‘ವೇದವ್ಯಾಸರ ಶಿವಪುರಾಣಸಾರ’ ಎಂಬ ಶಿರೋನಾಮೆಯಡಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಬರೆದಿರುವ ‘ಪತಿಯ ಆಜ್ಞೆ ಪಾಲಿಸಬೇಕು’ ಎಂಬ ಶೀರ್ಷಿಕೆಯನ್ನುಳ್ಳ ಬರಹ (ಪ್ರ.ವಾ., ನ. 28) ನಖಶಿಖಾಂತ ಖಂಡನಾರ್ಹ. ಸಂಪೂರ್ಣ ಮಹಿಳಾ ವಿರೋಧಿಯಾಗಿದ್ದು, ವ್ಯಕ್ತಿ ಘನತೆಗೆ ಕುಂದುಂಟು ಮಾಡುವಂತಿರುವ ಈ ಲೇಖನವು ‘ಶಿವಪುರಾಣದ ಸಾರವೇ ಆಗಿದೆ’ ಎಂದು ಸ್ವಾಮೀಜಿ ಬರೆದಿದ್ದಾರೆ. ಅದಕ್ಕೆಂದೇ 12ನೇ ಶತಮಾನದಲ್ಲಿ ಅಲ್ಲಮಪ್ರಭು ‘ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ, ಭಕ್ತಿ ಎಂಬುದು ತೋರಿ ಉಂಬುವ ಲಾಭ, ಗುಹೇಶ್ವರನೆಂಬುದು ಮೀರಿದ ಘನವು’ ಎಂದು ಸನಾತನ ಪಠ್ಯಗಳನ್ನು ಉಗ್ರವಾಗಿ ಖಂಡಿಸಿದ್ದಾನೆ. ಕಟ್ಟುಕತೆ ಮತ್ತು ತೋರಿಕೆಯ ಆದರ್ಶಗಳಿಂದ ತುಂಬಿದ ವೇದಾಗಮಗಳು ಪ್ರಾಯೋಗಿಕವಾಗಿ ಅದೆಷ್ಟು ಜೀವವಿರೋಧಿ ಮತ್ತು ಅವೈಜ್ಞಾನಿಕವಾಗಿದ್ದವು ಎಂಬುದನ್ನು ಕಂಡುಕೊಂಡಿದ್ದ ಶಿವಶರಣರು, ವೈದಿಕ ದರ್ಶನಗಳ ಪೊಳ್ಳುತನವನ್ನು ಬಯಲಿಗೆಳೆದು, ಅವು ಪೋಷಿಸುವ ಕರ್ಮಸಿದ್ಧಾಂತವು ಅಪ್ಪಟ ಸುಳ್ಳು ಎಂದು ಎತ್ತಿ ತೋರಿಸಿದ್ದಾರೆ.