ನವದೆಹಲಿ, ಮೇ 2 (ಯುಎನ್ಐ, ಪಿಟಿಐ)– ಆರು ರಾಷ್ಟ್ರೀಯ ಪಕ್ಷಗಳು ಮತ್ತು 48 ಪ್ರಾದೇಶಿಕ ಪಕ್ಷಗಳ ಜತೆ ನಾಳೆ ಚರ್ಚೆ ನಡೆಸಿದ ನಂತರ ಚುನಾವಣಾ ಆಯೋಗ ಮಧ್ಯಂತರ ಚುನಾವಣೆಯ ದಿನಾಂಕಗಳನ್ನು ಗೊತ್ತುಪಡಿಸಲಿದೆ ಎಂದು ಚುನಾವಣಾ ಆಯುಕ್ತ ಜಿ.ವಿ.ಜಿ. ಕೃಷ್ಣಮೂರ್ತಿ ಇಂದು ಪತ್ರಕರ್ತರಿಗೆ ತಿಳಿಸಿದರು.
ದೇಶದಲ್ಲಿ ಅಕ್ಟೋಬರ್ ತಿಂಗಳವರೆಗೆ ಪ್ರತಿಕೂಲ ವಾತಾವರಣ ಇರುವುದರಿಂದ ಚುನಾವಣೆಯ ದಿನಾಂಕಗಳನ್ನು ನಿಗದಿಪಡಿಸುವುದು ಅತ್ಯಂತ ಕಷ್ಟವಾಗಿದೆ. ಜನರಿಗೆ ಕನಿಷ್ಠ ಪ್ರಮಾಣದಲ್ಲಿ ಅನನುಕೂಲವಿದ್ದಾಗ ಚುನಾವಣೆ ನಡೆಸಲಾಗುವುದು ಎಂದರು.
ಚುನಾವಣಾ ಆಯೋಗ ಇಂದು ಸಭೆ ನಡೆಸಿದ ನಂತರ ಮಾತನಾಡಿದ ಅವರು, ನಾಳೆ ರಾಜಕೀಯ ಪಕ್ಷಗಳ ಜತೆ ಚರ್ಚಿಸಿದ ನಂತರ ಆಯೋಗದ ಮೂವರು ಸದಸ್ಯರು ಚುನಾವಣಾ ದಿನಾಂಕ ನಿಗದಿಪಡಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದರು.
ದೇವನಹಳ್ಳಿ ವಿಮಾನ ನಿಲ್ದಾಣ: ಇಂದು ತಿಳಿವಳಿಕೆ ಒಪ್ಪಂದಕ್ಕೆ ಸಹಿ
ಬೀದರ್, ಮೇ 2– ದೇವನಹಳ್ಳಿ ಬಳಿ ಉದ್ದೇಶಿತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಸಂಬಂಧ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ನಾಳೆ ಬೆಂಗಳೂರಿನಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಕೇಂದ್ರ ವಿಮಾನಯಾನ ಖಾತೆ ಸಚಿವ ಅನಂತಕುಮಾರ್ ಇಂದು ಇಲ್ಲಿ ಪ್ರಕಟಿಸಿದರು.