ಚೆನ್ನೈ, ಮೇ 24 (ಪಿಟಿಐ)– ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಜಯಲಲಿತಾ ಅವರು ಬಿಜೆಪಿ ವಿರುದ್ಧ ಹಲವಾರು ಆರೋಪಗಳನ್ನು ಮಾಡುವ ಮೂಲಕ ವ್ಯವಸ್ಥಿತ ಗದಾಪ್ರಹಾರವನ್ನು ಆರಂಭಿಸಿದ್ದಾರೆ.
ಕೆಲವು ಬಿಜೆಪಿ ನಾಯಕರು ದೇಶದ್ರೋಹಿ ಶಕ್ತಿಗಳು ಮತ್ತು ವಿದೇಶಿ ಶಸ್ತ್ರಾಸ್ತ್ರ ವ್ಯಾಪಾರಿಗಳ ಜತೆ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಿರುವ ಅವರು, ಇಷ್ಟರಲ್ಲೇ ಇದರ ಬಗ್ಗೆ ವಿವರ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.
ಪತ್ರಿಕಾ ಪ್ರಕಟಣೆಯೊಂದನ್ನು ನೀಡಿರುವ ಅವರು, ಭಾರತದ ಸಾರ್ವಭೌಮತ್ವದ ವಿರುದ್ಧ ಬಿಜೆಪಿಯಲ್ಲಿ ಹಿಂಸಾತ್ಮಕ ಗುಂಪೊಂದು ಕಾರ್ಯ ನಿರ್ವಹಿಸುತ್ತಿದೆ. ಆದರೆ ಜನರ ಮುಂದೆ ಸಾಧಾರಣ ನಾಯಕರನ್ನು ಮುಂದಿಟ್ಟು ಮುಗ್ಧತೆ ಮತ್ತು ಒಳ್ಳೆಯತನವನ್ನು ಪ್ರದರ್ಶಿಸಲಾಗುತ್ತಿದೆ ಎಂದು ಜಯಲಲಿತಾ ಆರೋಪಿಸಿದ್ದಾರೆ.
ರಾಜೀವ್ ಹತ್ಯೆ: ಗಲ್ಲು ಶಿಕ್ಷೆ ಜಾರಿ ತಡೆಗೆ ನಕಾರ
ನವದೆಹಲಿ, ಮೇ 24 (ಪಿಟಿಐ)– ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳು ತಮಗೆ ವಿಧಿಸಿರುವ ಗಲ್ಲು ಶಿಕ್ಷೆ ಆಜ್ಞೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ಪುರಸ್ಕರಿಸಲಿಲ್ಲ.