ಅರಣ್ಯದಲ್ಲಿನ ಅಪಾರ ಸಂಖ್ಯೆಯ ಮರಗಿಡಗಳು, ಪ್ರಾಣಿಪಕ್ಷಿಗಳು, ಹಲವಾರು ಚಿಕ್ಕಪುಟ್ಟ ಜೀವಪ್ರಭೇದಗಳು ಕೆಲವೇ ಕ್ಷಣಗಳಲ್ಲಿ ನಾಶವಾಗುವ ಸಂದರ್ಭಗಳಿರುತ್ತವೆ. ಬೆಂಕಿ ಬಿದ್ದಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಿಬ್ಬಂದಿಗೆ ಸೂಕ್ತ ತರಬೇತಿ ಇಲ್ಲದಿದ್ದಾಗಲೂ ದುರ್ಘಟನೆಗಳು ಘಟಿಸುತ್ತವೆ. ಹಿರಿಯ ಅಧಿಕಾರಿಗಳು ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನಿಯೋಜಿಸಿ, ಸೂಕ್ತ ನಿರ್ದೇಶನಗಳನ್ನು ಕೊಡಬೇಕು. ಬೆಂಕಿ ನಂದಿಸಲು ಆಧುನಿಕ ಸಲಕರಣೆಗಳನ್ನು ಪೂರೈಸಿ, ಅವುಗಳನ್ನು ಬಳಸುವ ಕೌಶಲ ತರಬೇತಿಯನ್ನು ನೀಡಬೇಕು. ಅಗ್ನಿಶಾಮಕ ಯಂತ್ರಗಳು ಕಾರ್ಯಾಚರಿಸಲಾಗದ ಸ್ಥಳಗಳಲ್ಲಿ ಹೆಲಿಕಾಪ್ಟರ್ಗಳನ್ನು ಉಪಯೋಗಿಸುವುದೊಳಿತು. ಹಾಗಾದಾಗ ನಮ್ಮ ಅಮೂಲ್ಯ ಕಾಡಿನ ಸಂಪತ್ತು, ಅದರೊಂದಿಗೆ ಹಸಿರು ಸೈನಿಕರು ಸುರಕ್ಷಿತವಾಗಿರುತ್ತಾರೆ.