ಎಲ್ಲ ಜಾತಿಯವರಿಗೂ ಕೆಲ ವಿಶೇಷ ಸವಲತ್ತು: ಹಾವನೂರು ಶಿಫಾರಸು
ಬೆಂಗಳೂರು, ಏ. 16– ವಾರ್ಷಿಕ ವರಮಾನ 5 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರುವ ಯಾವುದೇ ಜಾತಿಯವನಾಗಲೀ ಅವನಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ‘ಕೆಲವು ವಿಶೇಷ ಸವಲತ್ತು’ಗಳನ್ನು ಒದಗಿಸುವ ಶಿಫಾರಸುಗಳನ್ನು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ಮಾಡಲಿದೆ.
‘ರಾಜ್ಯದ ಯಾವುದೇ ಅರ್ಹ ಜಾತಿ ಅಥವಾ ವರ್ಗವು ಕಡೆಗಣಿಸಲ್ಪಟ್ಟಿದೆ’– ಎಂಬ ಭಾವನೆಯು ಯಾರಿಗೂ ಬಾರದ ರೀತಿಯಲ್ಲಿ ಸೇವೆ ಮತ್ತು ಸೌಕರ್ಯಗಳಲ್ಲಿ ಅವಕಾಶ ಕಲ್ಪಿಸುವಂಥ ಕ್ರಮಗಳನ್ನು ರೂಪಿಸಿ ಅವುಗಳನ್ನು ಆಯೋಗವು ತನ್ನ ವರದಿಯಲ್ಲಿ ತಿಳಿಸಲಿದೆ.
ತಾತ್ವಿಕ ಕಾನೂನು ಹಾಗೂ ಸಂವಿಧಾನಾತ್ಮಕ ದೃಷ್ಟಿಗಳಿಂದ ಹಿಂದುಳಿದ ವರ್ಗಗಳನ್ನು ನಿರ್ಧರಿಸುವ ಕಾರ್ಯವನ್ನು ಎಲ್.ಜಿ. ಹಾವನೂರು ಆಯೋಗವು ಬಹುತೇಕ ಮಟ್ಟಿಗೆ ಪೂರ್ತಿಗೊಳಿಸಿದೆ. ಇನ್ನೂ ಉಳಿದಿರುವ ಕೆಲವು ಅಂಶಗಳನ್ನು ಸರ್ಕಾರಿ ಇಲಾಖೆಗಳು ತತ್ಕ್ಷಣ ಒದಗಿಸಿದರೆ, ಇನ್ನೊಂದು ತಿಂಗಳೊಳಗೆ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧವಾಗಿದೆ ಎಂದು ಇಲ್ಲಿ ಅಧಿಕೃತವಾಗಿ ತಿಳಿದುಬಂದಿದೆ.