ಬೆಂಗಳೂರಿನಿಂದ ಪಾವಗಡಕ್ಕೆ ಹೋಗುವ ಬಸ್ಸುಗಳನ್ನು ಸಾರಿಗೆ ಇಲಾಖೆಯವರು ಒಮ್ಮೆ ನೋಡಲಿ. ತುಮಕೂರಿನಿಂದ ದೊಡ್ಡಬಳ್ಳಾಪುರಕ್ಕೆ ದಿನನಿತ್ಯ ಪ್ರಯಾಣಿಸುವವರ ಗೋಳಂತೂ ಹೇಳತೀರದು. ಮೂರು ಬಸ್ಸಿನ ಪ್ರಯಾಣಿಕರನ್ನು ಒಂದೇ ಬಸ್ಸಿನಲ್ಲಿ ತುಂಬಿರುತ್ತಾರೆ. ಸೀಮಿತ ಸಂಖ್ಯೆಯಲ್ಲಿ ಬಸ್ಸುಗಳು ಇರುತ್ತವೆ. ಏಕೆ ಹೀಗೆ ಎಂದು ತುಮಕೂರು ಬಸ್ ಘಟಕದವರನ್ನು ಕೇಳಿದರೆ, ತಮಗೆ ಗೊತ್ತಿಲ್ಲ, ದೊಡ್ಡಬಳ್ಳಾಪುರ ಘಟಕದವರನ್ನು ಕೇಳಿ ಎನ್ನುತ್ತಾರೆ. ದೊಡ್ಡಬಳ್ಳಾಪುರ ಘಟಕದ ಸಿಬ್ಬಂದಿಯಿಂದ ‘ಯಾರಿಗಾದರೂ ಹೇಳ್ಕೋ ಹೋಗು, ಏನಾದರೂ ಮಾಡ್ಕೋ ಹೋಗು’ ಎಂಬಂಥ ಉತ್ತರ ಬರುತ್ತದೆ. ಇನ್ನು ಚಾಲಕ, ನಿರ್ವಾಹಕರಿಂದಲೂ ಇದೇ ಬಗೆಯ ಉತ್ತರ ದೊರೆಯುತ್ತದೆ. ಹಾಗಿದ್ದರೆ ಪ್ರಯಾಣಿಕರು ಯಾವ ಕಾರಣಕ್ಕೆ, ಎಷ್ಟು ಸಮಯ ಹೀಗೆ ತೊಂದರೆ ಅನುಭವಿಸಬೇಕು? ಪಾವಗಡ ಮತ್ತು ಕಳ್ಳಂಬೆಳ್ಳದಂತಹ ದುರಂತ ಮರುಕಳಿಸಬಾರದೆಂದರೆ ದೊಡ್ಡಬಳ್ಳಾಪುರ-ತುಮಕೂರು ಮಾರ್ಗದಲ್ಲಿ ಬಸ್ಗಳ ಸೇವೆಯನ್ನು ಹೆಚ್ಚಿಸಬೇಕು.