ನಮ್ಮಲ್ಲಿಂದ ದುಡಿದುಕೊಂಡು ಹೋಗಿ ತಮ್ಮ ತಮ್ಮ ಊರುಗಳಲ್ಲಿ ಅರಮನೆ ಕಟ್ಟಿಸುವಷ್ಟು ಶಕ್ತರಲ್ಲ ಈ ಕಾರ್ಮಿಕರು. ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದವರು. ಅವರು ಊರು ದಾಟಲು ಅನುವಾಗುವುದು ನಂತರದ ವಿಷಯ. ಮೊದಲು ಅವರನ್ನು ಸೌಜನ್ಯದಿಂದ ಮನುಷ್ಯರಂತೆ ನಡೆಸಿಕೊಳ್ಳುವುದನ್ನು ಪೊಲೀಸರು ಕಲಿಯಬೇಕಿದೆ. ಲಾಠಿ ಬದಲು, ಎರಡು ಒಳ್ಳೆಯ ಮಾತು ಆಡಿದರೆ, ತಮ್ಮ ಊರು ಸೇರಿದವರು ಕರ್ನಾಟಕದ ನೆಲ, ನುಡಿಯನ್ನು ನೆನೆದಾರು, ಮುಂದೆ ತಿರುಗಿ ಬಂದಾರು. ಇಲ್ಲದಿದ್ದರೆ, ನಾವು ಮೃದುಭಾಷಿಕರಲ್ಲ, ಕಲ್ಲು ಮನಸ್ಸಿನವರು ಎಂಬ ಸಂದೇಶವನ್ನು ರವಾನಿಸಿದಂತೆ ಆಗುತ್ತದೆ.