ಸಂಸದರಿಗೆ ಸಂಸತ್ ಕ್ಯಾಂಟೀನ್ನಲ್ಲಿ ನೀಡುವ ಸಬ್ಸಿಡಿಗೆ ಕೊಕ್ ನೀಡುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಇದು ಜನಮೆಚ್ಚುಗೆ ಗಳಿಸಿದೆ. ಸಾಮಾನ್ಯರಿಗೆ ಸಿಗದ ಸೌಲಭ್ಯ ಜನಪ್ರತಿನಿಧಿಗಳಿಗೆ ದೊರಕುವುದು ಸಮಾಜವಾದಿ ಸಿದ್ಧಾಂತದ ಆಡಳಿತದಲ್ಲಿ ಖಂಡನಾರ್ಹ. ಜನಪ್ರತಿನಿಧಿಗಳು ಎನ್ನುವ ಒಂದೇ ಕಾರಣದಿಂದ ಈ ರೀತಿ ಸೌಲಭ್ಯ ನೀಡುವ ಬಗೆಗೆ ಮೊದಲಿನಿಂದಲೂ ಸಾರ್ವಜನಿಕರಲ್ಲಿ ಆಕ್ರೋಶ ಇದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ದೇಶಸೇವೆ ಮಾಡುತ್ತಿರುತ್ತಾರೆ, ಅವರಿಗಿಲ್ಲದ ಸೌಲಭ್ಯವು ಜನಪ್ರತಿನಿಧಿಗಳಿಗೆ ಏಕೆ ಎನ್ನುವ ಪ್ರಶ್ನೆಯಲ್ಲಿ ಅರ್ಥವಿದೆ. ಸರ್ಕಾರ ನೀಡುವ ಸೌಲಭ್ಯದ ದೃಷ್ಟಿಯಲ್ಲಿ ಜನರು ಮತ್ತು ಜನಪ್ರತಿನಿಧಿಗಳು ಎನ್ನುವ ಭೇದ ಸಲ್ಲದು. ಟೋಲ್ ಪ್ಲಾಜಾದಲ್ಲೂ ಅವರು ಜನಸಾಮಾನ್ಯರಂತೆ ಶುಲ್ಕ ನೀಡಲಿ.