ನವದೆಹಲಿ, ಡಿ. 4– ಕರ್ನಾಟಕ ಸರ್ಕಾರವು ಜವಾಹರ್ ರೋಜ್ಗಾರ್ ಯೋಜನೆಯ ಹಣವನ್ನು ಬೇರೆ ಕಾರ್ಯಗಳಿಗೆ ಬಳಸುತ್ತಿದೆ ಎಂಬ ಆರೋಪದ ಬಗೆಗೆ ತನಿಖೆ ನಡೆಸುವುದಾಗಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ರಾಜ್ಯದ ಕಾಂಗ್ರೆಸ್ ಸಂಸತ್ ಸದಸ್ಯರಿಗೆ ಇಂದು ಭರವಸೆ ನೀಡಿದರು.
ಸಂಸತ್ ಅಧಿವೇಶನದ ವೇಳೆ ವಿವಿಧ ರಾಜ್ಯಗಳ ಕಾಂಗ್ರೆಸ್ ಸದಸ್ಯರನ್ನು ಒಂದೊಂದು ದಿನ ಆಮಂತ್ರಿಸಿ ಮಾತನಾಡುವ ಕಾರ್ಯಕ್ರಮದಂತೆ, ಪ್ರಧಾನಿ ಅವರು ಇಂದು ರಾತ್ರಿ ಕರ್ನಾಟಕದ ಸಂಸತ್ ಸದಸ್ಯರನ್ನು ಕರೆದು ರಾಜ್ಯದಲ್ಲಿನ ರಾಜಕೀಯ ವಿದ್ಯಮಾನ, ಕಾಂಗ್ರೆಸ್ ಪಕ್ಷದ ಸ್ಥಿತಿಗತಿ ಮತ್ತು ಅಭಿವೃದ್ಧಿ ಕಾರ್ಯಗಳ ಬಗೆಗೆ ಚರ್ಚಿಸಿದರು.
ರಾಜ್ಯ ಸರ್ಕಾರವು ಜವಾಹರ್ ರೋಜ್ಗಾರ್ ಯೋಜನೆಯ ಹಣವನ್ನು ಬೇರೆ ಕಾಮಗಾರಿಗಳಿಗೆ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಚಂದ್ರಪ್ರಭಾ ಅರಸ್, ಡಿ.ಕೆ. ತಾರಾದೇವಿ ಮತ್ತು ಬಸವರಾಜೇಶ್ವರಿ ಅವರು ದೂರಿದರು ಎಂದು ಗೊತ್ತಾಗಿದೆ.
ಅಯೋಧ್ಯೆ ವಿವಾದ: ರಾಜ್ಯಸಭೆಯಲ್ಲಿ ಗದ್ದಲ
ನವದೆಹಲಿ, ಡಿ. 4 (ಯುಎನ್ಐ, ಪಿಟಿಐ)– ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಭೂಮಿಯ ಮೇಲಿನ ಯಾವುದೇ ಶಕ್ತಿಗೂ ಅವಕಾಶ ನೀಡುವುದಿಲ್ಲ ಎಂಬ ಬಿಜೆಪಿ ಸದಸ್ಯರೊಬ್ಬರ ಘೋಷಣೆ ಇಂದು ರಾಜ್ಯಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣ ಮಾಡಿ, ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿತು.