೆ. ಮೂಲತಃ ಇವು ‘ಜಾಗತೀಕರಣ ಎಂಬ ರಾಜಕೀಯ ಯೋಜನೆ’ಯ ಭಾಗವಾಗಿಯೇ ಇರುವಂತಹ ಹೋರಾಟಗಳಾಗಿರು ವುದರಿಂದ ಅವು ಎಷ್ಟೇ ದೊಡ್ಡ ಮಟ್ಟದ ಚರ್ಚೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪಿಸಿದರೂ ಸ್ಥಳೀಯ ಜನರನ್ನು ಆಕರ್ಷಿಸಲು ಸಾಧ್ಯವಾಗುವುದಿಲ್ಲ. ಇವು ಸ್ಥಳೀಯ ಹಂತದಲ್ಲಿ ಜನರು ಎದುರಿಸುತ್ತಿರುವ ಹೆದ್ದಾರಿ ಶುಲ್ಕ, ಜಾತಿ ಶೋಷಣೆ, ನಿರುದ್ಯೋಗ, ಕೂಲಿಯಲ್ಲಿ ತಾರತಮ್ಯದಂತಹ ಸಮಸ್ಯೆಗಳನ್ನು ಯಾವ ಅರ್ಥದಲ್ಲಿಯೂ ಪ್ರತಿನಿಧಿಸುವುದಿಲ್ಲ.

ಜಾಗತೀಕರಣೋತ್ತರ ಬದಲಾವಣೆಯ ಕಾಲಕ್ಕೆ ಹುಟ್ಟಿಕೊಂಡ ‘ಜಾಗತಿಕ ಚಳವಳಿ’ ಎಂಬ ನಿರೂಪಣೆಯನ್ನೇ ಕರ್ನಾಟಕದಲ್ಲಿ ಘಟಿಸಿದ ಈ ಎರಡೂ ಚಳವಳಿಗಳು ಮುರಿಯುವ ಮೂಲಕ ಸ್ಥಳೀಯರ ಸಮಸ್ಯೆಗಳನ್ನು ಆಧರಿಸಿಯೇ ಸಾಮಾಜಿಕ ಹೋರಾಟಗಳು ರೂಪುಗೊಳ್ಳಬೇಕು, ಅವುಗಳೇ ನಿಜವಾದ ಪ್ರಜಾಸತ್ತಾತ್ಮಕ ಸಾಮಾಜಿಕ ಚಳವಳಿಗಳು, ಆ ಮಾದರಿಯ ಚಳವಳಿಗಳು ಮಾತ್ರವೇ ಫಲಿತಾಂಶ ಕೊಡಬಲ್ಲವು ಎಂಬ ಪಾಠವನ್ನು ನಮ್ಮ ಮುಂದಿಟ್ಟಿವೆ.

ಕರ್ನಾಟಕದ ದಲಿತ ಸಂಘಟನೆಗಳು ಏಕತಾ ಸಮಾವೇಶವನ್ನು (ಡಿ. 6) ಆಯೋಜಿಸಿವೆ. ಈ ಎಲ್ಲಾ ಬೆಳವಣಿಗೆಗಳು ನಾವು ಒಪ್ಪಿರುವ ಪ್ರಜಾತಂತ್ರ ವ್ಯವಸ್ಥೆಯ ಆರೋಗ್ಯದ ದೃಷ್ಟಿಯಿಂದ ಮಹತ್ವದ ಸಂಗತಿಗಳು ಅನ್ನಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT