ನವದೆಹಲಿ, ಮೇ 16 (ಯುಎನ್ಐ, ಪಿಟಿಐ)– ಕೇಂದ್ರದಲ್ಲಿ ಪ್ರಥಮ ಬಾರಿಗೆ ರಚನೆಯಾದ ಭಾರತೀಯ ಜನತಾ ಪಕ್ಷ– ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರದ ಮುಖ್ಯಸ್ಥ, ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಹನ್ನೊಂದನೇ ಪ್ರಧಾನ ಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.
ವಾಜಪೇಯಿ ಜತೆಗೆ ಹನ್ನೊಂದು ಸಂಪುಟ ದರ್ಜೆ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಹತ್ವದ ರಕ್ಷಣಾ ಮತ್ತು ಸಂಸದೀಯ ವ್ಯವಹಾರ ಖಾತೆಯನ್ನು ಪ್ರಮೋದ್ ಮಹಾಜನ್, ಜಸವಂತ ಸಿಂಗ್ ಹಣಕಾಸು ಖಾತೆಯನ್ನು ನೋಡಿಕೊಳ್ಳುವರು. ಕರ್ನಾಟಕದ ವಿ.ಧನಂಜಯ ಕುಮಾರ್ ಅವರಿಗೆ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಖಾತೆ ದೊರೆತಿದೆ.
‘ಕುದುರೆ ವ್ಯಾಪಾರ’: ರಂಗದ ಶಂಕೆ
ನವದೆಹಲಿ, ಮೇ 16 (ಯುಎನ್ಐ)– ಬಹುಮತ ಸಾಬೀತಿಗೆ ವಾಜಪೇಯಿ ಅವರಿಗೆ 15 ದಿನಗಳ ಅವಧಿ ನೀಡಿದ್ದು ‘ಕುದುರೆ ವ್ಯಾಪಾರ’ಕ್ಕೆ ಕಾರಣವಾಗುತ್ತದೆ, ಆದ್ದರಿಂದ ಇನ್ನು ಕೆಲವೇ ದಿನಗಳಲ್ಲಿ ಸಂಸತ್ ಅಧಿವೇಶನ ಕರೆಯಬೇಕು ಎಂದು ತೃತೀಯ ರಂಗದ ನಾಯಕರು ಕೋರಿದ್ದಾರೆ.