ರೈತ ಚಳವಳಿಯ ಕುರಿತು ಪ್ರಜಾವಾಣಿಯ ‘ಫ್ಯಾಕ್ಟ್ ಚೆಕ್’ ವಿಭಾಗದಲ್ಲಿ ಇತ್ತೀಚೆಗೆ ಪ್ರಸ್ತಾಪವಾದ ಸುಳ್ಳು ಸುದ್ದಿ ಕುರಿತ ಮಾಹಿತಿಯು ಮನಸ್ಸನ್ನು ತೀವ್ರವಾಗಿ ಕಲಕಿತು. ಮನುಷ್ಯರು ಇಷ್ಟು ಹೃದಯಹೀನರಾಗಿ, ಅಮಾನವೀಯವಾಗಿ ವರ್ತಿಸುತ್ತಾರೆ ಎಂದು ಕಲ್ಪಿಸಿಕೊಳ್ಳಲೂ ಅಸಾಧ್ಯ. ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಾ ಸಾವಿರಾರು ಕೃಷಿಕರು ಭಯಾನಕ ಚಳಿಯಲ್ಲಿ ಎರಡು ವಾರಗಳಿಂದ ದೆಹಲಿ ಗಡಿಯಲ್ಲಿ ಚಳವಳಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ನಾಲ್ಕು ವರ್ಷಗಳ ಹಿಂದೆ ಲಂಡನ್ನಲ್ಲಿ ಕೆಲವರು ಖಲಿಸ್ತಾನಕ್ಕೆ ಆಗ್ರಹಿಸಿ ಹೋರಾಡಿದಾಗ ನಡೆದ ಘಟನೆಯ ಚಿತ್ರವನ್ನು ಈಗ ನಡೆಯುತ್ತಿರುವ ಕೃಷಿಕರ ಚಳವಳಿಗೆ ಕೃತಕವಾಗಿ ಜೋಡಿಸಿ, ‘ಇದು ದೇಶದ್ರೋಹಕ್ಕೆ ಸಮ’ ಎಂಬ ಶೀರ್ಷಿಕೆಯೊಡನೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಘೋರ ಅಪರಾಧವಲ್ಲವೆ?