ನವದೆಹಲಿ, ಫೆ. 27– ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ಟನ್ನು ಇಂದು ಮಂಡಿಸಿದ ಹಣಕಾಸು ಸಚಿವ ಯಶವಂತ ಸಿನ್ಹಾ, ಮುಕ್ತ ಆರ್ಥಿಕ ನೀತಿಯ ವಿಸ್ತರಣೆಗೆ ಉತ್ತೇಜಕ ಕ್ರಮ, ಹಣಕಾಸು ಸ್ಥಿತಿಯ ಸುಧಾರಣೆ, ಹಣಕಾಸು ಕೊರತೆಯ ನಿಯಂತ್ರಣ, ಗ್ರಾಮೀಣ ಅರ್ಥ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಿ, ಗ್ರಾಮ ಪಂಚಾಯತ್ ಸಂಸ್ಥೆಗಳಿಗೆ ಹೆಚ್ಚು ಹಣಕಾಸು ಅಧಿಕಾರ ನೀಡಿರುವುದು ಈ
ಬಾರಿಯ ವಿಶೇಷ.
ಸಂಜೆ ಐದು ಗಂಟೆಗೆ ಬಜೆಟ್ ಮಂಡನೆ ಮಾಡುತ್ತಿದ್ದ ಬ್ರಿಟಿಷ್ ರಾಜ್ ಸಂಸ್ಕೃತಿಗೆ ಕೊನೆ ಹೇಳಿ, ಬೆಳಿಗ್ಗೆ ಹನ್ನೊಂದು ಗಂಟೆಗೆ ಯಶವಂತ ಸಿನ್ಹಾ ಲೋಕಸಭೆಯಲ್ಲಿ ಇಂದು ಬಜೆಟ್ ಮಂಡಿಸಿದ್ದು ವಿಶೇಷ. ಸಾಮಾನ್ಯವಾಗಿ ಸಂಸತ್ ಅಧಿವೇಶನ ಶನಿವಾರದಂದು ಇರುವುದಿಲ್ಲ. ಆದರೆ, ಈ ಬಾರಿ ಶನಿವಾರದಂದು ಬಜೆಟ್ ಮಂಡಿಸಿದ್ದು ಸಿನ್ಹಾ ಅವರ ಮತ್ತೊಂದು ವಿಶೇಷ.