ಬೆಂಗಳೂರು, ಜ. 5- ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಪ್ರತಿಭಟಿಸಿ ಮೈಸೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಯಶಸ್ವಿ ಬಂದ್ ಆಚರಿಸಲಾಗಿದೆ. ಬಹುತೇಕ ಮೈಸೂರು, ಮಂಡ್ಯ ಜಿಲ್ಲೆಗೆ ಮೀಸಲಾಗಿದ್ದ ಕಾವೇರಿ ಚಳವಳಿ ಇಂದು ಶಿವಮೊಗ್ಗ, ಭದ್ರಾವತಿ ಹಾಗೂ ತುಮಕೂರಿಗೂ ವ್ಯಾಪಿಸಿದೆ.
ಮೈಸೂರು ನಗರದಲ್ಲಿ ಅಂಗಡಿ–ಮುಂಗಟ್ಟು, ಚಿತ್ರಮಂದಿರಗಳು ಸಂಪೂರ್ಣ ಮುಚ್ಚಿದ್ದವು. ನಗರ ಹಾಗೂ ಗ್ರಾಮಾಂತರ ಬಸ್ಸುಗಳ ಸಂಚಾರ ಸ್ಥಗಿತಗೊಂಡಿತ್ತು. ಮಂಡ್ಯ ಜಿಲ್ಲೆಯ ಕೆ.ಎಂ. ದೊಡ್ಡಿ, ಮಳವಳ್ಳಿ, ಶ್ರೀರಂಗಪಟ್ಟಣ ಮತ್ತು ಕೆರಗೋಡಿನಲ್ಲಿ ಬಂದ್ ಯಶಸ್ವಿಯಾಯಿತು.
ಬೆಂಗಳೂರು ಪಾಲಿಕೆ ಚುನಾವಣೆ ಅನಿಶ್ಚಿತ
ಬೆಂಗಳೂರು, ಜ. 5– ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಅನಿಶ್ಚಿತವಾಗಿದ್ದು, ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದ ನಡುವೆ ಶೀತಲ ಸಮರ ನಡೆಯುತ್ತಿದೆ.
ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬ ಕಾರಣ ನೀಡಿ ಚುನಾವಣೆ ಮುಂದೂಡುವುದು ಸೂಕ್ತ ಎಂಬ ನಿಲುವು ಸರ್ಕಾರದ್ದು. ಚುನಾವಣೆಗೆ ಇನ್ನೂ ಹನ್ನೆರಡು ದಿನಗಳಿರುವಾಗ ಇಲ್ಲದ ಪರಿಸ್ಥಿತಿ ಊಹಿಸಿ ಆತುರದ ಕ್ರಮ ಸಮಂಜಸವಲ್ಲ ಎಂಬುದು ಆಯೋಗದ ಬಿಗಿಪಟ್ಟು.