25 ವರ್ಷಗಳ ಹಿಂದೆ: ಗುರುವಾರ ನವೆಂಬರ್ 7, 1996

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಧರ್ಮಸಿಂಗ್ ನೇಮಕ
ನವದೆಹಲಿ, ನ. 6– ಕಳೆ ಗುಂದಿದ್ದ ಕಾಂಗ್ರೆಸ್ಸನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಅವರು ಮಾಜಿ ಸಚಿವ ಧರ್ಮಸಿಂಗ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ನಾಯ್ಕರ್ ರಾಜೀನಾಮೆ ನೀಡಲು ಮುಂದೆ ಬಂದಿದ್ದರು ಅವರು ಈಗ ರಾಜೀನಾಮೆ ನೀಡಿದ್ದರೆನ್ನಲಾಗಿದೆ. ನಾಯ್ಕರ್ ಅವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿ ಹೊಸ ನೇಮಕ ಮಾಡಿರುವುದನ್ನು ಪಕ್ಷದ ವಕ್ತಾರ ವಿ.ಎನ್. ಗಾಡ್ಗೀಳ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಧರ್ಮಸಿಂಗ್ ಅವರ ನೇಮಕವನ್ನು ಪ್ರಕಟ ಮಾಡುವ ಮುನ್ನ ನಾಯ್ಕರ್ ಸಂಜೆ ಬೆಂಗಳೂರಿಗೆ ಮರಳಿದರು.
ಭಾರತಕ್ಕೆ ಟೈಟನ್ ಕಪ್
ಮುಂಬೈ, ನ.6– ಕೆಚ್ಚೆದೆಯಿಂದ ಹೋರಾಡಿದ ಭಾರತದ ತಂಡದವರು ಇದುವರೆಗೆ ಅಜೇಯರಾಗಿದ್ದ ದಕ್ಷಿಣ ಆಫ್ರಿಕ ತಂಡದವರಿಗೆ 35 ರನ್ಗಳ ಸೋಲಿನ ಕಹಿ ಉಣಿಸಿ ಟೈಟನ್ ಕಪ್ ಕ್ರಿಕೆಟ್ ಟೂರ್ನಿ ಪ್ರಶಸ್ತಿ ಪಡೆದು ಬಹಳ ದಿನಗಳಿಂದ ನಿರಾಶರಾಗಿದ್ದ ಅಭಿಮಾನಿಗಳು ಇಂದು ರಾತ್ರಿ ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಲಕ್ಕೂಬಾಯಿ ವಂಚನೆ ಹಗರಣ ರಾವ್ಗೆ ಷರತ್ತಿನ ಜಾಮೀನು
ನವದೆಹಲಿ, ನ. 6 (ಪಿಟಿಐ)– ಲಕ್ಕೂಬಾಯಿ ವಂಚನೆ ಹಗರಣದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ದೆಹಲಿ ನ್ಯಾಯಾಲಯ ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆ ನೀಡುವ ಷರತ್ತು ವಿಧಿಸಿ ಜಾಮೀನು ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.