ಮುಷ್ಕರ ಎದುರಿಸಲು ಸಿದ್ಧತೆ; ಹಲವು ಪ್ರಯಾಣಿಕ ರೈಲುಗಳ ಸಂಚಾರ ವಾರಾಂತ್ಯದಿಂದ ರದ್ದು
ನವದೆಹಲಿ, ಏ. 24– ಮೇ 8ರಿಂದ ರೈಲ್ವೆ ನೌಕರರ ‘ಅನಿರ್ದಿಷ್ಟ’ ಮುಷ್ಕರದ ಬೆದರಿಕೆಯನ್ನು ಎದುರಿಸುತ್ತಿರುವ ರೈಲ್ವೆ ಸಚಿವ ಶಾಖೆಯು ಕಲ್ಲಿದ್ದಲು ಉಳಿಸುವ ಕ್ರಮವಾಗಿ ಏಪ್ರಿಲ್ 27ರಿಂದ ಅನೇಕ ಪ್ರಯಾಣಿಕರ ರೈಲುಗಳ ಸಂಚಾರವನ್ನು ರದ್ದುಪಡಿಸಲು ಇಂದು ನಿರ್ಧರಿಸಿತು.
ಮುಷ್ಕರದ ಬಗೆಗೆ ಬಿಗಿ ನಿಲುವು ತಳೆದಿರುವ ರೈಲ್ವೆ ಸಚಿವ ಖಾತೆಯು ಮುಷ್ಕರ ಹೂಡುವವರಿಗೆ ಭಾರತ ಸಂರಕ್ಷಣಾ ವಿಧಿಯ ಅನ್ವಯ ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸದ ಶಿಕ್ಷೆ ವಿಧಿಸಲು ಅವಕಾಶವಿದೆಯೆಂದು ಎಚ್ಚರಿಕೆ ನೀಡಿತು.
ಆದರೆ ಎಷ್ಟು ಸಂಖ್ಯೆಯ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗುವುದೆಂದು ಹೇಳಲು ಸಚಿವ ಖಾತೆಯ ವಕ್ತಾರರಿಗೆ ಸಾಧ್ಯವಾಗಲಿಲ್ಲ.
ರಾಷ್ಟ್ರದ ಮುಖ್ಯ ಆರ್ಥಿಕ ಚಟುವಟಿಕೆಗೆ ಧಕ್ಕೆ ಬರದಂತೆ ಎಚ್ಚರಿಕೆ ಕ್ರಮವಾಗಿ ಕಲ್ಲಿದ್ದಲು ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ದೂರ ಪ್ರಯಾಣದ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲದೆ ಪ್ಯಾಸೆಂಜರ್ ರೈಲುಗಳ ಸಂಚಾರವನ್ನೂ ರದ್ದುಪಡಿಸಲಾಗುವುದು. ಕನಿಷ್ಠ ಸಂಖ್ಯೆಯಲ್ಲಿ ಮಾತ್ರ ರೈಲುಗಳನ್ನು ಓಡಿಸಲಾಗುವುದು.
***
ಎಸ್ಎಸ್ಎಲ್ಸಿ ಮೌಲ್ಯಮಾಪಕರಿಗೆ 2 ರೂ. ವಿಶೇಷ ದಿನಭತ್ಯೆ
ಬೆಂಗಳೂರು, ಏ. 24– ಎಸ್ಎಸ್ಎಲ್ಸಿ ಮೌಲ್ಯಮಾಪಕರಿಗೆಲ್ಲ ಎರಡು ರೂಪಾಯಿ ವಿಶೇಷ ದಿನಭತ್ಯೆ ನೀಡುವ ನಿರ್ಧಾರವನ್ನು ಶಿಕ್ಷಣ ಸಚಿವ ಶ್ರೀ ಎಂ. ಮಲ್ಲಿಕಾರ್ಜುನಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿ, ಅದರಿಂದ ಶಿಕ್ಷಕರು ಕೇಳಿದ್ದ ಮೊತ್ತವನ್ನು ಪೂರ್ಣವಾಗಿ ನೀಡಿದಂತಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಯವರು ನಿನ್ನೆ ಸಭೆಗೆ ಭರವಸೆ ನೀಡಿದಂತೆ ಪರೀಕ್ಷಾ ಮಂಡಲಿಯ ಜೊತೆ ಮಾತುಕತೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.