ಗ್ರಾಮೀಣ ಭಾಗದ ಅವಶ್ಯಕತೆಗಳನ್ನು ಮನಗಂಡ ಉನ್ನತ ಚಿಂತನೆಯಿಂದ ಗ್ರಾಮ ಪಂಚಾಯಿತಿಗೆ ವಿಕೇಂದ್ರೀಕರಣಗೊಂಡ ಅಧಿಕಾರವು ನಂತರದ ದಿನಗಳಲ್ಲಿ ಹಾದಿ ತಪ್ಪಿದ್ದು ನಿಚ್ಚಳ. ಜಾತಿ, ಲಿಂಗ, ಪಕ್ಷ, ವಿದ್ಯೆ ಎಂಬ ಯಾವ ಭೇದವೂ ಇಲ್ಲದಂತೆ ಇಲ್ಲಿ ಲಂಚ ಆವರಿಸಿದೆ. ಸಿಕ್ಕಿಬಿದ್ದರೂ ಅವರ ಜಾತಿ, ಅವರ ಪಕ್ಷ ರಾಜಕಾರಣ ಅವರಿಗೆ ಸುರಕ್ಷಾ ಕವಚ ಎಂಬಂತೆ ನಿರ್ಲಜ್ಜವಾಗಿ ಕೆಲಸ ಮಾಡುತ್ತಿದೆ. ಮೀಸಲಾತಿಯಲ್ಲಿ ಅಧಿಕಾರ ಹಿಡಿದರೂ ಕಡೇಪಕ್ಷ ತಮ್ಮವೇ ಸಮುದಾಯಗಳ ಕೆಲಸಗಳಿಗೂ ಲಂಚದಿಂದ ರಿಯಾಯಿತಿ ಇರದಷ್ಟು ಹೊಲಸೆದ್ದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇದ್ದ ಹಣಕಾಸು ನಿರ್ವಹಣೆಯ ಅಧಿಕಾರವನ್ನು ಸರ್ಕಾರ ಈಗ ಮೊಟಕುಗೊಳಿಸಲು ಮುಂದಾಗಿರುವುದರಿಂದ ಅಧಿಕಾರವು ಪುನಃ ಕೇಂದ್ರೀಕೃತವಾಗಲಿದೆ ಮತ್ತು ಲಂಚ ಇನ್ನೊಂದು ರೂಪ ಪಡೆಯಲಿದೆ ಎಂದು ಶಿವಕುಮಾರ್ ಯರಗಟ್ಟಿ ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಅ. 7). ಇದು ಸಮಂಜಸ, ಆದರೆ ಸಂಪೂರ್ಣ ಸರಿ ಎನಿಸುವುದಿಲ್ಲ.