ಪಟ್ನಾ, ಜೂನ್ 20 (ಯುಎನ್ಐ)– ಬಿಹಾರದ ಮೇವು ಹಗರಣದ ಆರೋಪಿಗಳಲ್ಲಿ ಒಬ್ಬರಾದ ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಉದ್ಯೋಗ ಖಾತೆಯ ರಾಜ್ಯ ಸಚಿವ ಚಂದ್ರದೇವ್ ಪ್ರಸಾದ್ ವರ್ಮ ಅವರು ಪ್ರಧಾನಿ ಅವರ ಆದೇಶದ ಅನ್ವಯ ಇಂದು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದರು.
ಸಚಿವ ಪದವಿಗೆ ರಾಜೀನಾಮೆ ನೀಡುವಂತೆ ಪ್ರಧಾನಿ ಅವರು ದೆಹಲಿಯಿಂದ ಇಂದು ತುರ್ತು ಫ್ಯಾಕ್ಸ್ ಸಂದೇಶ ಕಳುಹಿಸಿದ್ದರ ಮೇರೆಗೆ ವರ್ಮ ಅವರೂ ಫ್ಯಾಕ್ಸ್ ಮೂಲಕ ರಾಷ್ಟ್ರಪತಿ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದರು.
ಬಿಹಾರ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲ ಕಿದ್ವಾಯಿ ಅವರು ಸಿಬಿಐಗೆ ಅನುಮತಿ ನೀಡಿದ್ದಾರೆ, ಆ ಕುರಿತು ನೀವೇನು ಹೇಳುತ್ತೀರಿ ಎಂದು ಪತ್ರಕರ್ತರು ದೆಹಲಿಯಲ್ಲಿ ಪ್ರಶ್ನಿಸಿದಾಗ, ಗುಜ್ರಾಲ್ ಯಾವುದೇ ಉತ್ತರ ನೀಡಲಿಲ್ಲ.
ನಾರಾಯಣನ್ ನಾಮಪತ್ರ ಸಲ್ಲಿಕೆ
ನವದೆಹಲಿ, ಜೂನ್ 20 (ಯುಎನ್ಐ, ಪಿಟಿಐ)– ಉಪರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಇಂದು ರಾಷ್ಟ್ರಪತಿ ಸ್ಥಾನಕ್ಕೆ ಸಂಯುಕ್ತ ರಂಗ ಮತ್ತು ಕಾಂಗ್ರೆಸ್ ಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ನಾರಾಯಣನ್ ಅವರ ಪರವಾಗಿ ಪ್ರಧಾನಿ ಐ.ಕೆ. ಗುಜ್ರಾಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ನಾಮಪತ್ರಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಅನೇಕ ಸಚಿವರು ಉಪಸ್ಥಿತರಿದ್ದರು.