ಬೆಂಗಳೂರು, ಡಿ. 5– ಮಂತ್ರಿಮಂಡಲದ ಪುನರ್ರಚನೆಗೆ ಅವಕಾಶ ಮಾಡಿಕೊಡಲು, ಕರ್ನಾಟಕ ಸಚಿವ ಸಂಪುಟದ ಇಬ್ಬರನ್ನು ಬಿಟ್ಟು ಉಳಿದ ಎಲ್ಲ ಮಂತ್ರಿಗಳು ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಇಂದು ರಾತ್ರಿ ಸಾಮೂಹಿಕವಾಗಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು.
ಪೌರಾಡಳಿತ ಮಂತ್ರಿ ಬಸವಲಿಂಗಪ್ಪ ಅವರ ಮೈಸೂರು ಭಾಷಣದ ಹಿನ್ನೆಲೆಯಲ್ಲಿ ಮಂತ್ರಿ ಮಂಡಲದ ಸದಸ್ಯರಲ್ಲಿ ಕೆಲವು ದಿನಗಳಿಂದ ಮೂಡಿ, ಬೆಳೆಯತೊಡಗಿದ ಅತೃಪ್ತಿಯು ಈ ರೀತಿ ಅನಿರೀಕ್ಷಿತ ಪ್ರಮಾಣದಲ್ಲಿ ಪ್ರಕಟವಾಯಿತು.
ದೆಹಲಿಯಲ್ಲಿರುವ ಬಸವಲಿಂಗಪ್ಪ ಮತ್ತು ಸಚಿವ ಸಂಪುಟದ ಸಭೆಯಲ್ಲಿ ಹಾಜರಿಲ್ಲದ ಎ.ಆರ್.ಬದರಿನಾರಾಯಣ ಅವರು ರಾಜೀನಾಮೆ ಸಲ್ಲಿಸಿಲ್ಲ.
ಚಳವಳಿ ನಿಲ್ಲಿಸಿ: ಅರಸು ಮನವಿ
ಬೆಂಗಳೂರು, ಡಿ. 5 – ಸಚಿವ ಬಸವಲಿಂಗಪ್ಪ ವಿರುದ್ಧದ ಚಳವಳಿಯಿಂದ ಯಾವ ವರ್ಗಕ್ಕೂ ಪ್ರಯೋಜನವಾಗದು; ಆದುದರಿಂದ ವಿದ್ಯಾರ್ಥಿಗಳು ಚಳವಳಿ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ದೇವರಾಜ ಅರಸು ಮನವಿ ಮಾಡಿಕೊಂಡಿದ್ದಾರೆ.