ಉತ್ತರ ಕರ್ನಾಟಕದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಾ ಬರಲಾಗಿದೆ. ಬೆಳಗಾವಿ ಮಹಾನಗರದಲ್ಲಿ 300ಕ್ಕೂ ಅಧಿಕ ಸಾರ್ವಜನಿಕ ಆಚರಣಾ ಮಂಡಳಗಳಿದ್ದು ಈ ಸಲವೂ ಸಾರ್ವಜನಿಕವಾಗಿ ಉತ್ಸವ ಆಚರಿಸಲು ಮುಂದಾಗಿವೆ. ಆದರೆ ಇಂತಹ ಉತ್ಸವದಿಂದ ನಾಗರಿಕರು ಒಂದೆಡೆ ಸೇರುವ ಅನಿವಾರ್ಯ ಇರುತ್ತದೆ. ಹೀಗಾಗಿ, ಕೊರೊನಾ ಸೋಂಕಿನ ಇಂದಿನ ಸ್ಥಿತಿಯಲ್ಲಿ ಗಣೇಶನ ಹಬ್ಬವನ್ನು ಖಾಸಗಿಯಾಗಿ ತಮ್ಮ ಮನೆಗಳಲ್ಲಿ ಆಚರಿಸುವುದು ಒಳ್ಳೆಯದು. ಆರ್ಥಿಕವಾಗಿಯೂ ನಾಗರಿಕರು ಸಂಕಷ್ಟದಲ್ಲಿರುವಾಗ ಹಬ್ಬದ ಹೆಸರಿನಲ್ಲಿ ಮತ್ತಿಷ್ಟು ಹೊರೆ ಬೇಡ. ಈ ಉತ್ಸವವನ್ನು ಕೇವಲ ಭಾವನಾತ್ಮಕವಾಗಿ ಪರಿಗಣಿಸದೆ, ನಾಗರಿಕರ ಆರೋಗ್ಯವನ್ನು ಗಮನದಲ್ಲಿಟ್ಟು ವಿವೇಚನೆಯಿಂದ ಯೋಗ್ಯ ನಿರ್ಣಯ ಕೈಗೊಳ್ಳಬೇಕಿದೆ.