ನವದೆಹಲಿ, ನ. 27 (ಪಿಟಿಐ)– ಆಂಧ್ರ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಚಂಡಮಾರುತ ಸಂತ್ರಸ್ತರ ಪರಿಹಾರ ಹಾಗೂ ಪುನರ್ವಸತಿಗಾಗಿ 650 ಕೋಟಿ ರೂಪಾಯಿಗಳ ವಿಶೇಷ ನೆರವನ್ನು ಪ್ರಧಾನಿ ಎಚ್.ಡಿ. ದೇವೇಗೌಡರು ಇಂದು ಪ್ರಕಟಿಸಿದರು.
ನೈಸರ್ಗಿಕ ವಿಕೋಪಗಳ ಸಂಬಂಧ ಯಾವ ರಾಜ್ಯವು ಇದುವರೆಗೆ ಇಷ್ಟೊಂದು ಬೃಹತ್ ಮೊತ್ತದ ಕೇಂದ್ರದ ನೆರವನ್ನು ಪಡೆದಿರಲಿಲ್ಲ ಎನ್ನಲಾಗಿದ್ದು, ಇದರಿಂದ ಈಗ ಆಂಧ್ರ ಅಂಥ ನೆರವು ಪಡೆದ ಮೊದಲ ರಾಜ್ಯವಾಗಿದೆ.
ಚಂಡಮಾರುತದ ಬಗ್ಗೆ ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ ಮಾತನಾಡಿದ ಪ್ರಧಾನಿ, ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳಲಾಗಿದೆ ಎಂಬುದನ್ನು ನಿರಾಕರಿಸಿದರು. ‘ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ’ ಎಂದು ಪದೇಪದೇ ಸದಸ್ಯರಲ್ಲಿ ಮನವಿ ಮಾಡಿಕೊಂಡರು.