ಗಂಗಾವತಿ, ಮೇ 11– ಹೊಸಪೇಟೆ ಬಳಿಯ ಸಕ್ಕರೆ ಕಾರ್ಖಾನೆಯಿಂದ ವಿಷಪೂರಿತ ರಾಸಾಯನಿಕಗಳನ್ನು ತುಂಗಭದ್ರಾ ನದಿಗೆ ಹಾಕಿದ ಪರಿಣಾಮವಾಗಿ ನದಿ ನೀರು ಮಲಿನವಾಗಿದ್ದು, ಅದನ್ನು ಸೇವಿಸಿದ ಮೂವರು ಗ್ರಾಮಸ್ಥರು ಸಾವನ್ನಪ್ಪಿದ್ದಾರೆ. ಐದು ಜನರ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
8 ಸಾವಿರ ಲೀಟರ್ ಸಾಮರ್ಥ್ಯದ ನಾಲ್ಕು ಟ್ಯಾಂಕರುಗಳಲ್ಲಿ ಈ ರಾಸಾಯನಿಕ ಇತ್ತು. ಆ ಟ್ಯಾಂಕರುಗಳು ಒಡೆದು ಹೋದುದರಿಂದ ರಾಸಾಯನಿಕವನ್ನು ಕಾಲುವೆಗೆ ಬಿಡಲಾಗಿತ್ತು.
ತುಂಗಾ ಮೇಲ್ದಂಡೆ: ಬಾಂಡ್ ಮೂಲಕ ಹಣ ಸಂಗ್ರಹ
ಮಂಗಳೂರು, ಮೇ 11– ತುಂಗಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ಬಾಂಡ್ಗಳ ಮೂಲಕ ಜನರಿಂದ ಹಣ ಸಂಗ್ರಹಿಸಲು ಸರ್ಕಾರ ಆಲೋಚಿಸುತ್ತಿದೆ ಎಂದು ಭಾರೀ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಹೇಳಿದರು.
ಕೃಷ್ಣಾ ಜಲಭಾಗ್ಯ ಬಾಂಡ್ಗಳ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆಗೆ 800 ಕೋಟಿ ರೂ.ಗಳನ್ನು ಸಂಗ್ರಹಿಸಿದ ಹಾಗೆ ತುಂಗಾ ಮೇಲ್ದಂಡೆ ಯೋಜನೆಗೂ ಜನರಿಂದ ಹಣ ಸಂಗ್ರಹಿಸುವ ಪ್ರಸ್ತಾವ ಸಚಿವ ಸಂಪುಟದ ಮುಂದಿದೆ ಎಂದು ತಿಳಿಸಿದರು.