ಅರಸುಗೆ ಗೃಹಖಾತೆ; ಕೃಷ್ಣ– ಕೈಗಾರಿಕೆ, ಸಿದ್ದವೀರಪ್ಪ– ಆರೋಗ್ಯ ಬೆಂಗಳೂರು, ಮಾ. 23– ಶ್ರೀ ದೇವರಾಜ ಅರಸು ಅವರ ನಾಯಕತ್ವದಲ್ಲಿ ರಾಜ್ಯದ ಜನತೆಯ ಅಪಾರ ಆತ್ಮೀಯ ವಿಶ್ವಾಸ ಪಡೆದ ಆಡಳಿತ ಕಾಂಗ್ರೆಸ್ ಪಕ್ಷದ 22 ಮಂದಿ ಸದಸ್ಯರ ಮಂತ್ರಿಮಂಡಲ ಇಂದು ಅಧಿಕಾರ ವಹಿಸಿಕೊಂಡಿತು.
ಮುಖ್ಯಮಂತ್ರಿ ಶ್ರೀ ಅರಸು ಹಾಗೂ ಸರ್ವಶ್ರೀ ಎಚ್.ಎಂ.ಚನ್ನಬಸಪ್ಪ ಹಾಗೂ ಕೆ.ಎಚ್.ಪಾಟೀಲ್ ಅವರುಗಳು ಕಳೆದ 20 ರಂದು ಪ್ರಮಾಣ ವಚನ ಸ್ವೀಕರಿಸಿದ್ದು ಉಳಿದ 10 ಮಂದಿ ಸಚಿವರು ಹಾಗೂ 9 ಮಂದಿ ರಾಜ್ಯ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯ ಸಚಿವರು: ವಿ.ಎಸ್.ಕೌಜಲಗಿ, ಆರ್.ಡಿ.ಕಿತ್ತೂರ್, ದೇವೇಂದ್ರಪ್ಪ ಘಾಳಪ್ಪ, ಶಿವಣ್ಣ ಭೀಮಪ್ಪ ಕಲಮಲ, ಕೆ.ಟಿ.ರಾಥೋಡ್, ಎನ್.ಚಿಕ್ಕೇಗೌಡ, ಎಚ್.ಎನ್.ನಂಜೇಗೌಡ, ಶ್ರೀಮತಿ ಈವಾವಾಸ್, ಸಂಗಪ್ಪ ನಗರಾಳ.
ಸಚಿವರಿಬ್ಬರಿಗೆ ಸತ್ಯದಲ್ಲೇ ನಿಷ್ಠೆ ಬೆಂಗಳೂರು, ಮಾ. 23– ಹರಿಜನ ಮಂತ್ರಿಗಳಿಬ್ಬರು ‘ಭಗವಂತನ ಹೆಸರಿನ....’ ಬದಲು ‘ಸತ್ಯದ ಹೆಸರಿನಲ್ಲಿ....’ ಸಚಿವ ಕರ್ತವ್ಯ ನಿರ್ವಹಿಸುವ ಮತ್ತು ರಾಜ್ಯಾಂಗ ನಿಷ್ಠೆ ತೋರಿಸುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಬಿ.ಬಸವಲಿಂಗಪ್ಪ ಮತ್ತು ಶ್ರೀ ಎಂ.ಮಲ್ಲಿಕಾರ್ಜುನಸ್ವಾಮಿ ಅವರು ವ್ಯಕ್ತಪಡಿಸಿದ ಇಚ್ಛೆಯ ಪ್ರಕಾರ ಈ ಬದಲಾವಣೆ ಮಾಡಲಾಯಿತು. ಇತರ ಮಂತ್ರಿಗಳೆಲ್ಲರೂ ‘ಭಗವಂತನ ಹೆಸರಿನಲ್ಲಿ....’ ಪ್ರತಿಜ್ಞೆ ಸ್ವೀಕರಿಸಿದರು.
ಸಂಪುಟ ಸಚಿವ ಶ್ರೀ ಅಜೀಜ್ ಸೇಠ್ ಮತ್ತು ಸಹಾಯಕ ಮಂತ್ರಿ ಶ್ರೀ ಆರ್.ಡಿ.ಕಿತ್ತೂರ್ ಅವರು ಇಂಗ್ಲಿಷ್ನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಇತರರೆಲ್ಲರೂ ಕನ್ನಡದಲ್ಲಿ ಪ್ರತಿಜ್ಞೆ ಓದಿದರು.