ನಿರುದ್ಯೋಗಿ ಎಂಜಿನಿಯರ್ ತರಬೇತಿ ಕೇಂದ್ರ: ಸಣ್ಣ ಕೈಗಾರಿಕೆ ಸೇವಾ ವ್ಯವಸ್ಥೆಯಿಂದ ಸ್ಥಾಪನೆ
ಬೆಂಗಳೂರು, ಮೇ 4– ಕೃಷಿ ಯಂತ್ರೋಪಕರಣಗಳ ದುರಸ್ತಿ ಮುಂತಾದ ಸೇವೆಗಾಗಿ ಕೇಂದ್ರಗಳನ್ನು ಸ್ಥಾಪಿಸಲು ನಿರುದ್ಯೋಗಿ ಎಂಜಿನಿಯರುಗಳು ಮತ್ತು ಡಿಪ್ಲೊಮಾದವರಿಗೆ ತರಬೇತಿಯನ್ನು ನಗರದಲ್ಲಿರುವ ಸಣ್ಣ ಕೈಗಾರಿಕೆ ಸೇವಾ ಸಂಸ್ಥೆಯು ನೀಡಲಿದೆ.
ಕಾಲಕ್ರಮೇಣ ಕೃಷಿ ಕ್ಷೇತ್ರದಲ್ಲಿ ಯಂತ್ರ ಬಳಕೆ ಹೆಚ್ಚುತ್ತಿರುವುದರಿಂದ ಸೇವಾ ಕೇಂದ್ರಗಳು ಅಗತ್ಯವಾಗಿದ್ದು, ಮುಂದಿನ ತಿಂಗಳಿಂದ ತರಬೇತಿ ನೀಡಲಾಗುವುದೆಂದು ಸಂಸ್ಥೆ ತಿಳಿಸಿದೆ.
ಯೋಜನಾ ಆಯೋಗ ವಿಸರ್ಜನೆ ಇಲ್ಲ: ಶೀಘ್ರವೇ ಪುನರ್ರಚನೆ– ಪ್ರಧಾನಿ ಸ್ಪಷ್ಟನೆ
ನವದೆಹಲಿ, ಮೇ 4– ಯೋಜನಾ ಆಯೋಗವನ್ನು ವಿಸರ್ಜನೆ ಮಾಡುವುದಿಲ್ಲ, ಯೋಜನೆ ಸಚಿವ ಶ್ರೀ ಸಿ.ಸುಬ್ರಹ್ಮಣ್ಯಂ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಅದನ್ನು ಪುನರ್ರಚಿಸಲಾಗುವುದೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.