ಬಳ್ಳಾರಿ, ನ. 4– ಆಲಮಟ್ಟಿ ಕುರಿತಂತೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಸಂಘರ್ಷದ ಪ್ರಶ್ನೆಯೇ ಇಲ್ಲ, ಈ ಪ್ರಶ್ನೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದೇ ತಮ್ಮ ಬಯಕೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ತಿಳಿಸಿದರು.
ಹಂಪಿ ಉತ್ಸವಕ್ಕೆ ಆಗಮಿಸಿದ್ದ ಅವರು ಪತ್ರಕರ್ತರಿಗೆ ಈ ವಿಷಯ ತಿಳಿಸಿದರು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿರುವ ಆರ್ಥಿಕ ನೆರವಿನ ಬಗ್ಗೆ ಬಾಬು ಆಕ್ಷೇಪಿಸುವುದು ಅನಗತ್ಯ. ಅವರಿಗೂ ಈ ನೆರವು ದೊರೆಯುತ್ತಿದೆ ಎಂದರು.
ಭದ್ರತಾ ವೆಚ್ಚ ನೀಡಲು ಎಬಿಸಿಎಲ್ ಒಪ್ಪಿಗೆ
ಬೆಂಗಳೂರು, ನ. 4– ವಿಶ್ವಸುಂದರಿ ಸ್ಪರ್ಧೆಯ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಗೆ ತಗಲುವ ಖರ್ಚು ವೆಚ್ಚವನ್ನು ನೀಡಲು ಅಮಿತಾಭ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ (ಎಬಿಸಿಎಲ್) ಒಪ್ಪಿದೆ. ಅಲ್ಲದೆ ಸ್ಪರ್ಧೆಯ ಬಗ್ಗೆ ಎದ್ದಿರುವ ವಿರೋಧದ ಹಿನ್ನೆಲೆಯಲ್ಲಿ ಮೂರು ಪ್ರಮುಖ ಕಾರ್ಯಕ್ರಮಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದೆ.