ನವದೆಹಲಿ, ಏ. 11– ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಪುನರ್ನಾಮಕರಣ ಮಾಡುವ ಕರ್ನಾಟಕ ಸರ್ಕಾರದ ಮನವಿಯನ್ನು, ಲೋಕಸಭಾ ಚುನಾವಣಾ ಪ್ರಕ್ರಿಯೆಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಚುನಾ ವಣಾ ಆಯೋಗ ಇಂದು ತಳ್ಳಿಹಾಕಿತು.
ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರನ್ನು ಇಡಬೇಕೆಂದು ಬಸವದಳ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಇಡಬೇಕೆಂದು ದಲಿತ ಸಂಘಟನೆಗಳು ಚಳವಳಿ ಮಾಡುತ್ತಿರುವುದರಿಂದ ಈ ವಿಷಯದಲ್ಲಿ ತಾನು ತೀರ್ಮಾನ ಕೈಗೊಳ್ಳಬಹುದೇ ಎಂದು ಕರ್ನಾಟಕ ಸರ್ಕಾರವು ಚುನಾವಣಾ ಆಯೋಗದ ಸಲಹೆ ಕೇಳಿತ್ತು.
ಭಟ್ಕಳ ಶಾಸಕನ ಹತ್ಯೆ ಘಟನೆಸಿಬಿಐ ತನಿಖೆಗೆ
ಬೆಂಗಳೂರು, ಏ. 11– ಭಟ್ಕಳ ಕ್ಷೇತ್ರದ ಬಿಜೆಪಿ ಶಾಸಕ ಡಾ. ಯು.ಚಿತ್ತರಂಜನ್ ಅವರನ್ನು ಅಪರಿಚಿತ ವ್ಯಕ್ತಿಗಳು ನಿನ್ನೆ ರಾತ್ರಿ ಅವರ ಮನೆಯಲ್ಲೇ ಗುಂಡಿಟ್ಟು ಕಗ್ಗೊಲೆ ಮಾಡಿರುವ ಪ್ರಕರಣದ ತನಿಖೆ ಯನ್ನು ಸಿಬಿಐಗೆ ವಹಿಸಲು ಸರ್ಕಾರ ನಿರ್ಧ ರಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಇಂದು ಇಲ್ಲಿ ಪ್ರಕಟಿಸಿದರು.
‘ಸಿಬಿಐ ತನಿಖೆಯ ಜೊತೆಗೇ ಈ ಘಟನೆಯ ಬಗ್ಗೆ ರಾಜ್ಯ ಹೈಕೋರ್ಟಿನ ಹಾಲಿ ನ್ಯಾಯಾಧೀಶರೊಬ್ಬರಿಂದ ನ್ಯಾಯಾಂಗ ತನಿಖೆ ನಡೆಸಲೂ ತೀರ್ಮಾನಿಸಲಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.