ಒಂದು ವಾರದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಿಯೋಗ
ಬೆಂಗಳೂರು, ಡಿ. 22– ಮುಖ್ಯಮಂತ್ರಿ ಅರಸು ನಾಯಕತ್ವದಲ್ಲಿ ರಾಜ್ಯದ ವಿಧಾನಮಂಡಲದ ನಿಯೋಗವೊಂದು ಇನ್ನೊಂದು ವಾರದಲ್ಲಿ ದೆಹಲಿಗೆ ತೆರಳಿ ಮಹಾಜನ್ ವರದಿಯನ್ನು ಕಾರ್ಯರೂಪಕ್ಕೆ ತರಬೇಕೆಂಬ ಬೇಡಿಕೆಯನ್ನು ಪ್ರತಿಪಾದಿಸಿ, ಪ್ರಧಾನಿ ಹಾಗೂ ಕೇಂದ್ರದ ಇತರ ನಾಯಕರಿಗೆ ಮನವಿ ಸಲ್ಲಿಸಲಿದೆ.
ಮುಖ್ಯಮಂತ್ರಿ ಅರಸು ಅವರು ಇಂದು ಸಂಜೆ ವಿಧಾನಸೌಧದಲ್ಲಿ ವಿರೋಧ ಪಕ್ಷಗಳ ನಾಯಕರೊಡನೆ ಗಡಿ ವಿವಾದದ ಕುರಿತು ಮತ್ತೆ ಚರ್ಚೆ ನಡೆಸಿದರು. ಮಹಾರಾಷ್ಟ್ರದಲ್ಲಿ ಕನ್ನಡಿಗರು ಅನುಭವಿಸಿರುವ 10–12 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ತುಂಬಿಕೊಡಬೇಕು ಎಂದು ಕೇಂದ್ರವನ್ನು ನಿಯೋಗ ಒತ್ತಾಯ ಮಾಡಲಿದೆ.
ಸಂಜೆ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡ, ಕಮ್ಯುನಿಸ್ಟ್ ಪಕ್ಷದ ಎಂ.ಎಸ್. ಕೃಷ್ಣನ್, ಸೋಷಲಿಸ್ಟ್ ಪಕ್ಷದ ಕಾಗೋಡು ತಿಮ್ಮಪ್ಪ, ಕ್ರಾಂತಿಕಾರಿ ಪಕ್ಷದ ಎಸ್. ಬಂಗಾರಪ್ಪ ಹಾಗೂ ಟಿ.ಆರ್. ಶಾಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.