ನವದೆಹಲಿ, ಆಗಸ್ಟ್ 28– ಐತಿಹಾಸಿಕ ಒಪ್ಪಂದವೊಂದಕ್ಕೆ ಭಾರತ ಮತ್ತು ಪಾಕಿಸ್ತಾನ ಇಂದು ಸಹಿ ಹಾಕಿದವು.
ಭಾರತದಲ್ಲಿರುವ ಪಾಕಿಸ್ತಾನಿ ಯುದ್ಧ ಬಂದಿಗಳು, ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಬಂಗಾಳಿಗಳು ಮತ್ತು ಬಾಂಗ್ಲಾದೇಶದಲ್ಲಿರುವ ಪಾಕಿಸ್ತಾನಿ ರಾಷ್ಟ್ರೀಯರನ್ನು (ಪಾಕಿಸ್ತಾನವೇ ತಮ್ಮ ತಾಯಿನಾಡು ಎಂದು ನಿರ್ಧರಿಸಿರುವವರು) ಏಕಕಾಲದಲ್ಲಿ ಅವರವರ ದೇಶಕ್ಕೆ ಮರಳಿಸುವುದಕ್ಕೆ ಈ ಒಪ್ಪಂದ ಅವಕಾಶ ಮಾಡಿದೆ.
‘ಉಪಖಂಡದಲ್ಲಿ ಶಾಶ್ವತ ಶಾಂತಿ ಸ್ಥಾಪನೆಯ ದಿಸೆಯಲ್ಲಿ ಇನ್ನೊಂದು ದೊಡ್ಡ ಹೆಜ್ಜೆ’ ಎಂದು ಈ ಒಪ್ಪಂದವನ್ನು ಭಾರತೀಯ ನಿಯೋಗದ ನಾಯಕ ಪಿ.ಎಸ್. ಹಕ್ಸರ್ ಮತ್ತು ಪಾಕಿಸ್ತಾನದ ನಿಯೋಗದ ನಾಯಕ ಅಜೀಜ್ ಅಹ್ಮದ್ ಅವರು ಪ್ರಶಂಸಿಸಿದರು.
ಬೆಂಗಳೂರು, ಆಗಸ್ಟ್ 28– ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಅವಕಾಶ ಕಲ್ಪಿಸಿಕೊಡಲು ಸಂವಿಧಾನಕ್ಕೆ 31ನೇ ತಿದ್ದುಪಡಿ ಸೂಚಿಸುವ ಕೇಂದ್ರ ವಿಧೇಯಕಕ್ಕೆ ವಿಧಾನಸಭೆ ಇಂದು ಅಂಗೀಕಾರ ನೀಡಿತು.
ಈಗಾಗಲೇ ಸಂಸತ್ತಿನ ಅಂಗೀಕಾರ ಪಡೆದಿರುವ ಈ ವಿಧೇಯಕಕ್ಕೆ ಅಂಗೀಕಾರ ನೀಡಬೇಕೆಂದು ಕೋರಿ ಕಾನೂನು ಸಚಿವ ಡಿ.ಕೆ. ನಾಯ್ಕರ್ ಅವರು ಮಂಡಿಸಿದ ನಿರ್ಣಯಕ್ಕೆ ಸಭೆ ಒಪ್ಪಿಗೆ ನೀಡಿತು. ಕ್ಷೇತ್ರಗಳ ಮರುವಿಂಗಡಣೆಯಿಂದ ಲೋಕಸಭೆಯ ಸದಸ್ಯರ ಸಂಖ್ಯೆ 20ರಷ್ಟು ಹೆಚ್ಚಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.