ನವದೆಹಲಿ, ಆ. 7– 1971ರ ಡಿಸೆಂಬರ್ ಸಮರಕ್ಕೆ ಮುನ್ನ ಮತ್ತು ಸಮರದ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಬಂಧಿಸಲಾಗಿದ್ದ ಎಲ್ಲ ಭಾರತೀಯ ಪೌರರನ್ನೂ ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ರೇಡಿಯೊ ವರದಿ ಮಾಡಿದೆ.
ಈ ಬಗ್ಗೆ ಪಾಕ್ ಸರ್ಕಾರ ನಿರ್ಧಾರ ಕೈಗೊಂಡಿದೆ. ಆದರೆ ಇವರನ್ನು ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದನ್ನು ತಿಳಿಸಿಲ್ಲ.
ಡಿಸೆಂಬರ್ 3ನೇ ತಾರೀಖಿಗೆ ಮುನ್ನ ಅನಧಿಕೃತ ಪ್ರವೇಶಕ್ಕಾಗಿ ಬಂಧಿಸಲಾದ ಭಾರತೀಯರೆಲ್ಲರನ್ನೂ ಬಿಡುಗಡೆ ಮಾಡಲಾಗುವುದೆಂದೂ, ಭಾರತ– ಪಾಕ್ ಸಮರ ಆರಂಭವಾದ ಕಾರಣ ಅಲ್ಲಿಂದ ಹೊರಡಲು ಸಾಧ್ಯವಾಗದೇ ಉಳಿದುಕೊಂಡಿದ್ದ ಭಾರತೀಯರಿಗೆ ಸ್ವದೇಶಕ್ಕೆ ಮರಳಲು ಅವಕಾಶ ನೀಡಲಾಗುವುದೆಂದೂ ರೇಡಿಯೊ ತಿಳಿಸಿದೆ.
ಹೊಸ ಕೃಷಿ ಯೋಜನೆಗೆ 150 ಕೋಟಿ ರೂ. ಹೆಚ್ಚು ವೆಚ್ಚ: ಕೇಂದ್ರದ ನಿರ್ಧಾರ
ನವದೆಹಲಿ, ಆ.7– ಸಾಧ್ಯವಾದಷ್ಟು ಮಟ್ಟಿಗೆ ಖಾರಿಫ್ ಬೆಳೆ ಕಾಪಾಡಲು ಹಾಗೂ ರಾಬಿ ಬೆಳೆ ಹೆಚ್ಚಿಸುವುದಕ್ಕಾಗಿ ಕೃಷಿ ಯೋಜನೆಗೆ ಹೊಸದಾಗಿ 150 ಕೋಟಿ ರೂಪಾಯಿ ವೆಚ್ಚ ಮಾಡುವುದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು.
ಅನೇಕ ರಾಜ್ಯಗಳಲ್ಲಿ ಮುಂಗಾರು ಬೆಳೆ ವಿಫಲ ಹಾಗೂ ಅಗತ್ಯ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಸಮಸ್ಯೆಗಳ ಕುರಿತು ಚರ್ಚಿಸುವುದಕ್ಕಾಗಿ ಕೇಂದ್ರ ಸಚಿವ ಸಂಪುಟ ಬೆಳಿಗ್ಗೆ ಸಭೆ ಸೇರಿತ್ತು.