ಸಂಸತ್ತಿನಲ್ಲಿ ಜೈನ್ ವರದಿಮಂಡನೆ: ಗುಪ್ತಾ ಸ್ಪಷ್ಟನೆ ನವದೆಹಲಿ, ನ. 13 (ಪಿಟಿಐ)– ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ ಮಾಡುತ್ತಿರುವ ನ್ಯಾಯಮೂರ್ತಿ ಮಿಲಾಪ್ ಚಂದ್ ಜೈನ್ ಆಯೋಗದ ಮಧ್ಯಂತರ ವರದಿ ಹಾಗೂ ಅದನ್ನು ಆಧರಿಸಿ ತೆಗೆದುಕೊಂಡ ಕ್ರಮದ ವಿವರವನ್ನು ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದೆಂದು ಗೃಹ ಸಚಿವ ಇಂದ್ರಜಿತ್ ಗುಪ್ತಾ ಇಂದು ತಿಳಿಸಿದರು.
ವರದಿಯನ್ನು ತಡೆಹಿಡಿಯುವ ಅಥವಾ ಯಾರನ್ನೇ ರಕ್ಷಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿವಾದ ಇತ್ಯರ್ಥಕ್ಕೆ ಕೇಸರಿ ಜತೆ ಗುಜ್ರಾಲ್ ಚರ್ಚೆ ನವದೆಹಲಿ, ನ. 13– ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಜೈನ್ ಆಯೋಗದ ಮಧ್ಯಂತರ ವರದಿಯ ಸೋರಿಕೆಯು ಎಬ್ಬಿಸಿರುವ ವಿವಾದಕ್ಕೆ ಪರಿಹಾರ ಕಂಡುಹಿಡಿಯಲು ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಇಂದು ರಾತ್ರಿ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಮತ್ತು ಇತರ ನಾಯಕರೊಡನೆ ಮಾತುಕತೆ ನಡೆಸಿದರು.
‘6 ಸಾವಿರ ಮೆ.ವಾ. ವಿದ್ಯುತ್ ಉತ್ಪಾದನೆಗೆ ಅನುಮತಿ’ ತುಮಕೂರು, ನ. 13– ಆರು ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದನಾ ಯೋಜನೆಗಳಿಗೆ ಮಂಜೂರಾತಿ ದೊರಕಿದ್ದು, ಮುಂದಿನ ಮೂರು ವರ್ಷಗಳಲ್ಲಿ ಮೂರು ಸಾವಿರ ಮೆಗಾ ವಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದಿಸಲಾಗು ವುದು ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಹೇಳಿದರು.
ಕುಣಿಗಲ್ ತಾಲ್ಲೂಕಿನ ಅಂಚೆಪಾಳ್ಯದಲ್ಲಿ 220 ಕೆ.ವಿ. ಸಾಮರ್ಥ್ಯದ ವಿದ್ಯುತ್ ಸ್ವೀಕರಣಾ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 5 ಮತ್ತು 6ನೇ ಸ್ಥಾವರದ ನಿರ್ಮಾಣ ಕಾರ್ಯವನ್ನು ಸದ್ಯದಲ್ಲೇ ಪ್ರಾರಂಭಿಸಲಾಗುವುದು ಎಂದರು.