ಲಾಹೋರ್, ಫೆ. 21– ಪಾಕಿಸ್ತಾನದ ಕಾದಂಬರಿಕಾರ್ತಿಯೊಬ್ಬಳು ಭಾರತದ ಪ್ರಧಾನಿ ಎ.ಬಿ.ವಾಜಪೇಯಿ ಅವರನ್ನು ವಿವಾಹವಾಗಲು ಮುಂದೆ ಬಂದಿದ್ದಾರೆ!
ಆದರೆ ಅದಕ್ಕೆ ಅವರದು ಒಂದೇ ಷರತ್ತು. ವಾಜಪೇಯಿ ಅವರು ಕಾಶ್ಮೀರ ಸಮಸ್ಯೆಯನ್ನು ಪಾಕಿಸ್ತಾನ ಬಯಸುವಂತೆ ಬಗೆಹರಿಸಬೇಕು!
ವಾಜಪೇಯಿ ಅವರು ಕಾಶ್ಮೀರದ ವಿಷಯದಲ್ಲಿ ಮಾತುಕತೆ ಪುನರಾರಂಭಿಸಿರುವುದರಿಂದ ಹಾಗೂ ಪಾಕಿಸ್ತಾನದ ಜತೆ ಬಾಂಧವ್ಯವೃದ್ಧಿಗೆ ಪ್ರಯತ್ನ ನಡೆಸಿರುವುದರಿಂದ ಅವರ ಬಗ್ಗೆ ತಮಗೆ ಮೆಚ್ಚುಗೆ ಇದೆ ಎಂದು 37 ವರ್ಷದ ಅತಿಯಾ ಶಂಶದ್ ಹೇಳಿರುವುದಾಗಿ ಉರ್ದು ಪತ್ರಿಕೆ ‘ಜಂಗ್’ ವರದಿ ಮಾಡಿದೆ.
ನಾನು 1992ರಲ್ಲಿ ರಸಾಯನ ವಿಜ್ಞಾನದಲ್ಲಿ ಪಿಎಚ್.ಡಿ ಗಳಿಸಿದ್ದೇನೆ. ಭಾರತದ ಪ್ರಧಾನಿ ಕಾಶ್ಮೀರ ವಿವಾದವನ್ನು ಪಾಕಿಸ್ತಾನಕ್ಕೆ ಅನುಕೂಲಕರವಾಗಿ ತೀರ್ಮಾನಿಸಲು ಒಪ್ಪಿದರೆ ಅವರ ಜತೆ ವೈಯಕ್ತಕ ಸಂಬಂಧದ ಹೊಸ ರಸಾಯನ ವಿಜ್ಞಾನ ಅಭ್ಯಸಿಸಲಿಕ್ಕೂ ತಯಾರು’ ಎಂದು ಶಂಶದ್ ಹೇಳಿದ್ದಾರೆ.
ಎಲ್ಲ ಪ್ರಶ್ನೆ ಇತ್ಯರ್ಥಕ್ಕೆ ಭಾರತ–ಪಾಕ್ ಸಮ್ಮತಿ
ಲಾಹೋರ್, ಫೆ. 21–ಜಮ್ಮು–ಕಾಶ್ಮೀರವೂ ಸೇರಿದಂತೆ ಎಲ್ಲಾ ದ್ವಿಪಕ್ಷೀಯ ಪ್ರಶ್ನೆಗಳನ್ನು ಬಗೆಹರಿಸುವುದಕ್ಕೆ ಪ್ರಯತ್ನ ನಡೆಸುವುದಾಗಿ ಭಾರತ–ಪಾಕಿಸ್ತಾನ ಇಂದು ಇಲ್ಲಿ ಒಪ್ಪಂದ ಮಾಡಿಕೊಂಡವಲ್ಲದೆ, ಪರಸ್ಪರ ಆಂತರಿಕ ವಿಚಾರಗಳಲ್ಲಿ ಮಧ್ಯಪ್ರವೇಶ ಹಾಗೂ ಹಸ್ತಕ್ಷೇಪ ಮಾಡದೇ ಇರಲು ಸಮ್ಮತಿಸಿದವು.
ಭಾರತದ ಪ್ರಧಾನಿ ಎ.ಬಿ.ವಾಯಪೇಯಿ ಅವರ ಚಾರಿತ್ರಿಕ ಬಸ್ ಪ್ರಯಾಣದ ನಂತರ ಅವರು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಜತೆ ನಡೆಸಿದ ಶೃಂಗಸಭೆಯಲ್ಲಿ ಈ ಒಪ್ಪಂದಕ್ಕೆ ಬರಲಾಯಿತು.