ಜೆಎಂಎಂ ಲಂಚ ಪ್ರಕರಣ: ವಿಶೇಷ ಕೋರ್ಟಿನಲ್ಲಿ ನ. 4ರಿಂದ ವಿಚಾರಣೆ
ನವದೆಹಲಿ, ಸೆ. 25 (ಯುಎನ್ಐ, ಪಿಟಿಐ)– ಜೆಎಂಎಂ ಲಂಚ ಪ್ರಕರಣದಲ್ಲಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಹಾಗೂ ಇತರ 19 ಮಂದಿಯ ವಿರುದ್ಧ ನಿಯೋಜಿತ ಸಿಬಿಐ ನ್ಯಾಯಾಲಯ ಇಂದು ದೋಷಾರೋಪ ನಿಗದಿಪಡಿಸಿತು.
ಪ್ರಧಾನಿಯಾಗಿದ್ದವರು ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿ, ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವುದು ಇದೇ ಮೊದಲು. ಅವರು ವಿಚಾರಣೆ ಎದುರಿಸುತ್ತಿರುವ ಎರಡನೇ ಕ್ರಿಮಿನಲ್ ಪ್ರಕರಣ ಇದಾಗಿದ್ದು, ಲಕ್ಕೂಭಾಯಿ ಪಾಠಕ್ ವಂಚನೆ ಪ್ರಕರಣದಲ್ಲೂ ನರಸಿಂಹರಾವ್ ವಿಚಾರಣೆ ಎದುರಿಸುತ್ತಿದ್ದಾರೆ.
ಸರ್ಕಾರಿ ಗೌರವದೊಂದಿಗೆ ಇಂದು ವೆಂಕಟರಾಮಯ್ಯ ಅಂತ್ಯಕ್ರಿಯೆ
ಬೆಂಗಳೂರು, ಸೆ. 25– ನಿನ್ನೆ ಮಧ್ಯರಾತ್ರಿ ನಿಧನರಾದ ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಇ.ಎಸ್.ವೆಂಕಟರಾಮಯ್ಯ ಅವರ ಅಂತಿಮ ಸಂಸ್ಕಾರವು ನಾಳೆ ರಾಜ್ಯ ಸರ್ಕಾರಿ ಗೌರವದೊಂದಿಗೆ ಅವರ ಹುಟ್ಟೂರಾದ ತಣ್ಣೂರಿನಲ್ಲಿ ನಡೆಯಲಿದೆ.
ವೆಂಕಟರಾಮಯ್ಯ ಅವರ ಮನೆಗೆ ತೆರಳಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ಅಂತಿಮ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಈ ವಿಷಯ ತಿಳಿಸಿದರು. ದಿವಂಗತರ ಗೌರವಾರ್ಥ ರಾಜ್ಯ ಸರ್ಕಾರ ಇಂದು ಶೋಕಾಚರಣೆ ಘೋಷಿಸಿತ್ತು.