ಅರಸು ಮಂತ್ರಿಮಂಡಲದ ಎರಡನೇ ಕಂತು: ಸಚಿವರಾಗಿ ಎನ್. ರಾಚಯ್ಯ, ಯಾಹ್ಯಾ, ಸಿ.ಎನ್. ಪಾಟೀಲ್
ಬೆಂಗಳೂರು, ಡಿ.18– ಅರಸು ಅವರ ಮಂತ್ರಿಮಂಡಲ ಪುನರ್ ರಚನೆಯಾಗಿದ್ದು, ಈಗಾಗಲೇ ಪ್ರಕಟವಾಗಿರುವ ಸಚಿವರು ಮತ್ತು ರಾಜ್ಯ ಸಚಿವರ ಜೊತೆಗೆ ವಿಧಾನ ಪರಿಷತ್ತಿನ ಸದಸ್ಯ ಎನ್. ರಾಚಯ್ಯ, ಭಟ್ಕಳ ಕ್ಷೇತ್ರದ ವಿಧಾನಸಭಾ ಸದಸ್ಯ ಎಸ್.ಎಂ. ಯಾಹ್ಯಾ ಹಾಗೂ ರಾಯಚೂರು ಜಿಲ್ಲೆಯ ಚಂದ್ರಶೇಖರ ನಾಗನಗೌಡ ಪಾಟೀಲ್ ಅವರು ಬುಧವಾರ ಬೆಳಿಗ್ಗೆ ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಂತ್ರಿಮಂಡಲದ ಪುನರ್ ರಚನೆಯ ಎರಡನೇ ಹಂತದಲ್ಲಿ ಹೊಸದಾಗಿ ರಾಜ್ಯ ಸಚಿವರನ್ನು ನೇಮಿಸುವ ಬಗ್ಗೆ ಮುಖ್ಯಮಂತ್ರಿ ಅರಸು ಅವರು ನಿರ್ಧಾರ ಕೈಗೊಂಡಿಲ್ಲ.
ಹೊಸ ರಾಜ್ಯ ಸಚಿವರುಗಳ ಬಗ್ಗೆ ಮುಖ್ಯಮಂತ್ರಿಗಳು ಇನ್ನು 8–10 ದಿನಗಳಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಅರಸು ಅವರು ರಾಜ್ಯಪಾಲರನ್ನು ಭೇಟಿ ಮಾಡಿ, ಈ ಕುರಿತು ಚರ್ಚೆ ನಡೆಸಿದರು.