ಕಾವೇರಿ: ಚರ್ಚೆ ಮೂಲಕ ಇತ್ಯರ್ಥಕ್ಕೆ ಪ್ರಧಾನಿಗೆ ದೇವೇಗೌಡ ಆಗ್ರಹ
ನವದೆಹಲಿ, ಜ. 13– ಕಾವೇರಿ ವಿವಾದದ ಸಂಬಂಧ ಕಳೆದ ನಾಲ್ಕು ದಿನಗಳಲ್ಲಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರನ್ನು ಮೂರು ಬಾರಿ ಭೇಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರು, ಕಾವೇರಿ ಬಿಕ್ಕಟ್ಟನ್ನು ನ್ಯಾಯಮಂಡಳಿಯ ಹೊರಗೆ ಪರಸ್ಪರ ಮಾತುಕತೆಯಿಂದ ಬಗೆಹರಿಸಬೇಕೆಂದು ಇಂದು ಒತ್ತಾಯಿಸಿದರು.
ರಾಜ್ಯಸಭೆ: ದಳ ಅಭ್ಯರ್ಥಿಗಳಾಗಿ ಹೆಗಡೆ, ಇಬ್ರಾಹಿಂ?
ನವದೆಹಲಿ, ಜ. 13– ಮುಂದಿನ ತಿಂಗಳು ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಅಧಿಕಾರಾರೂಢ ಜನತಾದಳದ ಪಾಲಿಗೆ ಪಕ್ಷೇತರರು ಮತ್ತು ಕೆ.ಸಿ.ಪಿಯ ಬೆಂಬಲದಿಂದ ಲಭ್ಯವಾಗಲಿರುವ ಮೂರು ಸ್ಥಾನಗಳಲ್ಲಿ ಈಗಾಗಲೇ ಹೆಚ್ಚು ಕಡಿಮೆ ಎರಡು ಸ್ಥಾನಗಳು ತೀರ್ಮಾನವಾದಂತಿವೆ.
ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ವಿಶೇಷ ಆಸಕ್ತಿ ವಹಿಸುತ್ತಿರುವ ರಾಮಕೃಷ್ಣ ಹೆಗಡೆ ಅವರು ರಾಜ್ಯಸಭೆಗೆ ಆಯ್ಕೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇಬ್ರಾಹಿಂ ಅವರು ಲೋಕಸಭೆಗೆ ಸ್ಪರ್ಧಿಸಬೇಕೆನ್ನುವ ಬಯಕೆ ಹೊಂದಿದ್ದಾರಾದರೂ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕು ಎಂಬುದು ಮುಖ್ಯಮಂತ್ರಿ ದೇವೇಗೌಡ ಅವರ ಇಚ್ಛೆಯಾಗಿದೆ ಎಂದು ದಳದ ಮೂಲಗಳು ಹೇಳುತ್ತಿವೆ.