ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓದುವ ಸಂಸ್ಕೃತಿ’ಗೆ ಬೇಕು ಕಾಯಕಲ್ಪ

ಗ್ರಂಥಾಲಯಗಳು ಓದುಗಸ್ನೇಹಿಯೇ ಆಗದಿದ್ದರೆ, ಅವು ಸಾಂಸ್ಕೃತಿಕ ಕೇಂದ್ರಗಳಾಗಿ ಪರಿವರ್ತನೆಗೊಳ್ಳಲು ಹೇಗೆ ಸಾಧ್ಯ?
Last Updated 16 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಕಳೆದ ವರ್ಷ ನಾನು ಸಿಂಗಪುರಕ್ಕೆ ತೆರಳಿದ್ದಾಗ, ಅಲ್ಲಿನ ಬುಗಿಸ್ ಎಂಬ ಪ್ರದೇಶದ ಗ್ರಂಥಾಲಯಕ್ಕೆ ಭೇಟಿ ನೀಡಿದ್ದೆ. ಕಾರ್ಪೊರೇಟ್‌ ಕಚೇರಿಯಂತೆ ಭವ್ಯವಾಗಿದ್ದ ಆ ಕಟ್ಟಡವನ್ನು ಕಂಡು ಅವಾಕ್ಕಾದೆ. ತಂತ್ರಜ್ಞಾನ ಪ್ರಣೀತ ಸಿಂಗಪುರದಲ್ಲಿ ಕೇವಲ ವಿಜ್ಞಾನ, ತಂತ್ರಜ್ಞಾನಕ್ಕೆ ಒತ್ತು ಕೊಡಲಾಗಿದೆ ಎಂಬ ತಪ್ಪು ಅಭಿಪ್ರಾಯವಿದೆ. ಆದರೆ ಅಲ್ಲಿಯ ಗ್ರಂಥಾಲಯವನ್ನು ನೋಡಿದರೆ ಎಂತಹವರೂ ಬೆರಗಾಗುತ್ತಾರೆ.

16 ಅಂತಸ್ತಿನ ಆ ಕಟ್ಟಡದ ಕೆಲವು ಮಹಡಿಗಳಲ್ಲಿ ಗ್ರಂಥಾಲಯವಿದ್ದು, ಎಲ್ಲ ಜ್ಞಾನ ಶಾಖೆಗಳನ್ನೂ ಒಳಗೊಂಡ ಇಂಗ್ಲಿಷ್, ಚೀನಿ, ತಮಿಳು ಹಾಗೂ ಮಲಯ್ ಭಾಷೆಗಳ ಪುಸ್ತಕ ಸಂಗ್ರಹವಿದೆ. ಅಪರೂಪದ ಐತಿಹಾಸಿಕ ಪರಾಮರ್ಶನ ಸಾಮಗ್ರಿಗಳು, ಗ್ರಂಥಗಳು ಲಭ್ಯವಿವೆ. ಸಾಹಿತ್ಯವಷ್ಟೇ ಅಲ್ಲ, ಎರಡು ಮಹಡಿಗಳು ರಂಗ ಶಿಕ್ಷಣ ಹಾಗೂ ರಂಗಭೂಮಿಯ ಚಟುವಟಿಕೆಗಳಿಗೆ ಮೀಸಲಾಗಿವೆ. ಮತ್ತೊಂದು ಮಹಡಿಯು ಉದ್ಯಮ ಹಾಗೂ ನಿರ್ವಹಣೆಯ ಜಾಗತಿಕ ಒಳನೋಟದ ಗ್ರಂಥಗಳಿಗೆ ಮೀಸಲು.

ಇನ್ನೊಂದು ಮಹಡಿಯಲ್ಲಿ ಅಂತರರಾಷ್ಟ್ರೀಯ ವೀಕ್ಷಣ ಕಲೆ ಹಾಗೂ ಆಗ್ನೇಯ ಏಷ್ಯಾದ ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಸಂಗ್ರಹಗಳಿವೆ. ಸಂಗೀತದ ಲೈಬ್ರರಿ ಇದ್ದು, ಸಿಂಗಪುರದ ಸಂಗೀತ ಪರಂಪರೆಯನ್ನು ಸಂರಕ್ಷಿಸಿ, ಅದರ ಸಂಶೋಧನೆ ಬಗ್ಗೆ ಅರಿವು ಮೂಡಿಸುವ ರಾಷ್ಟ್ರವ್ಯಾಪಿ ಉಪಕ್ರಮವನ್ನು ತಿಳಿಯಬಹುದಾಗಿದೆ. ಇಲ್ಲಿನ ಮತ್ತೊಂದು ವೈಶಿಷ್ಟ್ಯವೆಂದರೆ, ದೇಶದ ಪ್ರಮುಖ ವಾರ್ತಾಪತ್ರಿಕೆಗಳಲ್ಲಿ ಪ್ರಕಟವಾಗಿರುವ ಮಹತ್ವದ ಲೇಖನಗಳ ಡಿಜಿಟಲ್ ಸಂಗ್ರಹ.

ಇದನ್ನೆಲ್ಲ ಗಮನಿಸಿದಾಗ, ನಮ್ಮಲ್ಲಿ ಗ್ರಂಥಾಲಯ ವ್ಯವಸ್ಥೆ ಹಾಗೂ ಅದರ ಇಲಾಖೆ ಹೇಗೆ ಜಡ್ಡುಗಟ್ಟಿದೆ ಎಂಬುದು ಮನಸ್ಸಿಗೆ ಬಂದು, ಬೇಸರವಾಗದೇ ಇರದು. ಗ್ರಂಥಾಲಯವು ಪುಸ್ತಕ ಸಂಸ್ಕೃತಿಯನ್ನು ಪೋಷಿಸುವ ಕೇಂದ್ರವಾಗಬೇಕು. ಪುಸ್ತಕಗಳೇ ಜ್ಞಾನವಾಹಿನಿಗಳು ಎಂಬುದನ್ನು ಮುಖ್ಯವಾಗಿ ಯುವಜನರಿಗೆ ಮನದಟ್ಟು ಮಾಡಿಕೊಡಬೇಕಾದ ತುರ್ತು ಈಗ ಉಂಟಾಗಿದೆ. ಆದರೆ, ಇದನ್ನು ಮನಗಂಡು ಮುನ್ನಡೆಸುವ ಮನಸ್ಸುಗಳು ಹೆಚ್ಚಾಗಿ ಕಾಣಿಸುತ್ತಿಲ್ಲ.

ನಗರ ಪ್ರದೇಶಗಳ ಕೆಲವು ಗ್ರಂಥಾಲಯಗಳು, ತಂತ್ರಜ್ಞಾನ ಬಳಕೆಯಿಂದಾಗಿ ಹೈಟೆಕ್ ಸ್ವರೂಪವನ್ನು ಪಡೆದಿರಬಹುದು. ಆದರೆ ಬಹುತೇಕ ಗ್ರಂಥಾಲಯಗಳು ಸ್ಥಳಾವಕಾಶ ಹಾಗೂ ನಿರ್ವಹಣೆಯ ಕೊರತೆಯಿಂದ ತತ್ತರಿಸಿವೆ. ಕೇವಲ ವಾರ್ತಾಪತ್ರಿಕೆಗಳನ್ನು ಓದಲು ಹಾಗೂ ವಿಶ್ರಾಂತಿ ಪಡೆಯಲು ಬರುವ ತಾಣಗಳಾಗಿ ಅವು ಪರಿಣಮಿಸಿವೆ. ಹೀಗಾಗಿ, ಪುಸ್ತಕದ ಸದಭಿರುಚಿಯನ್ನು ಬೆಳೆಸುವುದರ ಕಡೆಗೆ ನಾವು ಗಮನಕೊಡಲೇಬೇಕಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು ತಮಗೆ ಅಗತ್ಯವಾದ ಪುಸ್ತಕ
ಗಳಿಗಾಗಿ ಮುಗಿಬಿದ್ದು, ಸಂಜೆವರೆಗೂ ಅಲ್ಲಿಯೇ ಕುಳಿತು ಅಧ್ಯಯನ ನಡೆಸುವುದನ್ನು ಅನೇಕ ಕಡೆ ನಾವು ಕಾಣಬಹುದು. ಅದಕ್ಕೆ ಅಗತ್ಯವಿರುವ ಪುಸ್ತಕಗಳು ಎಲ್ಲ ಗ್ರಂಥಾಲಯಗಳಲ್ಲಿ ಲಭ್ಯವಿರಬೇಕು. ಅವಶ್ಯವಾದ ಎಲ್ಲ ಸಾಹಿತ್ಯ ಕೃತಿಗಳೂ ಸಿಗುವಂತಾಗಬೇಕು.

ಗ್ರಂಥಾಲಯ ಇಲಾಖೆಯು ಮೂರ್ನಾಲ್ಕು ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕಗಳನ್ನು ಈ ವರ್ಷ ಪೂರೈಸುವ ಪರಿಪಾಟವನ್ನು ಇಟ್ಟುಕೊಂಡಿದೆ. ಇದರಿಂದ ಇತ್ತೀಚಿನ ಪುಸ್ತಕಗಳು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಹೇಗೆತಾನೆ ಲಭ್ಯವಾಗುತ್ತವೆ? ಇಂತಹ ವ್ಯವಸ್ಥೆಗಿಂತ ಅಧ್ವಾನವಾದುದು ಬೇರೆ ಇರಲಾರದು. ಪುಸ್ತಕ ಪ್ರಕಾಶಕರಿಗೆ ಸಕಾಲದಲ್ಲಿ ಹಣ ಸಿಗುವುದೂ ದುರ್ಲಭವಾಗಿದೆ ಎಂದು ಹೇಳಲಾಗುತ್ತಿದೆ.

ಗ್ರಂಥಾಲಯಗಳಿಗೆ ಆದ್ಯತೆ ಮೇರೆಗೆ ಸ್ಥಳಾವಕಾಶ ದೊರಕಿಸುವ ಮಹತ್ತರವಾದ ಹೊಣೆಯನ್ನು ಸ್ಥಳೀಯ ಆಡಳಿತಗಳು ಸಮರ್ಪಕವಾಗಿ ನಿರ್ವಹಿಸಬೇಕು. ಪುಸ್ತಕಗಳ ಕೊಳ್ಳುವಿಕೆಯ ವಿಧಾನ ಪಾರದರ್ಶಕವಾಗಿ ಇರಬೇಕು. ಎಲ್ಲ ಕಡೆಯೂ ಗ್ರಂಥಾಲಯಗಳು ಜನರನ್ನು ಆಕರ್ಷಿಸುವಂತೆ ಇರಬೇಕು.

ರಾಜ್ಯದಲ್ಲಿ ರೋಗಗ್ರಸ್ತವಾಗಿರುವ ಸಾವಿರಾರು ಗ್ರಂಥಾಲಯಗಳಿಗೆ ಹೊಸ ರೂಪ ನೀಡಿ, ಅವುಗಳನ್ನು ಜ್ಞಾನದೊಂದಿಗೆ ಸಾಂಸ್ಕೃತಿಕ ಕೇಂದ್ರಗಳಾಗಿ ಬದಲಾಯಿಸಲು ಸರ್ಕಾರ ಈಗಷ್ಟೇ ಯೋಜನೆಯೊಂದನ್ನು ರೂಪಿಸಿದೆ. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಲಹಾ ಸಮಿತಿ ನೇಮಿಸಲು ನಿರ್ಧರಿಸಲಾಗಿದೆ. ಗ್ರಂಥಾಲಯ ಡಿಜಿಟಲೀಕರಣ, ಕಂಪ್ಯೂಟರ್‌ ಒದಗಿಸುವುದು, ಓದುಗರೊಂದಿಗೆ ಸಂವಾದ, ಯಾವ ಪುಸ್ತಕಗಳಿರಬೇಕೆಂಬ ಬಗ್ಗೆ ಸಲಹೆ, ಉದ್ಯೋಗ ಮಾಹಿತಿ, ತಜ್ಞರಿಂದ ಉಪನ್ಯಾಸ, ಜನರನ್ನು ಗ್ರಂಥಾಲಯದತ್ತ ಸೆಳೆಯಲು ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಸೂಕ್ತ ಸಲಹೆ ನೀಡುವುದು ಈ ಸಮಿತಿಯ ಹೊಣೆ. ಇದು ಕೇವಲ ಸಲಹೆಗಳ ಮಟ್ಟದಲ್ಲೇ ಉಳಿಯದೆ ಕಾರ್ಯರೂಪಕ್ಕೆ ಬಂದು, ಗ್ರಂಥಾಲಯಗಳ ಬಗ್ಗೆ ಜನ ನಿಜವಾದ ಆಸಕ್ತಿ ತೋರುವಂತಾದರೆ, ಈ ಉದ್ದೇಶ ಸಾರ್ಥಕವಾಗಬಹುದು.

ಗ್ರಂಥಾಲಯಗಳ ನಿರ್ವಹಣೆಗೆ ಸಾರ್ವಜನಿಕರು ನೀಡುವ ತೆರಿಗೆಯಲ್ಲಿ ಒಂದು ಪಾಲಷ್ಟೇ ಅದಕ್ಕೆ ಮೀಸಲಾಗಿದೆ. ಆದರೆ ಈ ಬಾಬ್ತು ಕೋಟ್ಯಂತರ ರೂಪಾಯಿಯು ಇಲಾಖೆಗೆ ವರ್ಗಾವಣೆಗೊಳ್ಳುತ್ತಿಲ್ಲ ಎಂಬ ದೂರು ಇದ್ದೇ ಇದೆ. ಪರಿಸ್ಥಿತಿ ಹೀಗಿರುವಾಗ, ಗ್ರಂಥಾಲಯಗಳು ಉದ್ಧಾರವಾಗಲು ಸಾಧ್ಯವೇ? ಪುಸ್ತಕಗಳ ಖರೀದಿ ದರ ಪರಿಷ್ಕರಣೆಯಂತಹ ಸಮಸ್ಯೆಗಳನ್ನು ತಜ್ಞರೊಡನೆ ಚರ್ಚಿಸಿ ಬಗೆಹರಿಸಿ
ಕೊಳ್ಳಬಹುದು. ಗ್ರಂಥಾಲಯಗಳು ಓದುಗಸ್ನೇಹಿಯೇ ಆಗದಿದ್ದರೆ, ಸಾಂಸ್ಕೃತಿಕ ಕೇಂದ್ರಗಳಾಗಿ
ಪರಿವರ್ತನೆಗೊಳ್ಳಲು ಹೇಗೆ ಸಾಧ್ಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT