ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂಬ ಸುಳಿವಿನ ಮೇರೆಗೆ ಅಧಿಕಾರಿಗಳ ಮನೆ–ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಆಗಾಗ್ಗೆ ದಾಳಿ ಮಾಡುವುದುಂಟು. ಇದು, ಸ್ವಾಗತಾರ್ಹ. ಸರ್ಕಾರದ ವಿವಿಧ ಹುದ್ದೆಗಳಲ್ಲಿ ಇರುವವರು ತಮಗೆ ವಹಿಸಿದ ಕೆಲಸವನ್ನು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಜನರ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಒದಗಿಸಬೇಕೇ ವಿನಾ ಇವರೇ ದೊಡ್ಡ ಸಮಸ್ಯೆ ಆಗಬಾರದು. ಸ್ವಸ್ಥ ಸಮಾಜಕ್ಕೆ ಮಾದರಿಯಾಗಬೇಕಾದ ಆಧಿಕಾರಿಗಳು ಲಂಚದ ಕೂಪಕ್ಕೆ ಪದೇ ಪದೇ ಸಿಕ್ಕಿ ಬೀಳುತ್ತಿರುವುದರಿಂದ, ಸರ್ಕಾರಿ ಉದ್ಯೋಗದಲ್ಲಿರುವವರ ಬಗ್ಗೆ ಜನಸಾಮಾನ್ಯರಲ್ಲಿ ನಕಾರಾತ್ಮಕ ಭಾವನೆ ಮೂಡುತ್ತಿದೆ.