ಕೋವಿಡ್ ಎರಡನೇ ಅಲೆಯಿಂದ ತಂದೆ-ತಾಯಿ ಅಥವಾ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ₹ 5 ಸಾವಿರ ಮಾಸಿಕ ಪಿಂಚಣಿ ಯೋಜನೆಯನ್ನು ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಇಂತಹ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಪಡಿತರವನ್ನೂ ಒದಗಿಸಲು ನಿರ್ಧರಿಸಿದೆ. ಇದು ಶ್ಲಾಘನೀಯ ಕೆಲಸ. ಆಂಧ್ರಪ್ರದೇಶದ ತಿರುಪತಿಯ ಆಸ್ಪತ್ರೆಯೊಂದರಲ್ಲಿ ಸಮರ್ಪಕವಾಗಿ ಆಮ್ಲಜನಕ ಸಿಗದೆ ಸಾವಿಗೀಡಾದ 11 ಕೋವಿಡ್ ರೋಗಿಗಳ ಕುಟುಂಬಕ್ಕೆ ತಲಾ ₹ 10 ಲಕ್ಷ ಪರಿಹಾರ ಘೋಷಿಸಿದ ಅಲ್ಲಿನ ಸರ್ಕಾರದ ಕಾರ್ಯವೈಖರಿ, ಸೂತಕದ ಮನೆಗಳಲ್ಲಿ ಬದುಕು ಕಟ್ಟಿಕೊಳ್ಳುವ ಭರವಸೆ ಮೂಡಿಸಿದೆ. ಆದರೆ, ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಜೀವ ಕಳೆದುಕೊಂಡ ಕೋವಿಡ್ ರೋಗಿಗಳ ಕುಟುಂಬಗಳಿಗೆ ಎರಡು ವಾರ ಕಳೆದರೂ ನಮ್ಮ ಸರ್ಕಾರ ಪರಿಹಾರ ನೀಡದೇ ಇರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.